ಬಾಬಾನಗರ ಹಾಗೂ ಬಿಜ್ಜರಗಿ ಗ್ರಾಪಂಗೆ ಭೇಟಿ ನೀಡಿದ ಜಿಪಂ ಸಿಇಒ ರಿಷಿ ಆನಂದ ಸೂಚನೆ
ವಿಜಯಪುರ: ತಿಕೋಟಾ ತಾಲೂಕಿನ ಬಾಬಾನಗರ ಮತ್ತು ಬಿಜ್ಜರಗಿ ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಶನಿವಾರ ಭೇಟಿ ನೀಡಿ ವಿವಿಧ ಯೋಜನೆಗಳ ಹಲವು ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಬಾಬಾನಗರ ಹಾಗೂ ಬಿಜ್ಜರಗಿ ಗ್ರಾಮ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ, ಗ್ರಂಥಾಲಯ, ಗ್ರಾಮ ಪಂಚಾಯತಿ ಕಾರ್ಯಾಲಯ, ಪಂಚಾಯತಿ ವ್ಯಾಪ್ತಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಹಾಗೂ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಸಮಗ್ರ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಾಬಾನಗರ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಆಟದ ಮೈದಾನ, ಶಾಲಾ ಕಂಪೌಂಡ, ಹೈಟೆಕ್ ಶೌಚಾಲಯ, ಸಸಿಗಳ ನಾಟಿ, ಅಡುಗೆ ಕೊಠಡಿ ವೀಕ್ಷಿಸಿದರು.
ಶಾಲೆಯಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ, ಅತ್ಯಂತ ಕಾಳಜಿ ಪೂರ್ವಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ, ಅವರ ಶೈಕ್ಷಣಿಕ ಸಮಸ್ಯೆಗಳನ್ನು ಆಲಿಸಿ, ಶೈಕ್ಷಣಿಕ ಸಲಹೆ ನೀಡಿದರು. ಗ್ರಾಮ ಪಂಚಾಯತಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಎನ್.ಆರ್.ಎಲ್.ಎಮ್ ಶೆಡ್ ಕಾಮಗಾರಿ ವೀಕ್ಷಣೆ ಮಾಡಿ, ಗ್ರಾಮ ಪಂಚಾಯತಿ ಮತ್ತು ಶಾಲಾ ಆವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಉದ್ಯಾನವನ ನಿರ್ಮಿಸುವಂತೆ ಹಾಗೂ ಮಳೆ ನೀರು ಕೋಯ್ಲು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಹಾಗೂ ಎಲ್ಲ ಯೋಜನೆಗಳ ಮಾಹಿತಿ ಫಲಕ ಅಳವಡಿವಂತೆ ಪಿಡಿಓ ರೇಣುಕಾ ಸೋಲಾಪುರ ಅವರಿಗೆ ಸೂಚಿಸಿದರು.
ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ, ಯುವಕರೊಡನೆ, ಹಿರಿಯ ನಾಗರಿಕರೊಡನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಬಿಜ್ಜರಗಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಹೊಸ ಗ್ರಾಮ ಪಂಚಾಯತಿ ಕಟ್ಟಡ, ಸೋಲಾರ ವ್ಯವಸ್ಥೆ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆ ಪರಿಶೀಲಿಸಿದರು. ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಅಳವಡಿಸಲು, ಗ್ರಂಥಾಲಯದಲ್ಲಿ ಮಕ್ಕಳ ಪುಸ್ತಕಗಳನ್ನು ಮಕ್ಕಳಿಗೆ ಕೈಗಟುಕುವ ಸ್ಥಳದಲ್ಲಿ ಇರಿಸಲು ತಿಳಿಸಿದರು. ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಆಟದ ಮೈದಾನ, ಕಟ್ಟಡ ಹಾಗೂ ಶಾಲಾ ಕೈ ತೋಟ ವೀಕ್ಷಣೆ ಮಾಡಿದರು.
ನಂತರ ಶಾಲಾ ಕೈತೋಟವನ್ನು ಅಭಿವೃದ್ಧಿಪಡಿಸಲು ಸ್ಥಳದಲ್ಲಿದ್ದ ಪಿಡಿಓ ಜಯಲಕ್ಷ್ಮಿ ದಶವಂತ ಅವರಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಮೇಟ್ರಿಕ ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿ, ತಾಲೂಕು ಪಂಚಾಯತಿ ಅನುದಾನದಲ್ಲಿ ಕೈಗೊಂಡ ಗ್ರಂಥಾಲಯ ಹಾಗೂ ನರೇಗಾ ಯೋಜನೆಯಡಿಯ ಕೈತೋಟ ವೀಕ್ಷಿಸಿದರು.
ನರೇಗಾ ಯೋಜನೆಯ ಕೆರೆ ಅಭಿವೃಧಿ ಕಾಮಗಾರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಕಲಚೇತನ ಕೂಲಿಕಾರ್ಮಿಕರೊಡನೆ ಸಂವಾದ ಮಾಡಿದರು.
ನರೇಗಾ ಯೋಜನೆಯಡಿ ಇನ್ನೂ ಹೆಚ್ಚಿಗೆ ಕೂಲಿಕಾರ್ಮಿಕರನ್ನು ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪುರ, ಸಹಾಯಕ ನಿರ್ದೇಶಕರಾದ ಶ್ರೀಮತಿ ಶೋಭಕ್ಕ ಶೀಳಿನ, ಬಿಜ್ಜರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಲಕ್ಷ್ಮಿಬಾಯಿ ಕ್ಯಾತನ, ಬಾಬಾನಗರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸಾಹಿರಾಬಾನು ಕರಿಂಸಾಬ ಏಳಾಪುರ, ತಾಂತ್ರಿಕ ಸಂಯೋಜಕರಾದ ಪರಶುರಾಮ ಶಹಾಪುರ, ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

