ದೇವರಹಿಪ್ಪರಗಿ: ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಿಲ್ಲದೇ ಕೊಠಡಿ ಬಿಕೋ ಎನ್ನುವಂತಿದ್ದು, ವಿವಿಧೆಡೆ ತೆರಳುವ ಬಸ್ಗಳ ಮಾಹಿತಿ ತಿಳಿಯಲು ಪ್ರಯಾಣಿಕರು ಪರದಾಡುವಂತಾಗಿದೆ.
ಪಟ್ಟಣ ಹಾಗೂ ತಾಲ್ಲೂಕು ಕೇಂದ್ರ ಸ್ಥಳದ ಬಸ್ ನಿಲ್ದಾಣ ನೂತನವಾಗಿ ನಿರ್ಮಾಣಗೊಂಡು ಕಂಗೊಳಿಸುತ್ತಿದೆ. ಆದರೆ ಅಗತ್ಯವಾದ ಸಿಬ್ಬಂದಿಗಳಿಲ್ಲದೇ ಬಣಗುಡುತ್ತಿದೆ. ಮುಖ್ಯವಾಗಿ ಬಸ್ ನಿಲ್ದಾಣದಲ್ಲಿ ಕಳೆದ ಎರಡು ದಿನಗಳಿಂದ ಸಾರಿಗೆ ನಿಯಂತ್ರಕರು ಇಲ್ಲದೇ ಇದ್ದು, ಕೊಠಡಿಯನ್ನು ಮುಚ್ಚಲಾಗಿದೆ. ಇದರಿಂದ ಬಸ್ಗಳ ಮಾಹಿತಿ ತಿಳಿಯಲು ಪ್ರಯಾಣಿಕರು ಪರದಾಡಿ ಇತರರನ್ನು ಕೇಳುವಂತಾಗಿದೆ.
ಸ್ಥಳೀಯ ಬಸ್ ನಿಲ್ದಾಣಕ್ಕೆ ಕನಿಷ್ಠ ಇಬ್ಬರು ಸಾರಿಗೆ ನಿಯಂತ್ರಕರ ಅಗತ್ಯತೆಯಿದೆ. ಆದರೆ ಇಲ್ಲಿ ಕೇವಲ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಅವರು ಸಹ ಕೆಲಸದ ಒತ್ತಡ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ರಜೆ ಪಡೆದಿದ್ದು ಪ್ರಯಾಣಿಕರಿಗೆ ಮಾಹಿತಿದಾರರು ಇಲ್ಲದಂತಾಗಿದೆ. ಬಸ್ ನಿಲ್ದಾಣದ ಕ್ಷೇತ್ರ ಹಾಗೂ ಕಾರ್ಯಕ್ಕೆ ಅನುಗುಣವಾಗಿ ಪ್ರಸ್ತುತ ಇಬ್ಬರು ಸಾರಿಗೆ ನಿಯಂತ್ರಕರು ಹಾಗೂ ಒಬ್ಬರು ಭದ್ರತಾ ಸಿಬ್ಬಂದಿಯ ಅಗತ್ಯತೆಯಿದ್ದು ಕೂಡಲೇ ಇವರನ್ನು ನೇಮಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು.
ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣಕ್ಕೆ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ನಿಯಂತ್ರಕರು ಇರಲೇಬೇಕು ಆಗ ಮಾತ್ರ ನಮ್ಮಂಥ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಹೆಚ್ಚುವರಿ ನಿಯಂತ್ರಕರ ಬೇಡಿಕೆಗೆ ಆಗ್ರಹಪಡಿಸುತ್ತಾರೆ ಕೋರವಾರ ಗ್ರಾಮದ ಮಂಜುನಾಥ ಕಾಮನಕೇರಿ, ರಾಯಗೊಂಡ ಯರನಾಳ (ಯಂಭತ್ನಾಳ), ಲಕ್ಷ್ಮಿ ಸಜ್ಜನ(ದೇವೂರ), ಎಂ.ಜಿ.ಹಿರೇಮಠ(ಕರಭಂಟನಾಳ),ಚನ್ನಪ್ಪ ಕಾರಜೋಳ (ನಿವಾಳಖೇಡ) ಹಾಗೂ ಪ್ರಕಾಶ ಡೋಣೂರಮಠ (ಸಾತಿಹಾಳ).
Subscribe to Updates
Get the latest creative news from FooBar about art, design and business.
Related Posts
Add A Comment

