ದೇವರಹಿಪ್ಪರಗಿ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಿ ಜ್ಞಾನ ಕೇಂದ್ರಗಳಾಗಿ ರೂಪಿಸುವುದರ ಮೂಲಕ ಶೈಕ್ಷಣಿಕ ಬಲವರ್ಧನೆ ಮಾಡಬೇಕಾಗಿದೆ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಹೇಳಿದರು.
ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಪ್ರೌಡಶಾಲೆ ಸಭಾಂಗಣದಲ್ಲಿ ಶನಿವಾರ ಜರುಗಿದ ದೇವರಹಿಪ್ಪರಗಿ ಹಾಗೂ ಕಲಕೇರಿ ವಲಯಗಳ ಮುಖ್ಯಗುರುಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಬೇಕು. ದಾಖಲಾದ ಮಕ್ಕಳೆಲ್ಲರೂ ಶಾಲೆಗೆ ತಪ್ಪದೇ ಹಾಜರಿರುವಂತೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಪಡೆದಿರುವ ಮಗು ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳಲ್ಲಿ ಇರಕೂಡದು. ಇಲ್ಲವಾದಲ್ಲಿ ಆಯಾ ಶಾಲೆಯ ಮುಖ್ಯಗುರುಗಳನ್ನೇ ಹೊಣೆಗಾರರನ್ನಾಗಿ ಮಾಡಿ, ನೋಟೀಸ್ ನೀಡಿ, ನಂತರ ಅವರ ಮೇಲೆ ಕಟ್ಟುನಿಟ್ಟಾದ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ಪಾಠವನ್ನು ಮಾಡುವ ಸಂದರ್ಭದಲ್ಲಿ ಅಗತ್ಯ ಪೂರ್ವಸಿದ್ದತೆ ಮಾಡಿಕೊಂಡು ಪಾಠೋಪಕರಣಗಳನ್ನು ಬಳಸಿ ಪರಿಣಾಮಕಾರಿಯಾಗಿ ಬೋಧಿಸಬೇಕು.
ಮುಖ್ಯಗುರುಗಳು ಶಾಲೆಯ ಎಸ್ಡಿಎಮ್ಸಿಯವರೊಂದಿಗೆ ಸಮಾಲೋಚಿಸಿ ನಿಯಮಾನುಸಾರವಾಗಿ ಗುಣಮಟ್ಟದ ಶೂ ಹಾಗೂ ಸಾಕ್ಸ್ ಗಳನ್ನು ಖರೀದಿಸಬೇಕು. ಮಕ್ಕಳಿಗೆ ಗುಣಮಟ್ಟದ ತರಕಾರಿಗಳನ್ನು ಬಳಸಿ ಗುಣಮಟ್ಟದ ಬಿಸಿ ಊಟ ಒದಗಿಸಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಮಾತನಾಡಿ, ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸುತ್ತ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು.
ಶಿಕ್ಷಣ ಸಂಯೋಜಕ ಐ.ಎಫ್.ಭಾಲ್ಕಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ ಅಲ್ದಿಮಠ, ಫಿರೋಜ್ ಕಾಚೂರ, ಬಿಆಯ್ಇಆರ್ಟಿ ಎ.ಎಸ್.ಯತ್ನಾಳ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್. ವಾಲೀಕಾರ ಸೇರಿದಂತೆ ಕನ್ನಡ ಹಾಗೂ ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಗುರುಗಳು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

