ಮುದ್ದೇಬಿಹಾಳ: ತಮ್ಮ ಜಮೀನನ್ನು ಸ್ವಚ್ಛಗೊಳಿಸಲು ಮುಂದಾದ ಕುಟುಂಬವೊಂದು ಖಬರಸ್ಥಾನದಲ್ಲಿದ್ದ ಮೃತರ ಗೋರಿಗಳ ಪೈಕಿ ಕೆಲವನ್ನು ಒಡೆದು ಹಾಕಿ ಮುಸ್ಲಿಂ ಸಮಾಜಬಾಂಧವರ ಕೆಂಗಣ್ಣಿಗೆ ಗುರಿಯಾದ ಘಟನೆ ಪಟ್ಟಣದ ಕುಂಟೋಜಿ ರಸ್ತೆಯಲ್ಲಿರುವ ಈದಗಾ ಮೈದಾನದ ಹಿಂದಿರುವ ಖಬರಸ್ಥಾನದಲ್ಲಿ ರವಿವಾರ ನಡೆದಿದೆ.
ಪಟ್ಟಣದ ನಿವಾಸಿಗಳಾದ ಬಾರಿಕಾಯಿ ಕುಟುಂಬಸ್ಥರು ಇಂಥದ್ದೊಂದು ಎಡವಟ್ಟು ಮಾಡಿಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ತಮ್ಮ ಜಮೀನಿನ ಹಾಗೂ ಖಬರಸ್ಥಾನದ ಜಮೀನಿಗೆ ಸಂಬಂಧಿಸಿದಂತೆ ಭೂವಿವಾದ ನಡೆದಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗಲೇ ಈ ದುಸ್ಸಾಹಸಕ್ಕೆ ಕೈಹಾಕಿದ್ದು ಇಡೀ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯದವರೊಂದಿಗೆ ಮಾತನಾಡಿದ ಅಂಜುಮನ್ ಎ ಇಸ್ಲಾಂ ಕಮೀಟಿಯ ಮಾಜಿ ಸದಸ್ಯ ಅಯೂಬ ಮನಿಯಾರ ಘಟನೆಯನ್ನು ಖಂಡಿಸಿ ಮಾತನಾಡಿ, ಅಂದಾಜು ೪೫ ಗೋರಿಗಳನ್ನು ನೆಲಸಮ ಮಾಡಿದ್ದು ನಮ್ಮ ಸಮುದಾಯದವರಿಗೆ ಸಾಕಷ್ಟು ನೋವು ತಂದಿದೆ. ಗೋರಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ವಿವಾದ ಬಾಕಿ ಇರುವಾಗಲೇ ಈ ನಿರ್ಧಾರಕ್ಕೆ ಮುಂದಾಗಿದ್ದು ನಮ್ಮ ಸಮಾಜಬಾಂಧವರು ಎಂದಿಗೂ ಕ್ಷಮಿಸಲಾರರು ಎಂದರು.
ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜೀವ ತಿಪರೆಡ್ಡಿ, ಕ್ರೈಂ ಪಿಎಸ್ಐ ಆರ್.ಎಲ್.ಮನ್ನಾಬಾಯಿ ಭೇಟಿ ನೀಡಿ ಪರಿಶೀಲಿಸಿದ್ದು ೨ಜೆಸಿಬಿಗಳನ್ನು ವಶಕ್ಕೆ ಪಡೆದಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅತಿಕ್ರಮ ಪ್ರವೇಶ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಮತ್ತು ಜೀವಬೆದರಿಕೆ ಸೇರಿದಂತೆ ಇನ್ನೀತರ ಆರೋಪಗಳನ್ನು ಗೈದು ಮುಖಂಡ ಮಹೆಬೂಬ ಗೊಳಸಂಗಿ ೫ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

