ವಿಜಯಪುರ ನಗರದಲ್ಲಿ ರೈಲ್ವೆ ಮೇಲ್ಸೆತುವೆ ಸೇರಿದಂತೆ ಉಕ ಭಾಗದ ರೈಲ್ವೆ ಅಭಿವೃದ್ಧಿ ಬೇಡಿಕೆಗಳಿಗಾಗಿ ಮನವಿ
ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ವಿಜಯಪುರ ನಗರದಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈಲ್ವೆ ಅಭಿವೃದ್ಧಿ ಬೇಡಿಕೆಗಳ ಕುರಿತು ಮನವಿ ಪತ್ರ ನೀಡಿ ಚರ್ಚಿಸಿದರು.
ವಿಜಯಪುರ ನಗರವು ಸುಮಾರು ೧೦ ಲಕ್ಷ ಜನಸಂಖ್ಯೆ ಹೊಂದಿದ್ದು, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಹುಟಗಿ-ಗದಗ ನಡುವೆ ಡಬ್ಬಿಂಗ್ ಟ್ರಾö್ಯಕ್ ಮತ್ತು ರೈಲ್ವೆ ವಿದ್ಯುದೀಕರಣಗೊಳ್ಳುವುದರಿಂದ ಈ ಮಾರ್ಗದಲ್ಲಿ ವಂದೇ ಭಾರತ್ ಮತ್ತು ಇತರೆ ಸೂಪರ್ ಪಾಸ್ಟ್ ರೈಲುಗಳು ಸಂಚರಿಸುವ ಸಾಧ್ಯತೆಯಿದೆ. ಹೀಗಾಗಿ ವಿಜಯಪುರ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಶನ್ ಸ್ಕಿಮ್ ಅಡಿಯಲ್ಲಿ ಮೇಲ್ದರ್ಜೆಗೆ ಏರಿಸಿದರೆ, ರೈಲು ನಿಲ್ದಾಣ ನವೀಕರಣ, ಪ್ರಯಾಣಿಕರಿಗೆ ಸೌಕರ್ಯ, ಪ್ರಯಾಣಿಕರ ಮಾರ್ಗದರ್ಶಿ ಸೂಚನಾ ಫಲಕಗಳ ಅಳವಡಿಕೆ ಮಾಡಲು ಅನುಕೂಲವಾಗುತ್ತದೆ.
ಅದೇ ರೀತಿ ನಗರದ ಮುಖ್ಯ ರೈಲು ನಿಲ್ದಾಣದಿಂದ ಇಬ್ರಾಹಿಂಪುರ ರೈಲು ನಿಲ್ದಾಣದ ಮಾರ್ಗ ಮಧ್ಯದಲ್ಲಿ ಬರುವ ರೈಲ್ವೆ ಕಿ.ಮೀ ೧೮೮/೪೦೦-೫೦೦ (ಕನಕದಾಸ ಬಡಾವಣೆ ಬಿ.ಎಸ್.ಎನ್.ಎಲ್ ಕ್ವಾಟರ್ಸ) ಹತ್ತಿರದ ಜಾಗದಲ್ಲಿ ನೈಸರ್ಗಿಕವಾಗಿ ಇರುವ ಎತ್ತರದ ಗುಡ್ಡಕ್ಕೆ ರೈಲ್ವೆ ಮೇಲ್ಸೆತುವೆಯ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಅವಶ್ಯಕತೆಯಿದೆ.
ಈ ಮೆಲ್ಸೆತುವೆ ನಿರ್ಮಾಣದಿಂದ ಪಶ್ಚಿಮಕ್ಕೆ ಇರುವ ರಂಭಾಪುರ, ವಿವಿಧ ವಾಹನ ಕಂಪನಿಗಳು, ಬಡಾವಣೆಗಳು, ಪ್ರದೇಶಗಳು, ಹೈಪರ್ ಮಾರ್ಟ, ಎನ್.ಎಚ್.೫೧ ಮತ್ತು ವಿವಿಧ ಇಲಾಖೆಗಳಿವೆ. ಮತ್ತೊಂದೆಡೆ ಪೂರ್ವ ಭಾಗವು ಡಿಸಿ ಕಚೇರಿ, ಜಿಲ್ಲಾ ನ್ಯಾಯಾಲಯಗಳು, ಕೆಇಬಿ, ಆಸ್ಪತ್ರೆಗಳು, ದೇವಸ್ಥಾನಗಳು, ಅನೇಕ ಬಡಾವಣೆಗಳನ್ನು ಹೊಂದಿದ್ದು, ಎರಡು ಭಾಗಕ್ಕೆ ಸುಲಭವಾಗಿ ಸಂಚರಿಸಲು ಅನುಕೂಲವಾಗಲಿದೆ. ಸಮಯ ಮತ್ತು ರಾಷ್ಟ್ರೀಯ ಇಂಧನ ಸಹ ಉಳಿತಾಯವಾಗಲಿದೆ.
ಪ್ರಸ್ತುತ ಮುಂಬಯಿಂದ ಸೊಲ್ಲಾಪುರ ವರೆಗೆ ಸಂಚರಿಸುತ್ತಿರುವ ವಂದೇ ಭಾರತ್ ರೈಲು ವಿಜಯಪುರ ವರೆಗೆ ವಿಸ್ತರಣೆ ಮಾಡಬೇಕು. ಹಜರತ್ ನಿಜಾಮುದ್ದೀನ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ವಾರದಲ್ಲಿ ಐದು ದಿನ ಓಡಿಸಲು, ಮೈಸೂರು- ಬಾಗಲಕೋಟ ಮಧ್ಯ ಸಂಚರಿಸುವ ಬಸವ ಎಕ್ಸಪ್ರೆಸ್ ರೈಲು ಗದಗ ವರೆಗೆ ವಿಸ್ತರಣೆ ಮಾಡುವುದರಿಂದ ಈ ಭಾಗದ ಪ್ರಯಾಣಿಕರ ಸಂಚಾರಕ್ಕೆ ಹಾಗೂ ಉತ್ತರ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

