ಇನ್ನು ಮುಂದೆ ಕಾರ್ಯಕ್ರಮಗಳಲ್ಲಿ ಸನ್ಮಾನ ಸ್ವೀಕರಿಸದಿರಲು ಸಚಿವ ಎಂ.ಬಿ.ಪಾಟೀಲ ನಿರ್ಧಾರ
ವಿಜಯಪುರ: ಇನ್ನು ಮುಂದೆ ಕಾರ್ಯಕ್ರಮಗಳಲ್ಲಿ ಹಾರ, ಶಾಲು, ಸನ್ಮಾನ ಬೇಡ. ಇದಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ಸಹಾಯ ಮಾಡಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾಲೂಕಿನ ಕಂಬಾಗಿ ಮತ್ತು ಬೋಳಚಿಕ್ಕಲಕಿ ಗ್ರಾಮಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಂಬಾಗಿಯಲ್ಲಿ ಪಿ. ಎಂ. ಶ್ರೀ ಸರಕಾರಿ ಪ್ರಾಥಮಿಕ ಶಾಲೆ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸನ್ಮಾನ ಮಾಡಿಕೊಳ್ಳುತ್ತಿರುವುದು ಇದು ಕೊನೆಯ ಕಾರ್ಯಕ್ರಮ. ಇನ್ನು ಮುಂದೆ ಸನ್ಮಾನ ಬೇಡ ಎಂದು ಡಿಸಿ ಮೂಲಕ ಆದೇಶ ಮಾಡಿಸುವೆ. ಸನ್ಮಾನದ ಹಾರ, ಶಾಲು, ತುರಾಯಿ ಹಣವನ್ನು ಬಡವರಿಗೆ ಸಹಾಯ ಮಾಡಿ. ಸಿದ್ದೇಶ್ವರ ಸ್ವಾಮೀಜಿ ಎಂದೂ ಹಾರ ಹಾಕಿಸಿಕೊಳ್ಳಲಿಲ್ಲ. ಪಾದಗಳಿಗೆ ನಮಸ್ಕಾರ ಮಾಡಿಸಿಕೊಳ್ಳಲಿಲ್ಲ. ಅವರು ನಮಗೆ ಆದರ್ಶರಾಗಿದ್ದಾರೆ. ಸನ್ಮಾನ ಕಾರ್ಯಕ್ರಮದಿಂದಗಾಗಿ ಸಮಯವೂ ವ್ಯಯವಾಗುತ್ತದೆ. ಅದರ ಬದಲು ಒಂದು ಪುಸ್ತಕ ಕೊಟ್ಟರೆ ಸಾಕು ಎಂದು ಹೇಳಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ನಾವು 3000 ಗುಡಿ, ಗುಂಡಾರಗಳಿಗೆ ಅನುದಾನ ನೀಡಿದ್ದೇವೆ. ಇದೇ ಹಣವನ್ನು ಬಳಸಿ ಇಡೀ ಮತಕ್ಷೇತ್ರದಲ್ಲಿರುವ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬಹುದಾಗಿತ್ತು. ಶಾಲೆಯೇ ದೇವಸ್ಥಾನ, ಮಕ್ಕಳೇ ದೇವರು ಎಂದು ಬರಿ ಬಾಯಿ ಮಾತಿನಲ್ಲಿ ಹೇಳಿದರೆ ಆಗುವುದಿಲ್ಲ. ಬೆಂಗಳೂರಿನಲ್ಲಿರುವ ಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿ ನಮ್ಮ ಮತಕ್ಷೇತ್ರದಲ್ಲಿರುವಯೂ ಸರಕಾರಿ ಶಾಲೆಗಳಲ್ಲಿ ಸುಮಾರು ರೂ. 100 ಕೋ. ಸಿಎಸ್ಆರ್ ಫಂಡ್ ನ್ನು ಬಳಸಿ ಶಾಲಾ ಕೊಠಡಿಗಳು, ಶೌಚಾಲಯ, ಕುಡಿಯಲು ನೀರಿನ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್, ವಾಚನಾಲಯ, ಕ್ರೀಡಾ ಸಾಮಗ್ರಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಬಳಸಲಾಗುವುದು. ಇದರಿಂದ ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಪಾಠ ಮಾಡುವ ಶಿಕ್ಷಕರೂ ಕೂಡ ಕಾಲಕ್ಕೆ ತಕ್ಕಂತೆ ಜ್ಞಾನಾರ್ಜನೆ ಮಾಡಬೇಕು. ಅಂತರ್ಜಾಲದ ಸದುಪಯೋಗ ಪಡಿಸಿಕೊಂಡು ಅಪಡೇಟ್ ಆಗಬೇಕು. ಈಗ ಕೃತಕ ಬುದ್ದಿಮತ್ತೆ ಕಾಲ ಪ್ರಾರಂಭವಾಗಿರುವುದರಿಂದ ಶಿಕ್ಷಕರು ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ನಿಮ್ಮ ಮಕ್ಕಳಿಗೂ ಒಳ್ಳೆಯದಾಗಲಿದೆ.ಗ್ರಾಮದ ಹಿರಿಯರು, ಯುವಕರು ರಾಜಕಾರಣ ಮತ್ತು ಜಾತಿಯನ್ನು ಕಂಪೌಂಡ್ ಹೊರಗಿಡಬೇಕು. ರಾಜಕೀಯ ಪ್ರತಿಷ್ಠೆ ಬದಿಗಿಡಬೇಕು. ಅರಮನೆಯಲ್ಲಿರುವ ಶಾಲೆಗಿಂತ, ಗುಡಿಸಲಿನಲ್ಲಿ ಉತ್ತಮ ಶಿಕ್ಷಕರಿಂದ ಕೂಡಿರುವ ಬೋಧನೆ ಅಗತ್ಯವಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷ ಹಸನಸಾಬ ಹಳಬರ, ಗ್ರಾ. ಪಂ. ಅಧ್ಯಕ್ಷೆ ಕವಿತಾ ಮಲ್ಲಯ್ಯ ಮಠಪತಿ, ಮುಖಂಡರಾದ ಈರಗೊಂಡ ಬಿರಾದಾರ, ಅಪ್ಪುಗೌಡ ಪಾಟೀಲ ಶೇಗುಣಸಿ, ಕೆ. ಎಚ್. ಮುಂಬಾರೆಡ್ಡಿ, ಮುತ್ತಪ್ಪ ಶಿವಣ್ಣವರ, ಪ್ರಕಾಶ ಸೊನ್ನದ, ಮಹಾದೇವ ಮದರಖಂಡಿ, ರಮೇಶ ಬಡ್ರಿ, ಶೇಖಪ್ಪ ಚಿಕ್ಕಗಲಗಲಿ, ರಂಗನಗೌಡ ಬಿರಾದಾರ, ಮಲ್ಲು ದಳವಾಯಿ, ಡಿಡಿಪಿಐ ಎನ್. ಎಚ್. ನಾಗೂರ, ವಿಜಯಪುರ ಗ್ರಾಮೀಣ ಬಿಇಓ ಪ್ರಮೋದಿನಿ ಬಳೂಲಮಟ್ಟಿ, ಮಲ್ಲಿಕಾರ್ಜುನ ಅಂಗಡಿ, ಮಾರುತಿ ಕೊಪ್ಪದ, ಉಮೇಶ ಮಲ್ಲಣ್ಣವರ ಮುಂತಾದವರು ಉಪಸ್ಥಿತರಿದ್ದರು.
ಬೋಳಚಿಕ್ಕಲಕಿ ಕಾರ್ಯಕ್ರಮ
ಬೋಳಚಿಕ್ಕಲಕಿ ಗ್ರಾಮದಲ್ಲಿ ಶ್ರೀ ಲಾಲಸಾಬ ದೇವರ ಕಟ್ಟಡದ ಉದ್ಘಾಟನೆ ಸಮಾರಂಭ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಚವಡಿ ಕಟ್ಟಡ ಭೂಮಿಪೂಜೆ ನೆರವೇರಿಸಿದ ಮಾತನಾಡಿದ ಸಚಿವರು, ಇಲ್ಲಿರುವ ಲಾಲಸಾಬ ಮತ್ತು ಮಲ್ಲಿಕಾರ್ಜುನ ದೇವಸ್ಥಾನಗಳು ಭಾವೈಕ್ಯತೆಗೆ ಸಾಕ್ಷಿಯಾಗಿವೆ. ನಮ್ಮ ಧರ್ಮವನ್ನು ಪ್ರೀತಿಸಬೇಕು. ಬೇರೆಯವರ ಧರ್ಮವನ್ನು ಗೌರವಿಸಬೇಕು. ಇದು ಭಾರತೀಯ ಸಂಸ್ಕೃತಿ. ಬೋಳಚಿಕ್ಕಲಕಿಯಲ್ಲಿ ಈ ಭಾವೈಕ್ಯತೆ ಇದೆ ಎಂದು ಹೇಳಿದರು.
ಕೈಗಾರಿಕೆ ಸಚಿವನಾಗಿ ಕಾರ್ಖಾನೆ ಸ್ಥಾಪಿಸಿ ಉದ್ಯೋಗ ಸೃಷ್ಢಿಗೆ ಆದ್ಯತೆ ನೀಡುತ್ತಿದ್ದೇನೆ. ನಮ್ಮ ಗ್ರಾಮಗಳ ಶಾಲೆ, ಕೆರೆಗಳ ಅಭಿವೃದ್ಧಿಗೆ ಸಿಎಸ್ಆರ್ ಪಂಡ್ ನ ರೂ.100 ಕೋ. ಅನುದಾನ ಬಳಸಲಾಗುವುದು. ನೀರಾವರಿ ಸಚಿವನಾಗಿ ಬರಪೀಡಿತ ಹಣೆ ಪಟ್ಟಿ ತೊಲಗಿಸಿಲು ಶ್ರಮಿಸಿದ್ದೇನೆ. ಈಗ ಅಂತರ್ಜಲ ಕೂಡ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಗೆ ನೀರಾವರಿಗಾಗಿ ರೂ. 14000 ಕೋ. ಖರ್ಚು ಮಾಡಿದ್ದೇನೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಣಣ, ನೂರು, ವೃಕ್ಷ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು. ಮನೆಯಲ್ಲಿ ಮಹಿಳೆಯರು ಸೇರಿದಂತೆ ಎಲ್ಲರ ಮರ್ಯಾದೆ ಮುಖ್ಯವಾಗಿದೆ ಎಂದು ಹೇಳಿದರು.
ಗ್ರಾಮದ ಮುಖಂಡ ಸಿದ್ದಪ್ಪ ಮ. ಸಜ್ಜನ ಮಾತನಾಡಿ, ನಮ್ಮ ಭಾಗದಲ್ಲಿ ನೀರಾವರಿ ಯೋಜನೆಗಳ ಮೂಲಕ ನಮಗೆಲ್ಲ ನೀರು ನೀಡಿದ ಎಂಬಿಪಿ ದೇವರ ಸಮಾನರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಮುಖಂಡರಾದ ಸದಾಶಿವ ಸಜ್ಜನ, ಶಿವಾಜಿ ಮಾದರ, ಮುತ್ತಪ್ಪ ವಾಣಿ, ಸಿದ್ದು ತೋಟದ ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ದೇವರನ್ನು ಕಾಣುವ ಸಚಿವ ಎಂ. ಬಿ. ಪಾಟೀಲ ಅವರು ಈಗ ತಮ್ಮ ಅನುದಾನವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ನೀಡುತ್ತಿರುವುದು ಮಕ್ಕಳ ಪಾಲಿಗೆ ವರದಾನವಾಗಿದೆ. ಇದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.”
– ಸಂಗಮೇಶ ಬಬಲೇಶ್ವರ,
ಅಧ್ಯಕ್ಷರು, ಬಾಲವಿಕಾಸ ಅಕಾಡೆಮಿ

