ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಆಧುನಿಕ ಕೃಷಿ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಸಿಂದಗಿ: ದುಬಾರಿಯಾಗುತ್ತಿರುವ ಕೃಷಿ ನಿರ್ವಹಣೆ ವೆಚ್ಚಗಳನ್ನು ಸರಿದೂಗಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯನ್ನು ಕಲ್ಪಿಸಿ ಆದಾಯ ದ್ವಿಗುಣಗೊಳಿಸಲು ನಡೆಸಿದ ಸರ್ವ ಪ್ರಯತ್ನಗಳು ನಿರರ್ಥಕವೆನಿಸಿದ ಪ್ರಸ್ತುತ ಕಾಲಘಟ್ಟದಲ್ಲಿ ಉಪ ಕಸುಬುಗಳೆ ರೈತರ ಸುಸ್ಥಿರ ಬದುಕಿಗೆ ಜೀವಾಳವಾಗಿವೆ ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.
ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಕೃಷಿ ಇಲಾಖೆ, ಜಲಾನಯನ ಇಲಾಖೆ, ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕ ಕಂಪನಿ, ಸಿಂದಗಿ ಮತ್ತು ಅನ್ನದಾತ ಒಣ ದ್ರಾಕ್ಷಿ ವಿಂಗಡನೆ ಕೇಂದ್ರ ಬ್ಯಾಕೋಡ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಆಧುನಿಕ ಕೃಷಿ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿರುವ ಕಾರಣ ಏರುತ್ತಿರುವ ತಾಪಮಾನ ಮತ್ತು ಬದಲಾಗುತ್ತಿರುವ ಮಳೆ ಮಾದರಿಗಳಿಂದ ಅನಿಶ್ಚತೆಗೊಂಡಿರುವ ಕೃಷಿಯಲ್ಲಿ ಸ್ಥಿರತೆ ಕಾಣಲು ಜಾನುವಾರು ಸಾಕಾಣಿಕೆಯನ್ನು ಮುಖ್ಯ ಕಸುಬನ್ನಾಗಿಸುವ ನೀತಿ ಜಾರಿಗೆ ಬರಬೇಕು ಎಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಶ್ರೀ ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ನಾನಾಗೌಡ ಪಾಟೀಲ ಮಾತನಾಡಿದರು.
ತಾಂತ್ರಿಕ ಗೋಷ್ಠಿಯಲ್ಲಿ ಸಮುನ್ನತಿ ಬ್ಯಾಂಕಿನ ತಾಂತ್ರಿಕ ಅಧಿಕಾರಿ ಅನೀಲಕುಮಾರ ಡ್ರೋನ ಸೇರಿದಂತೆ ಆಧುನಿಕ ಕೃಷಿಗೆ ನೀಡಲಾಗುವ ಸಾಲ ಯೋಜನೆಗಳ ಬಗ್ಗೆ, ಬೆಳಗಾವಿಯ ವಲಯ ವ್ಯವಸ್ಥಾಪಕ ನಾಗರಾಜ ಇವರು ಎಫ್.ಪಿ.ಓ ಮುಖಾಂತರ ರೈತರಿಗಿರುವ ಸಾಲಸೌಲಭ್ಯಗಳ ಕುರಿತು, ಅಮೃತ ಆರ್ಗ್ಯಾನಿಕ್ ಫರ್ಟಿಲೈಜರ್ಸ ಜಿಲ್ಲಾ ವ್ಯವಸ್ಥಾಪಕ ಅಶೋಕ ಬಿರಾದಾರ ಸಾವಯವ ಗೊಬ್ಬರಗಳ ಕುರಿತು ಮತ್ತು ಕೀರ್ತಿ ಕಂಪನಿಯ ಪರಮೇಶ್ವರರವರು ಕೃಷಿ ಉತ್ಪನ್ನಗಳ ಮಾರುಕಟ್ಟೆ ಕುರಿತು ತಾಂತ್ರಿಕ ಮಾಹಿತಿಗಳನ್ನು ನೀಡಿ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ನಿಂಗನಗೌಡ ಪಾಟೀಲ(ಡಂಬಳ), ಕವಿತಾ ಅಂಬಲಿ, ಗುರಬಸಪ್ಪ ಯಲಗೋಡ, ಅಂಬರೀಶ ಮಾರಲಭಾವಿ,ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶಿವಶಂಕ್ರಪ್ಪ ಅಂಬಲಿ, ಧರ್ಮಣ್ಣ ಸಾಹುಕಾರ ಭಾವಿಕಟ್ಟಿ, ಹನಿ ನೀರಾವರಿ ತಾಂತ್ರಿಕ ಸಲಹೆಗಾರ ಹಣಮಂತ ಕಲ್ಲೂರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಆಯೋಜಕ ನಿಂಗಣ್ಣ ಭಾವಿಕಟ್ಟಿ ಸ್ವಾಗತಿಸಿದರು. ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕಿ ಮಹಾದೇವಿ ಅಂಬಲಿ ಕಾರ್ಯಕ್ರಮ ನಿರೂಪಿಸಿದರು. ರಾಣಿ ಪೂಜಾರಿ ವಂದಿಸಿದರು.

