ರೂ.೪೦ ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ಕುರಿತಂತೆ ಕಾಂಗ್ರೆಸ್ ಮುಖಂಡ ಎಸ್.ಎಂ.ಪಾಟೀಲ ಆಗ್ರಹ
ವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಕಾಲಘಟ್ಟದಲ್ಲಿ ೪೦ ಸಾವಿರ ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರವಾಗಿ ಆರೋಪಿಸಿದ್ದಾರೆ, ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು, ಅಂಕಿ-ಸಂಖ್ಯೆಗಳನ್ನು ಆಧಾರವಾಗಿರಿಸಿಕೊಂಡು ಹೇಳಿರುವ ಯತ್ನಾಳ ಅವರನ್ನು ತನಿಖೆ ನಡೆಸಿದರೆ ಇನ್ನಷ್ಟು ಸತ್ಯಾಂಶ ಹೊರಬೀಳಲಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯತ್ನಾಳರು ಬಿಜೆಪಿ ಸರ್ಕಾರದ ಭಾಗವಾಗಿದ್ದರು, ಆಗ ಈ ಅವ್ಯವಹಾರದ ಬಗ್ಗೆ ಧ್ವನಿ ಏಕೆ ಎತ್ತಲಿಲ್ಲ? ನಿಮ್ಮ ಪಾಲು ಅದರಲ್ಲಿತ್ತೋ? ಅಥವಾ ಪಾಲು ಹಣ ಹಂಚಿಕೆಯಲ್ಲಿ ಧಕ್ಕೆಯಾಗಿದ್ದಕ್ಕೆ ಈ ರೀತಿ ಆರೋಪಿಸುತ್ತಿದ್ದಿರೋ ಎಂದು ಯತ್ನಾಳರಿಗೆ ಸವಾಲು ಹಾಕಿದರು. ಯತ್ನಾಳರ ಬಗ್ಗೆ ಜನರಿಗೆ ಗೌರವವಿದೆ, ಅವರ ಈ ಗೌರವ ಇನ್ನೂ ಹೆಚ್ಚಾಗಬೇಕು, ಹೀಗಾಗಿ ಮೊದಲು ಚುನಾವಣೆಗೆ ಸ್ಪರ್ಧಿಸಿದಾಗ ಎಷ್ಟು ಪ್ರಮಾಣದ ಆಸ್ತಿ ಇತ್ತು, ಈಗ ಎಷ್ಟು ಪ್ರಮಾಣದ ಆಸ್ತಿ ಇದೆ, ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ೨ ಸಾವಿರ ಕೋಟಿ ರೂ. ಎಲ್ಲಿಂದ ಬಂತು? ಸಿದ್ಧಸಿರಿ ಸಹಕಾರಿ ಬ್ಯಾಂಕ್ ವಹಿವಾಟು ಹೀಗೆ ಎಲ್ಲವನ್ನೂ ಬಹಿರಂಗಪಡಿಸಿ ತಮ್ಮ ಪರಿಶುದ್ಧತೆಯನ್ನು ಸಾಬೀತುಪಡಿಸಬೇಕು ಎಂದರು.
ಕಲ್ಲಡ್ಕ ಪ್ರಭಾಕರ ಭಟ್ ಅವರ ಸ್ತ್ರೀ ವಿರೋಧಿ ಧೋರಣೆ ಸಲ್ಲದು, ಹಿಂಧೂ ಧರ್ಮ ಯಾವತ್ತೂ ಸ್ತ್ರೀಯರನ್ನು ದೂಷಿಸಿ ಎಂದು ಹೇಳಿಲ್ಲ, ಹೀಗಾಗಿ ಹಿಂದೂಪರ ಸಂಘಟನೆಗಳು ಸಹ ಅವರ ಹೇಳಿಕೆಯನ್ನು ಖಂಡಿಸಬೇಕು ಎಂದರು.
ಕೇವಲ ಕೋಮು ಧ್ವೇಷ ಹರಡುವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುವುದು ನಡೆಯುತ್ತಲೇ ಇದೆ ಎಂದರು.
ಯುವ ಮುಖಂಡರಾದ ಫಯಾಜ್ ಕಲಾದಗಿ, ನಾಗರಾಜ ಲಂಬು ಮೊದಲಾದವರು ಪತ್ರಿಕಾಗೋಷ್ಠೀಯಲ್ಲಿ ಉಪಸ್ಥಿತರಿದ್ದರು.

