ಸಿಂದಗಿ ಜೆ.ಹೆಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ
ಸಿಂದಗಿ: ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ನೀಡುವುದು ಇಲಾಖೆಯ ಆದ್ಯ ಕರ್ತವ್ಯ ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.
ಪಟ್ಟಣದ ಜೆ.ಹೆಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿಂದಗಿ ತಾಲೂಕ ಆರೋಗ್ಯ ಇಲಾಖೆ ಹಾಗೂ ಜೆ.ಹೆಚ್.ಪಟೇಲ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡ ವಿಶ್ವ ಜನಸಂಖ್ಯೆ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆಯಲ್ಲಿ ತಾತ್ಕಾಲಿಕ ವಿಧಾನಗಳಾದ ಗರ್ಭ ನಿರೋಧಕ ಮಾತ್ರೆಗಳ ಸೇವನೆ, ವಂಕಿಧಾರಣೆ, ನಿರೋಧ ಬಳಕೆಯಿಂದ ಬೇಗನೆ ಗರ್ಭಧರಿಸುವದನ್ನು ತಡೆಯಬಹುದು. ಒಂದು ಮತ್ತು ಎರಡನೇಯ ಮಗುವಿನ ಅಂತರ ಕಾಪಾಡಬಹುದು. ಶಾಶ್ವತ ವಿಧಾನಗಳಾದ ಉದರ ದರ್ಶಕ ಹಾಗೂ ಉದರ ಛೇದಕ ಶಸ್ತ್ರಚಿಕಿತ್ಸೆ, ಮತ್ತು ಪುರುಷರಿಗಾಗಿ ನೋಸ್ಕಾಲ್ಪೆಲ್ ವ್ಯಾಸಕ್ಟಮಿ ಶಸ್ತ್ರ ಚಿಕಿತ್ಸೆಯಿಂದ ಸಂತಾನ ನಿಯಂತ್ರಿಸಬಹುದು ಎಂದರು.
ಈ ವೇಳೆ ಪ್ರಾಚಾರ್ಯ ಡಾ.ಬಿ.ಎಮ್.ಹುರಕಡ್ಲಿ ಮಾತನಾಡಿ, ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣದ ತಾತ್ಕಾಲಿಕ ಮತ್ತು ಶಾಶ್ವತ ಯೋಜನೆಗಳನ್ನು ಅಳವಡಿಸುವುದರ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬಹುದು. ಈ ಯೋಜನೆಗಳ ಮಹತ್ವವನ್ನು ಸಮುದಾಯದಲ್ಲಿ ಅರಿವು ಮೂಡಿಸಬೇಕು. ಜನಸಂಖ್ಯೆ ಸ್ಪೋಟದಿಂದ ಅನೇಕ ಸಮಸ್ಯೆಗಳು ಉದ್ಭವಿಸಿವೆ. ಮೂಲಭೂತ ಸೌಕರ್ಯಗಳ ಸಮಸ್ಯೆ, ವಸತಿ ಸಮಸ್ಯೆ, ಸಾರಿಗೆ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗಿವೆ. ಮುಂದಿನ ಭಾವಿ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ಸಮುದಾಯದಲ್ಲಿ ಜನಸಂಖ್ಯೆ ನಿಯಂತ್ರಣ ಹಾಗೂ ಜನಸಂಖ್ಯೆ ಹೆಚ್ಚಳದಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು ಸಲಹೆ ನೀಡಿದರು.
ಈ ವೇಳೆ ವೈದ್ಯಾಧಿಕಾರಿ ಡಾ.ಎ.ಎ.ಮಾಗಿ, ಸಿ.ಎಂ. ಮನಗೂಳಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ, ಡಾ.ಮಹಾಂತೇಶ ಹಿರೇಮಠ ಮಾತನಾಡಿದರು. ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ಅಕ್ಷತಾ ಒಕ್ಕಲಿ, ಸದ್ದಾಂ ಪುರದಾಳ ಜನಸಂಖ್ಯೆ ಸ್ಪೋಟದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎ.ಜಾಹಗೀರದಾರ, ಅಂಬರೀಷ್ ಬಿರಾದಾರ, ಬಿ.ಡಿಮಾಸ್ತಿ, ಪ್ರದೀಪ ಕತ್ತಿ, ಆರೋಗ್ಯ ಇಲಾಖೆಯ ಪ್ರಭು ಜಂಗಿನಮಠ, ಮಹಾಲಿಂಗ ಫಕೀರಪೂರ, ವೀರೇಂದ್ರ ಪವಾಡೆ, ಹೇಮಂತ ಕಲಾಲ, ಸಾಯಬಣ್ಣ ಗಣಜಲಿ, ಗೀತಾ ಸಾಸಬಾಳ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.

