ಏಕಾಂಗಿ ಯಾತ್ರೆ ಮೂಲಕ ಬಿಜೆಪಿಗೆ ಮತಯಾಚನೆ ಮಾಡುತ್ತಿರುವ ಭರತ ಜೈನ್.
ದೇವರಹಿಪ್ಪರಗಿ: ಭಾರತ ಬಚಾವ್, ಬಿಜೆಪಿಗೆ ಮತ ನೀಡಿ ಎಂಬ ಫಲಕದೊಂದಿಗೆ ವಿವಿಧ ಜಿಲ್ಲೆಗಳಲ್ಲಿ ಧಾರವಾಡದ ಯುವಕನೊಬ್ಬ ಏಕಾಂಗಿ ಪ್ರಚಾರ ಕೈಗೊಂಡು ಗಮನ ಸೆಳೆದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಆಗಮಿಸಿದ ಧಾರವಾಡದ ಭರತ ಜೈನ್ ಎಂಬ ಯುವಕ ಭಾರತಮಾತೆ, ಕೃಷ್ಣಾರ್ಜುನರು, ಸ್ವಾಮಿ ವಿವೇಕಾನಂದ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಎಪಿಜೆ ಅಬ್ದುಲ್ ಕಲಂ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಯಡಿಯೂರಪ್ಪ, ಜೆ.ಪಿ.ನಡ್ಡಾ, ನಳೀನಕುಮಾರ ಕಟೀಲು ಅವರ ಚಿತ್ರಗಳಿರುವ ಫಲಕದೊಂದಿಗೆ ಏಕಾಂಗಿಯಾಗಿ ಇದೇ ದಿ.೧೮ ರಂದು ಧಾರವಾಡದಿಂದ ಸೈಕಲ್ ಯಾತ್ರೆ ಆರಂಭಿಸಿ ಬೆಳಗಾವಿ, ಬಾಗಲಕೋಟ, ವಿಜಯಪುರ ಮೂಲಕ ಪಟ್ಟಣಕ್ಕೆ ಆಗಮಿಸಿದ ಮಾಹಿತಿ ನೀಡಿದರು.
ಭರತ ತಾವು ೧೦ಸಾವಿರ ಹಣದಲ್ಲಿ ಹೊಸದಾಗಿ ಸೈಕಲ್ ಕೊಂಡು ಯಾತ್ರೆಯ ಮೂಲಕ ಕಲಬುರಗಿ, ರಾಯಚೂರ, ಬಳ್ಳಾರಿ ಸೇರಿದಂತೆ ಕರ್ನಾಟಕದ ಹೆಚ್ಚು ಜಿಲ್ಲೆಗಳನ್ನು ತಲುಪುವ ವಿಶ್ವಾಸ ವ್ಯಕ್ತಪಡಿಸಿ ಚುನಾವಣೆಯ ಮತದಾನದ ೧೦ ದಿನಗಳ ಮುಂಚಿತ ಯಾತ್ರೆ ಮುಕ್ತಾಯಗೊಳಿಸುವ ವಿವರ ನೀಡಿದರು. ಯಾತ್ರೆಯಲ್ಲಿ ತೆರಳುತ್ತಿರುವ ತಾವು ಗ್ರಾಮಗಳ ಹಾಗೂ ತೋಟದ ಜನತೆಗೆ ಕಳೆದ ೯ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ವಿವರಿಸಿ ಈ ಬಾರಿಯೂ ಬಿಜೆಪಿಗೆ ಮತ ನೀಡಲು ವಿನಂತಿಸುತ್ತೇನೆ ಎಂದರು.
ಯಾತ್ರೆಯ ಆರಂಭದಿಂದ ತಮಗೆ ಗ್ರಾಮಗಳಲ್ಲಿ ಜನತೆ ಹಾಗೂ ಬಿಜೆಪಿ ಕಾರ್ಯಕರ್ತರು ನೆರವು ನೀಡಿದ ಬಗ್ಗೆ ಹಾಗೂ ಕೆಲವು ಗ್ರಾಮಗಳಲ್ಲಿ ಕೆಲವರು ಅನಗತ್ಯ ಕಿರಿಕಿರಿ ಉಂಟುಮಾಡಿದ ಘಟನೆಗಳ ಕುರಿತು ಮಾಹಿತಿ ನೀಡಿದರು.

