ಜಲಸಂಪನ್ಮೂಲ ಸಚಿವ & ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಚಿವ ಶಿವಾನಂದ ಪಾಟೀಲ ಪತ್ರ
ಆಲಮಟ್ಟಿ: ಇಲ್ಲಿಯ ಆಲಮಟ್ಟಿ ಜಲಾಶಯದ ಹೊರಹರಿವು ವ್ಯರ್ಥವಾಗುವುದನ್ನು ತಪ್ಪಿಸಿ ಸದ್ಬಳಕೆ ಮಾಡಿಕೊಳ್ಳಲು ವಿವಿಧ ನೀರಾವರಿ ಯೋಜನೆಗಳ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರು ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಮನವಿ ಮಾಡಿದ್ದಾರೆ.
ಆಲಮಟ್ಟಿ ಜಲಾಶಯದಲ್ಲಿ ೬೭ ಟಿಎಂಸಿ ಬಳಕೆಗೆ ಲಭ್ಯ ಇರುವಷ್ಟು ನೀರು ಸಂಗ್ರಹಣೆಯಾಗಿದ್ದು, ಜಲಾಶಯ ಪ್ರತಿಶತ ೬೩ರಷ್ಟು ಭರ್ತಿಯಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಪ್ರತಿನಿತ್ಯ ಮಳೆಯಾಗುತ್ತಿದ್ದು, ಒಳಹರಿವಿನ ಪ್ರಮಾಣ ಎಪ್ಪತ್ತು ಸಾವಿರ ಕ್ಯೂಸೆಕ್ಸ್ ಇದೆ. ಬರುವ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗಿ ಹೆಚ್ಚುವರಿ ನೀರು ಜಲಾಶಯದ ಹೊರ ಹರಿವಿನಿಂದ ನೆರೆಯ ಆಂಧ್ರಪ್ರದೇಶಕ್ಕೆ ಹೋಗಿ ಮುಂದೆ ಸಮುದ್ರ ಸೇರಿ ವ್ಯರ್ಥವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ೧೦ ರಿಂದ ೧೫ ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಈಗ ರೈತರು ಬೆಳೆ ನಾಶವಾಗುವ ಭೀತಿಯಲ್ಲಿದ್ದಾರೆ. ಹೀಗಾಗಿ ಆಲಮಟ್ಟಿ ಜಲಾಶಯದಿಂದ ಮುಳವಾಡ ಏತ ನೀರಾವರಿ ಯೋಜನೆ, ಚಿಮ್ಮಲಗಿ ಏತ ನೀರಾವರಿ ಯೋಜನೆ ಸೇರಿದಂತೆ ಇತರ ಯೋಜನೆಗಳ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಸಚಿವರು ಮನವಿ ಮಾಡಿದ್ದಾರೆ.
ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕಾಲುವೆಗಳ ಮೂಲಕ ಕೆರೆಗಳಗೆ ಹರಿಸಿದರೆ ರೈತರ ಜಮೀನುಗಳಲ್ಲಿ ಇರುವ ಕೊಳವೆ ಬಾವಿಗಳು ಹಾಗೂ ತೆರೆದ ಬಾವಿಗಳ ಅಂತರ್ಜಲಮಟ್ಟ ಸುಧಾರಣೆಯಾಗಿ ರೈತರಿಗೆ ಅನುಕೂಲವಾಗಲಿದೆ. ಈ ವಾರದಲ್ಲಿ ಬೆಳೆಗಳಿಗೆ ನೀರಿನ ಅವಶ್ಯಕತೆ ತುಂಬಾ ಇರುವ ಕಾರಣ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ್ನು ಕೆರೆಗಳಿಗೆ ಹರಿಸುವುದು ಸೂಕ್ತ ಎಂದು ಶಿವಾನಂದ ಪಾಟೀಲ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಮತ್ತು ಖುಷ್ಕಿ ಬೇಸಾಯದಲ್ಲಿ ೭.೨೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ ೭.೦೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ (ಪ್ರತಿಶತ ೮೫) ಬಿತ್ತನೆ ಯಾಗಿದೆ. ಪ್ರತಿಶತ ೧೫ರಷ್ಟು ಬಿತ್ತನೆ ಕಾರ್ಯ ಬಾಕಿ ಇದ್ದು, ಮೆಕ್ಕೆಜೋಳ, ಸಜ್ಜೆ, ನವಣೆ, ಉದ್ದು, ಹೆಸರು, ತೊಗರಿ, ಶೇಂಗಾ ಮುಂತಾದ ಬೆಳೆಗಳ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಜೂನ್ ಮೊದಲ ವಾರ ಮಳೆಯಾಗಿರುವುದರಿಂದ ಬಿತ್ತನೆ ಕಾರ್ಯ ಚುರುಕುಕೊಂಡಿದೆ. ಕಳೆದ ವಾರದಲ್ಲಿಯೂ ಮಳೆಯಾಗಿರುವುದರಿಂದ ಬಿತ್ತನೆ ಚುರುಕಿನಿಂದ ಸಾಗಿದೆ. ಮೊದಲ ವಾರ ಬಿತ್ತನೆಯಾದ ಬೆಳೆ ಈಗ ಬೆಳವಣಿಗೆ ಹಂತದಲ್ಲಿದ್ದು, ಮೂರನೇ ವಾರದಲ್ಲಿ ಕೈಗೊಂಡ ಬಿತ್ತನೆ ಮೊಳಕೆ ಹಂತದಲ್ಲಿದೆ ಎಂದು ಅವರು ವಿವರಿಸಿದ್ದಾರೆ.
ಸಚಿವ ಪಾಟೀಲರ ಪತ್ರಕ್ಕೆ ಸ್ಪಂದಿಸಿರುವ ಕೆಬಿಜೆಎನ್ನೆಲ್ ಅಧಿಕಾರಿಗಳು
ಆಲಮಟ್ಟಿ ಜಲಾಶಯ ಭರ್ತಿಯತ್ತ ಸಾಗಿದ್ದರಿಂದ, ಸಚಿವ ಶಿವಾನಂದ ಪಾಟೀಲರ ಪತ್ರಕ್ಕೆ ಸ್ಪಂದಿಸಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶದ ಯಾವ ಯೋಜನೆಗೆ ನೀರಿನ ಅಗತ್ಯವಿದೆಯೋ ಆ ಭಾಗದ ಕಾಲುವೆಗಳಿಗೆ ನೀರು ಹರಿಸಲು ಅನುಮತಿ ನೀಡಿದ್ದಾರೆ.
ಎಲ್ಲೆಲ್ಲಿ ಕಾಲುವೆಗೆ ನೀರು ಹರಿಸಲು ರೈತರಿಂದ ಬೇಡಿಕೆ ಬರುತ್ತದೆಯೋ ಅಲ್ಲಿ ಶುಕ್ರವಾರದಿಂದಲೇ ನೀರು ಹರಿಸಲು ಸೂಚಿಸಲಾಗಿದೆ ಎಂದು ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಮುಳವಾಡ ಏತ ನೀರಾವರಿ ಯೋಜನೆಯ ಮೊದಲ ಹಂತದ ಬಳೂತಿ ಗ್ರಾಮದ ಜಾಕವೆಲ್ ನಿಂದ ಕಾಲುವೆಗೆ ನೀರು ಹರಿಸಲು ಶುಕ್ರವಾರ ಸಂಜೆಯಿಂದ ಆರಂಭಿಸಲಾಯಿತು.
ಮೊದಲ ಹಂತದಲ್ಲಿ ಬಳೂತಿ ಜಾಕವೆಕ್ ನಲ್ಲಿ ನೀರೆತ್ತಿ, ಎರಡನೇ ಹಂತದಲ್ಲಿ ಹನುಮಾಪುರದ ಜಾಕವೆಲ್ ಮೂಲಕ ನೀರೆತ್ತಿ ಮುಳವಾಡ ಪೂರ್ವ ಮತ್ತು ಪಶ್ಚಿಮ ಕಾಲುವೆಗಳ ಮೂಲಕ ಬಸವನಬಾಗೇವಾಡಿ, ವಿಜಯಪುರ, ಜಮಖಂಡಿ ಭಾಗದ ಜಮೀನಿಗೆ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

