ಬಸವನಬಾಗೇವಾಡಿಯಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತ ವಿಚಾರಗೋಷ್ಠಿ
ಬಸವನಬಾಗೇವಾಡಿ: ತೋಟಗಾರಿಕೆ ಬೆಳೆ ಸೇರಿದಂತೆ ಇತರೇ ಬೆಳೆಗಳಿಗೆ ರೋಗ ಬಂದರೆ ಕೀಟಗಳು ತಾರತಮ್ಯ ಮಾಡದೇ ಎಲ್ಲ ಬೆಳೆಗಳನ್ನು ತಿನ್ನುತ್ತವೆ. ಅದಕ್ಕಾಗಿ ರೈತರು ಯಾವುದೇ ಬೆಳೆ ಇರಲಿ ಬರತಕ್ಕಂತಹ ಕೀಟಗಳನ್ನು ಯಾವ ತರಹ ನಿರ್ವಹಣೆ ಮಾಡಬೇಕೆಂಬುವದರ ಕುರಿತು ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ರಾಮನಗೌಡ ಎಸ್.ಎಚ್. ಹೇಳಿದರು.
ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಲಿಂಗ ಮಠದ ಕಲ್ಯಾಣ ಮಂಟಪದಲ್ಲಿ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಬಸವನಬಾಗೇವಾಡಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ, ಧಾರವಾಡದ ಬಿ.ಆರ್.ಮೈಕ್ರೊನ್ಯೂಟ್ರಿಯಂಟ್ಸ ಪ್ರೈ.ಲಿ. ಹಾಗೂ ಎಸ್.ಎಸ್.ವಿ.ಬಯೋಸೈನ್ಸನ್ ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಕೀಟಗಳನ್ನು ನಾಶ ಮಾಡುವುದಕ್ಕಾಗಿ ದುಬಾರಿಯಾದ ಯಥೇಚ್ಛವಾಗಿ ರಾಸಾಯನಿಕ ಕೀಟನಾಶಕಗಳನ್ನು ಖರೀದಿಸಿ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಬೆಳೆ ಬೆಳೆಯುವದಕ್ಕೆ ಸಾಕಷ್ಟು ಖರ್ಚು ಮಾಡುವ ಪರಿಸ್ಥಿತಿ ಎದುರಾಗುತ್ತಿದೆ. ಉತ್ಪನ್ನಕ್ಕೆ ಸರಿಯಾದ ಬೆಲೆ ಬಾರದೇ ಹೋದರೆ ನಷ್ಟ ಅನುಭವಿಸುವಂತಾಗುತ್ತದೆ. ಅದಕ್ಕಾಗಿ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಕೀಟಗಳ ನಾಶಕ್ಕಾಗಿ ಸತತ ಏಳು ವರ್ಷಗಳಿಂದ ಸಂಶೋಧನೆ ಮಾಡಿ ಕೃಷ್ಣಪ್ರಭಾ ಬಿವೇರಿಯಾ ಎಂಬ ಪರಿಸರ ಹಾಗೂ ಪರಿಣಾಮಕಾರಿ ಜೈವಿಕ ಕೀಟನಾಶಕವನ್ನು ವಿವಿಧ ಕಂಪನಿಗಳಿಗೆ ಕೊಡಲಾಗಿದೆ. ರೈತರು ಇಂತಹ ಜೈವಿಕ ಕೀಟನಾಶಕ ಬಳಕೆ ಮಾಡುವದರಿಂದ ಬೆಳೆಗೂ, ಭೂಮಿಗೂ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದರು.
ರಾಸಾಯನಿಕ ಕೀಟನಾಶಕ, ಗೊಬ್ಬರ ಹೆಚ್ಚು ಬಳಕೆ ಮಾಡಿದ್ದರಿಂದಾಗಿ ಇಂದು ಶೇ.೬೦ ರಷ್ಟು ಭೂಮಿ ಫಲವತ್ತತೆ ಕಳೆದುಕೊಂಡಿದೆ. ಶೇ.೪೦ ರಷ್ಟು ಮಾತ್ರ ಫಲವತ್ತತೆ ಭೂಮಿ ಉಳಿದುಕೊಂಡಿದೆ. ಅದಕ್ಕಾಗಿ ರೈತರು ಜೈವಿಕ ಕೀಟನಾಶಕವನ್ನು ಬಳಕೆ ಮಾಡುವ ಕಡೆಗೆ ಗಮನ ಹರಿಸಬೇಕಿದೆ. ಕೃಷ್ಣಪ್ರಭಾ ಬಿವೇರಿಯಾ ಜೈವಿಕ ಕೀಟನಾಶಕ ಬೆಳೆಗಳಿಗೆ ರೋಗ ಬಾರದಂತೆ ನೋಡಿಕೊಳ್ಳುತ್ತದೆ. ಇದರ ಬಳಕೆ ಹೇಗೆ ಮಾಡಬೇಕೆಂಬುವದರ ಕುರಿತು, ಉತ್ತಮ ಫಸಲು ಬರಲು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುವದರ ಕುರಿತು ಮಾಹಿತಿ ನೀಡಿದರು.
ಬಸವನಬಾಗೇವಾಡಿಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಬಿ.ಪಾಟೀಲ ಮಾತನಾಡಿ, ರೈತರಿಗೆ ಮಣ್ಣು, ನೀರು ಪರೀಕ್ಷೆ ಮಾಡಲು ಸಾಕಷ್ಟು ಸಲ ಹೇಳಿದರೂ ಅವರು ಇದಕ್ಕೆ ಸರಿಯಾಗಿ ಸ್ಪಂದಿಸುವುದಿಲ್ಲ. ಇದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ರೈತರು ಕಡ್ಡಾಯವಾಗಿ ಮಣ್ಣು, ನೀರು ಪರೀಕ್ಷೆ ಮಾಡಿಸಿದರೆ ಉತ್ತಮವಾದ ಬೆಳೆ ಬೆಳೆಯಲು ಸಹಾಯಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಇಂದು ಅಧಿಕ ಇಳುವರಿ, ಕೀಟಗಳ ರೋಗ ಬಾಧೆ ನಿಯಂತ್ರಣಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಬಳಕೆ ಮಾಡುವದರಿಂದಾಗಿ ಇಂದು ಸೇವಿಸುವ ಆಹಾರದಲ್ಲಿಯೂ ರಾಸಾಯನಿಕ ಮಿಶ್ರಣವಾಗುತ್ತಿದೆ. ಇದರಿಂದಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜೈವಿಕ ಕೀಟನಾಶಕ ಬಳಕೆ ಮಾಡುವದರಿಂದಾಗಿ ಉತ್ತಮ ಫಸಲು ಬರುವ ಜೊತೆಗೆ ರೈತರಿಗೂ ಪೂರಕವಾಗುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ ಎಂದ ಅವರು ರೈತರಿಗೆ ನಮ್ಮ ಬ್ಯಾಂಕಿನಿಂದ ದ್ರಾಕ್ಷಿ ಸಾಲ, ಹೈನುಗಾರಿಕೆ ಸಾಲ, ಕುರಿ ಸಾಕಾಣಿಕೆ ಸಾಲ, ಬೇವಿನಹಿಂಡಿ ತಯಾರಿಕೆಗೆ ಸಾಲ, ರೇಷ್ಮೆ ಸಾಲ, ನರ್ಸರಿ ಸಾಲ ಸೇರಿದಂತೆ ವಿವಿಧ ಬಗೆಯ ಸಾಲಗಳನ್ನು ನೀಡಲಾಗುತ್ತಿದೆ. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.
ಕರ್ನಾಟಕ ಬಯೋಫರ್ಟಿಲೈಜರ್ಸ್ ಸಂಸ್ಥಾಪಕ ರವಿ ಕುಲಕರ್ಣಿ, ಬಿ.ಆರ್.ಮೈಕ್ರೋನ್ಯೂಟ್ರಿಯಂಟ್ಸ್ ಪ್ರೈ.ಲಿ.ನಿರ್ದೇಶಕ ಅಪ್ಪಣ್ಣ ದಾದನಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ವಿ ಬಯೋಸೈನ್ಸನ್ ಸಂಸ್ಥಾಪಕ ರಾಮಕೃಷ್ಣಥಿಟೆ, ವಿಪಿಕೆಪಿಎಸ್ ಉಪಾಧ್ಯಕ್ಷ ಮಲ್ಲೇಶ ಕಡಕೋಳ ಇತರರು ಇದ್ದರು. ಪ್ರತಿಭಾ ಕನಕಪ್ಪನವರ ಸ್ವಾಗತಿಸಿ,ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ರೈತರ ಪ್ರಶ್ನೆಗಳಿಗೆ ವಿಜ್ಞಾನಿಗಳು ಉತ್ತರಿಸಿ ಪರಿಹಾರ ಸೂಚಿಸಿದರು.

