ವ್ಯಂಗೋತ್ಸವ
– ಶ್ರೀನಿವಾಸ ಜಾಲವಾದಿ*, ಸುರಪುರ
‘ಏನಪಾ ಗುಂಡಪ್ಪಾ ಏನು ಹೊಸದು ಐತಿ ಹೇಳಪಾ?’ ಅಂತ ಬಂದ ಕಾಕಾ
‘ಏನೂ ಇಲ್ಲ ಕಾಕಾ, ಚಾ ಹೇಳ್ಲೇನು?’ ಅಂದ ಗುಂಡ್ಯಾ
‘ಏ ಮೂಳ ಹಳೇ ಮೂಳ ಏನು ಹೊಸಾದು ಇಲ್ಲ? ಸುಳ್ಳ ಹೇಳ್ತಿ ಏನು?’ ಅಂತ ದಬಾಯಿಸಿದ್ಲು ರಾಶಿ
‘ಏನೈತೆ ಹೇಳವಾ ನೀ?’ ಅಂದ ಗುಂಡ್ಯಾ
‘ದೀಡಸೇ ಮೆಂಬರ್ಗ್ಗೊಳ್ನ ಅಮಾನತ್ತ ಮಾಡ್ಯಾರು’ ಅಂದಳು ರಾಶಿ
‘ಯಾವ ಮೆಂಬರಗಳು? ಪಂಚಾಯಿತಿದಾ?’ ಅಂದ ಕಾಕಾ
‘ಏ ಅಲ್ಲಪಾ ಕಾಕಾ, ಅವರು ಲೋಕಸಭಾ ರಾಜ್ಯಸಭಾ ಸದಸ್ಯರು’ ಅಂದ ರಬಡ್ಯಾ
‘ಏ ಅವರರ್ನ್ಯಾಕ ಸಸ್ಪೆಂಡ್ ಮಾಡ್ಯಾರು?’ ಅಂದ ಶೌರಿ
‘ಪಾರ್ಲಿಮೆಂಟದಾಗ ವೀಕ್ಷಕರ ಗ್ಯಾಲರಿಯಿಂದ ಜಿಗದು ಹೊಗಿ ಹಾಕಿದ್ರಲಾ ಗೊತೈತಿಲ್ಲ? ಅದರ ಬಗ್ಗೆ ಸ್ಟೇಟಮೆಂಟ್ ಕೊಡ್ರಿ ಅಂತ ವಿರೋಧ ಪಕ್ಷದವರು ಕೇಳ್ಯಾರ’ ಅಂದ ಗುಡುಮ್ಯಾ
‘ಸರಿಯಪಾ ಯಾರು ಕೊಡಬೇಕಂತ?’ ಅಂದ ಗುಂಡ್ಯಾ
‘ಅದೇ ಗೃಹಸಚಿವರಿಗೆ ಕೇಳ್ಯಾರು’ ಅಂದಳು ರಾಶಿ
‘ಶ್ಯಾಣ್ಯಾ’ರು ಏನು ಅಂದಾರು?’ ಅಂದ ಶೌರಿ
‘ಏ ಹಂಗೇನಿಲ್ಲ, ಎಲ್ಲಾ ನಾವು ಎನ್ಕ್ವೈರಿ ಮಾಡ್ತಿವಿ ಅಂತ ಹೇಳ್ಯಾರು ನಮೋ’ ಅಂದಳು ರಾಣಿ
‘ಆದ್ರs, ಇವರು ಇಲ್ಲೇ ಬಂದು ಹೇಳಿಕೆ ಕೊಡ್ರಿ ಅಂತ ಗದ್ದಲಾ ಎಬ್ಬಿಸ್ಯಾರು’ ಅಂತ ಅಂದ ಗುಡುಮ್ಯಾ
‘ಏ ಅದಕ್ಕಲ್ಲಾ, ಮೈಸೂರು ಎಂಪಿ ಆ ಜಿಗಿದವ್ರಿಗೆ ಪಾಸ್ ಕೊಟ್ಟಾನು, ಅವ್ನ ಡಿಸ್ಮಿಸ್ ಮಾಡ್ರಿ, ಅವನ ಬಗ್ಗೆ ವಿಚಾರಣಾ ಆಯೋಗ ನೇಮಸ್ರಿ ಅಂತ ಒತ್ತಾಯ ಮಾಡಿ, ಅಧಿವೇಶನ ನಡಿಲಿಕ್ಕೆ ಬಿಟ್ಟಿಲ್ಲ’ ಅಂದಳು ರಾಣಿ
‘ಅದಕ್ಕ ಯಾರ್ಯಾರು ಗದ್ಲಾ ಮಾಡಕತ್ತ್ಯಾರು ಅವರನೆಲ್ಲಾ ಔಟ್ ಮಾಡ್ಯಾರು’ ಅಂತ ಶೌರಿ ಹೇಳಿದ
‘ಈಗ ಅವರೆಲ್ಲ ಪಾರ್ಲಿಮೆಂಟ ಮುಂದ ಕುಂತು ಸ್ಟ್ರೈಕ್ ಮಾಡಾಕತ್ತಾರು’ ಅಂದ ಗುಂಡ್ಯಾ
‘ಟಗರ ಏನ ಅಂದೈತಿ ‘ಸಿಂಹ’ಕ್ಕ?’ ಅಂತ ಕೇಳಿದ ಕಾಕಾ
‘ಟಗರಿಗೆ ಮೊದ್ಲೆ ‘ಸಿಂಹ’ದ ಮ್ಯಾಗ ಸಿಟ್ಟಿತ್ತು, ಈ ಟೈಮ್ದಾಗ ಛೊಲೊತ್ನೆಂಗೆ ಗುಮ್ಮೇತಿ’ ಅಂದ ಶೌರಿ
‘ ಮತ್ತ ‘ಇಂಡಿಯಾ’ದಿಂದ ಖರ್ಗೆ ಸಾಹೇಬ್ರಿಗೆ ಪಿಎಂ ಕ್ಯಾಂಡಿಡೇಟ್ ಅಂತ ಮಾಡ್ಯಾರಂತಲಾ?’ ಎಂದ ರಬಡ್ಯಾ
‘ಹೋಯಿಂದು ಮಮತಾ ದೀದಿ & ಕೇಜ್ರಿ ಪ್ರಸ್ತಾಪ ಮಾಡ್ಯಾರು’ ಅಂತ ರಾಶಿ ಅಂದಳು
‘ಅಲ್ಲಾ, ಅವ್ರಿಗೆ ರಾಹುಲ ಪ್ರಿಯಾಂಕ ಬ್ಯಾಡ್ಯಾಗೇತೇನು?’ ಅಂದ ಕಾಕಾ
‘ಹೌದ್ದ ಮತ್ತs, ಅವರೆಲ್ಲ ಬರಬಾರದು ಅಂತೇ ಇವರನ್ನ ಮುನ್ನೆಲೆಗೆ ತಂದಾರ’ ಅಂದ ಗುಡುಮ್ಯಾ
‘ ಅಂದ್ರs, ಇದು ಮೊನ್ನಿ ಎಲೆಕ್ಷನ್ದು ಎಫೆಕ್ಟೇನು?’ ಅಂದಳು ರಾಶಿ
‘ಮೊನ್ನೆ ಹಿಂದಿ ಬೆಲ್ಟ್ದಾಗ ‘ಕೈ’ ಬಿತ್ತಲಾ, ಅದರ ಪರಿಣಾಮ ಇದು’ ಅಂತ ನಕ್ಕ ಗುಂಡ್ಯಾ
‘ಎಲ್ಲಿ ಏನರೇ ಆದ್ರs ಇಲ್ಲಿ ಹೀಂಗ ಆಕೈತೇನು ಅಂದ್ರ?’ ಅಂತ ಆಶ್ಚರ್ಯದಿಂದ ಕೇಳಿದ ಕಾಕಾ
‘ಹೌಂದಪಾ ಕಾಕಾ, ನಮೋ ಶಾಣ್ಯಾರು ರಾಮ ಮಂದಿರ ಟ್ರಂಪ್ ಕಾರ್ಡ ಒಗದ್ರs, ಇವರು ಈ ಕಾರ್ಡ ಒಗದಾರು’ ಅಂತ ಅಂದಳು ರಾಣಿ
‘ ಮತ್ತ ರೇಣು ಇದ್ರs ವಿಜಾಪುರದ ಹಿಂಹುಲಿಗಿ ಹುಚ್ಚನಾಯಿ ಅಂತ ಅಂದೈತಲಾ?’ ಅಂತಂದ ರಬಡ್ಯಾ
‘ಹಿಂಹುಲಿ ಒಂದೇ ಸಮನೇ ರಪರಪ ಅಂತೇಳಿ ಸಿಟ್ಟೂರಿಗೆ ಮತ್ತ ಅದರ ಮರಿಗೆ ಬಡಿಯೂದು ನೋಡಿ ತಾಪ ಆಗಿ ಹಂಗ ಅಂದೈತಿ’ ಅಂತ ಅಂದ ಶೌರಿ
‘ಐಸಾ ಬೋಲಕೆ, ಅದು ಚುಂಬೇಶ್ವರ ತನ್ನ ಸ್ಥಾನ ಗಟ್ಟಿ ಮಾಡ್ಕೋತೈತಿ ‘ ಅಂತ ಬಾಶಾ ನಕ್ಕ
‘ಏನಲೇ ಯಪ್ಪಾ, ಅದು ಗಟ್ಟಿ ಮಾಡ್ಕೊಳ್ಳುದ್ರಾಗೇ ಹಿಂಹುಲಿ ಎಲ್ಲಾ ಅಂದ ಮುಗಿಸೇ ಬಿಟೈತಲಾ?’ ಎಂದ ಗುಂಡ್ಯಾ
‘ ಮತ್ತs ಹಿಂಹುಲಿ ಅಂದ್ರ ಸುಮ್ನೆ ಅಂತ ತಿಳಿದಿ ಏನು? ನಾ ಯಾರಿಗೂ ಅಂಜು ಮಗಾ ಅಲ್ಲ, ನೀ ಅಂದ್ರ ನಿಮ್ಮಪ್ಪ ಅಂತೀನಿ, ನಿಮ್ಮ ಎಲ್ಲಾ ಹುಳಕ ಹೊರಗ ತಗದು, ನಿಮ್ಮ ಕಾರಸ್ತಾನ ವಂಶಾಡಳಿತ ಎಲ್ಲಾ ಬಟಾ ಬಯಲ ಮಾಡ್ತಿನಿ, ತಿಳ್ಕೋರಿ ಜರಾ ತಿಳ್ಕೋರಿ ಅಂತ ಗರ್ಜನೆ ಮಾಡೇತಿ’ ಅಂತ
ಜೋಶ್ ದಿಂದ ಹೇಳಿದ ರಬಡ್ಯಾ
‘ಅಸೋಕಾ ವಿಜಿಗೆ ಮಾಡಕ ಆಗದೇ ಇರೂದ್ನ ನಾನ ಮಾಡೀನಿ ಅಂತ ಅಂದತಿ ಹಿಂಹುಲಿ’ ಎಂದ ಶೌರಿ
‘ಬಂಡೆ ವಿರುದ್ಧ ಕೋರ್ಟನ್ಯಾಗ ಕೇಸ್ ಹಾಕಿದ ಗಂಡ್ಸ ನಾ ಒಬ್ನ ನೋಡು ಅಂತ ತೊಡೆ ತಟ್ಟೇತಿ ಹಿಂಹುಲಿ’ ಅಂತ ನಕ್ಕ ಗುಡುಮ್ಯಾ
‘ಬೆಳಗಾವಿ ಅಧಿವೇಶನ್ದಾಗ ಬರೇ ಇಂಥಾ ತೊಡಿ ತಟ್ಟೂದ ಆತ ನೋಡು ‘ ಅಂದ ರಬಡ್ಯಾ
‘ಒಂದಿನ ಬರ ಬಿದ್ದ ಬಗ್ಗೆ ಚರ್ಚೆ ಆಗ್ಲಿಲ್ಲಾ, ಬಡವರು ಹ್ಯಾಂಗ ಬದಕಬೇಕು ಅಂಬೋದರ ಬಗ್ಗೆ ನಯಾಪೈಸೆ ಮಾತಾಡ್ಲಿಲ್ಲ ಯಾರು?’ ಅಂದಳು ರಾಶಿ
‘ಇದ್ದಿದ್ದರಾಗೆ ಆ ಗುರುಮಿಟ್ಕಲ್ಲ ಎಂಎಲ್ಎ ಒಂದಿಟು ಮಾತಾಡಿದ್ನಪಾ, ಸ್ವಾತಂತ್ರ್ಯ ಬಂದು 75 ವರ್ಸ ಆದ್ರೂನು ಕೂಡ ಇನ್ನಾ ಹಳ್ಳ್ಯಾಗ ಶುದ್ಧ ಕುಡಿಯೂ ನೀರ ಜನರಿಗೆ ಸಿಗಂಗಿಲ್ಲಂದ್ರs ಹ್ಯಾಂಗ? ಇದೆಲ್ಲಾ ನಾವು ತಲಿ ತಗ್ಗಸೂ ವಿಚಾರ ಅಂತ ಹೇಳಿದ್ನಪಾ’ ಅಂದಳು ರಾಣಿ
‘ಹಿಂಗೆ ಎಲ್ಲಾರೂ ವಿಚಾರ ಮಾಡಿ, ಜನರಿಗೆ ನೀರು,ಶಾಲೆ, ಆಹಾರ, ವಸತಿ ಒದಗಿಸಿದಂದ್ರs ಜನರ ಬಾಳು ಬಂಗಾರ ಆಕೈತಿ’ ಅಂದಳು ರಾಶಿ
‘ಏ ಹಂಗೆಲ್ಲಾ ಆಗಂಗಿದ್ರs ಹಿಂಗ್ಯಾಕ ಇರ್ತಿತ್ತು ಜನರ ಬಾಳೆ ?’ ಅಂದ ಕಾಕಾ ಬೇಸರದಿಂದ
‘ಅವರಿಗೆ ಜನರ ನೆಮ್ಮದಿ ಬೇಕಿಲ್ಲ, ಅವರಿಗೆ ತಮ್ಮ ಮುಂದಿನ ಪೀಳಿಗೆಯ ರಾಜಕೀಯ ಭವಿಷ್ಯದ ಚಿಂತಿ ಮಾತ್ರ ಐತಿ’ ಅಂತ ಷರಾ ಎಳೆದ ರಬಡ್ಯಾ
‘ಅಲ್ಲಾ ಹಿಂತಾ ಜಮಾನಾದಾಗೂ ಹೆಣ್ಮಕ್ಕಳ್ನ ಬೆತ್ತಲೆ ಮಾಡಿ ಹೊಡಿತಾರಂತಂದ್ರs, ನಾವಿನ್ನಾ ಎಲ್ಲಿ ಅದೀವಿ?’ ಅಂತಂದ ಕಾಕಾ
‘ಜನ್ರಿಗಿ ಬುದ್ಧಿ ಬರಂಗಿಲ್ಲ ತಗಿ, ದೇಶದ ಕಾನೂನ ಬಗ್ಗೆ ಅಂಜಿಕಿ ಇಲ್ಲಾ, ಏನ ಮಾಡಿದ್ರೂ ನಡಿತೈತಿ ನಮ್ಮನ್ನ ಕೇಳವ್ರ ಯಾರ ಅದಾರು ಅಂತ ತಿಳ್ಕೊಂಡತಿ ಒಂದಷ್ಟು ಮೂರ್ಖ ಮಂದಿ’ ಅಂತ ಅಂದಳು ರಾಣಿ
‘ನಡ್ರೇಪಾ ಎಲ್ಲಾರೂ ಚಾ ಕುಡದು, ಬಿಗ್ಬಾಸ್ದಾಗ ಕುಸ್ತಿ ಆಡಕಂತಾರು, ಸರಿಗಮಪ ದಾಗ ಮಸ್ತ ಮಸ್ತ ಹಾಡಾ ಹಾಡಕತ್ತಾರು ಅಲ್ಲಿ ನೋಡಾಕ ಹೋಗೂಮು ಬರ್ರಿ, ಯಾಕಂದ್ರs ಇದು ಹಗ್ಗ ಹರೆಂಗಿಲ್ಲ ಕೋಲ ಮುರೆಂಗಿಲ್ಲ ರೀತಿ ಐತಿ ಬರ್ರಿ’ ಅಂತ ಶೌರಿ ಮತ್ತ ಬಾಶಾ ಎಲ್ಲಾರ್ನೂ ಕರ್ಕೊಂಡ ಹೊಂಟ್ರು


