ಶ್ರವಣ ದೋಷಯುಳ್ಳ ವಿದ್ಯಾರ್ಥಿಗಳಿಗೆ ಶ್ರವಣೋಪಕರಣಗಳನ್ನು ವಿತರಿಸಿದ ಜಿ.ಪಂ. ಸಿಇಓ ರಿಷಿ ಆನಂದ ಕಿವಿಮಾತು
ವಿಜಯಪುರ: ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಕುಗ್ಗದೇ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಗುರಿಯೆಡೆಗೆ ಸಾಗಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಹೇಳಿದರು.
ಜಿಲ್ಲಾ ಪಂಚಾಯತಿ, ಶಿಕ್ಷಣ ಇಲಾಖೆ ಹಾಗೂ ವಿ ಹೀಯರ್ ಸಂಸ್ಥೆ ಹಾಗೂ ಯಸ್ ಬ್ಯಾಂಕ್ ಸಹಯೋಗದೊಂದಿಗೆ ಜುಲೈ ೧೨ ರಂದು ನಗರದ ಸರಕಾರಿ ಬಾಲಕಿಯರ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಭವನದಲ್ಲಿ ಆಯೋಜಿಸಲಾದ ಶ್ರವಣ ದೋಷಯುಳ್ಳ ವಿದ್ಯಾರ್ಥಿಗಳಿಗೆ ಶ್ರವಣೋಪಕರಣಗಳನ್ನು ವಿತರಿಸಿ ಮಾತನಾಡಿದ ಅವರು, ಒಂದು ವಿಶೇಷವಾದ ಶಕ್ತಿ ನಮ್ಮಲ್ಲಿದೆ. ಅದನ್ನು ನಾವು ಗುರುತಿಸಿಕೊಂಡು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಕೆಲವರಿಗೆ ಚಿತ್ರಕಲೆಯಲ್ಲಿ ವಿಶೇಷ ಜ್ಞಾನ, ಇನ್ನೂ ಕೆಲವು ವಿದ್ಯಾರ್ಥಿಗಳು ಆಟೋಟಗಳಲ್ಲಿ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಇಂತಹ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯವಾಗಿದೆ. ಗುರಿಯೊಂದಿಗೆ ನಿರಂತರ ಪ್ರಯತ್ನವೂ ನಿಮ್ಮದಾಗಿರಬೇಕು. ಗುರಿ ತಲುಪಲು ನಿರಂತರ ಪ್ರಯತ್ನ ಹಾಗೂ ಶ್ರಮ ಇರಬೇಕು. ಅಂದಾಗ ಮಾತ್ರ ನೀವು ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಕ್ಕಳ ಸರ್ವತೋಮುಖ ಅಭಿವೃದ್ದಿಯಲ್ಲಿ ಶಿಕ್ಷಕರ ಪೋಷಕರ ಪಾತ್ರವೂ ಬಹು ಮುಖ್ಯವಾಗಿದೆ. ಸರಕಾರದೊಂದಿಗೆ ಸಂಘ-ಸಂಸ್ಥೆಗಳೂ ಸಹ ಸಮಾಜಮುಖಿ ಕೆಲಸದಲ್ಲಿ ಕೈಜೋಡಿಸಿದ್ದು ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಡಿ ತಾಲೂಕಿನ ೧೭ ವಿದ್ಯಾರ್ಥಿಗಳು, ಸಿಂದಗಿ ತಾಲೂಕಿನ ೧೮ ವಿದ್ಯಾರ್ಥಿಗಳು ಹಾಗೂ ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದ ೬೫ ವಿದ್ಯಾರ್ಥಿಗಳು ಸೇರಿದಂತೆ ೧೦೦ ವಿದ್ಯಾರ್ಥಿಗಳಿಗೆ ಶ್ರವಣೋಪಕರಣಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಸರಕಾರಿ ಬಾಲಕಿಯರ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾದ್ಯಾಯ ಸಿ. ಎಸ್. ಕಾಂಬಳೆ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಮ್. ಎ. ಗುಳೆದಗುಡ್ಡ, ಯೋಜನಾ ಉಪಸಮನ್ವಯಾಧಿಕಾರಿ ಟಿ. ಎಸ್. ಕೋಲ್ಹಾರ, ಯಸ್ ಬ್ಯಾಂಕಿನ ವ್ಯವಸ್ಥಾಪಕ ಶಕೀಲ್ ಪಾಷಾ ವೀ ಹೀಯರ್ ಸಂಸ್ಥೆಯ ಸಾಮಾಜಿಕ ಸಂವಹನಾ ಅಧಿಕಾರಿಗಳಾದ ಶ್ರದ್ಧಾ ರಮೇಶ, ವಾಘೇಲಾ ಕುಲದೀಪ, ಶಿಕ್ಷಕ-ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

