ಕನ್ನಡಿಗರ ಕೂಗಾಗಿ, ಜನಾಂದೋಲನವಾಗಿ ಡಿ.17ರಂದುಅಸಂಖ್ಯಾತ ಅಭಿಮಾನಿಗಳಿಂದ ಬೆಂಗಳೂರಿನಲ್ಲಿ ಪ್ರತಿಭಟನೆ
– ಸಿದ್ಧಾಪುರ ಶಿವಕುಮಾರ್
ಡಾ.ವಿಷ್ಣುವರ್ಧನ್ ಬರೀ ಜನಪ್ರಿಯ ಅತ್ಯುತ್ತಮ ಕಲಾವಿದರಲ್ಲ, ಸಾಮಾಜಿಕ ಸೇವಕ ಚಿಂತಕರು, ಆಧ್ಯಾತ್ಮಶೀಲರು. ಬರೀ ತನ್ನ ಅಭಿನಯ ಭಾಷಣದ ಮೂಲಕ ಜನರಿಗೆ ಭೋದಿಸಿದವರಲ್ಲ. ತಕ್ಕಂತೆ ಬಾಳಿ ಬದುಕಿದವರು. ಕನ್ನಡ ಭಾಷೆ ನೆಲ ಜಲ ಬಗ್ಗೆ ಕಾಳಜಿಹೊಂದಿದವರು. ಹೆಣ್ಣುಕುಲವನ್ನು ಬರೀ ನಟನೆಯಿಂದ ಹಾಡಿ ಹೊಗಳದೇ ತನ್ನ ಆದರ್ಶದ ಬದುಕಿನ ನಡೆತೆಯಿಂದಲೇ ಗೌರವಿಸುವುದನ್ನು ತೋರಿಸಿದವರು. ಒಬ್ಬ ಕಲಾವಿದ ಬೆಳೆಯಬೇಕಾದಾಗ ಕಿಡಿಗೇಡಿಗಳ ಕಿರುಕುಳ ಸಮಸ್ಯೆ ಸವಾಲುಗಳನ್ನು ಎದುರಿಸಿ ಬೆಳೆಯಬೇಕೆಂಬುದಕ್ಕೆ ಸ್ಪೂರ್ತಿ ಸಾಕ್ಷಿಯಾದವರು. ಪ್ರಶಸ್ತಿ ಪುರಸ್ಕಾರ ಸನ್ಮಾನಗಳ ಗೀಳಿಲ್ಲದೆ ಅದಕ್ಕಿಂತ ಮಿಗಿಲಾಗಿ ಅಭಿಮಾನವನ್ನು ಸಹಜವಾಗಿಯೇ ಸಂಪಾದಿಸಿದವರು. ಮಾನ ಅವಮಾನಗಳ ನಡುವೆ
ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಹೃದಯವಂತರಾದವರು. ತನ್ನ ಆದಾಯಕ್ಕಿಂತ ಅಧಿಕವಾಗಿ ಅಸಂಖ್ಯಾತರಿಗೆ ದಾನ ಧರ್ಮಕ್ಕೆ ಯಾವುದೇ ಪ್ರಚಾರ ಬಯಸದೆ ಕೃತಿ ರೂಪದಲ್ಲಿ ಸಾಕ್ಷಿಯಾದವರು. ವಿಷ್ಣುವರ್ಧನ್ ಇಹಲೋಕ ತ್ಯಜಿಸಿ ಹದಿನಾಲ್ಕು ವರ್ಷಗಳೇ ದಾಟಿದರೂ ಅವರನ್ನು ಅಭಿಮಾನಿಸುವ ಗೌರವಿಸುವ ಸಂತನಂತೆ ಪೂಜಿಸುವವರ ಕ್ರೇಜ್ ಹೆಚ್ಚುತ್ತಲಿದೆ ವಿನಃ ಕಡಿಮೆಯಾಗುತ್ತಿಲ್ಲ ಆಗುವುದೂ ಇಲ್ಲ!
ಅವರೊಬ್ಬ ಶ್ರೇಷ್ಠ ವ್ಯಕ್ತಿಯಾಗಿ ಅವ್ಯಕ್ತ ಜೀವಂತ ಶಕ್ತಿಯಾಗಿ ಪ್ರಭಾವಿಸುತ್ತಲೇ ಇದ್ದಾರೆ. ನೆನಪಿಡಿ, ಸ್ವಚ್ಚಂದ ಮನಸ್ಸಿನವರು ನಿಸ್ವಾರ್ಥ ಸೇವಾ ಕಾಳಜಿಯವರು ಮಾತ್ರವೇ ಹೀಗೆ ಅಸಾಧಾರಣವಾಗಿ ಬೆಳೆದು ಬೆಳಗಲು ಸಾಧ್ಯ. ಇಂತಹ ಅಸಂಖ್ಯಾತ ಅಭಿಮಾನಿಗಳ ಆರಾಧಕ ಶ್ರೇಷ್ಠ ವ್ಯಕ್ತಿಯನ್ನು ರಾಜ್ಯದ ರಾಜಧಾನಿಯಲ್ಲಿ ಪೂಜಿಸಲು ಪುಣ್ಯಭೂಮಿ ಬೇಕೆಂಬ ಬೇಡಿಕೆ ನ್ಯಾಯಸಮ್ಮತವೇ. ಇಂತಹ ನಾಡಿಗೆ ಕೀರ್ತಿ ತಂದ ಮಹನೀಯ ಸಾಧಕ ಶ್ರೇಷ್ಠ ಪ್ರಾತಃಸ್ಮರಣೀಯರನ್ನು ಸೂಕ್ತ ಗೌರವವನ್ನು ತೋರಿಸುವುದು ಘನ ಸರ್ಕಾರದ ಕರ್ತವ್ಯ. ಆದರೆ ಆರು ಜನ ಮುಖ್ಯಮಂತ್ರಿಗಳಿಂದಲೂ ಅಭಿಮಾನ ಸ್ಟುಡಿಯೋ ಪುಣ್ಯಭೂಮಿ ಸಮಸ್ಯೆಯನ್ನು ಸರಿಪಡಿಸುವ ಇಚ್ಚಾಸಕ್ತಿ ತೋರಿಸದೇ ಇರುವುದು ನಿಜವಾಗಿಯೂ ವಿಪರ್ಯಾಸವೇ. ಹೇಳಿ ಕೇಳಿ ಅಭಿಮಾನ ಸ್ಟುಡಿಯೋ ಕಲಾವಿದರಾದ ಬಾಲಣ್ಣನವರಿಗೆ ನೀಡಿದ ಸರ್ಕಾರದ ಅನುದಾನಿತ ಜಾಗವಾದ್ದರಿಂದ ಸರ್ಕಾರಕ್ಕಿದು ದೊಡ್ಡ ವಿಷಯವಲ್ಲ. ಅದೇ ಜಾಗದಲ್ಲಿ ಹಿರಿಯ ಮೇರು ನಟರಾದ ವಿಷ್ಣುವರ್ಧನ್ ಅವರಿಗೂ ಪುಣ್ಯಭೂಮಿಗಾಗಿ ನ್ಯಾಯಸಮ್ಮತವಾಗಿ ಹಂಚುವ ಇಚ್ಚಾಸಕ್ತಿ ಕೊರತೆ ಖಂಡಿತವಾಗಿ ಕಾಣುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ತನ್ನ ಜವಾಬ್ದಾರಿಯನ್ನು ವಿಷ್ಣುವರ್ಧನ್ ಅವರ ಬಗ್ಗೆ ತಕ್ಕದಾಗಿ ತೋರಿಸದೇ ತಮಗೆ ತಾವೇ ಅವಮಾನ ಮಾಡಿಕೊಳ್ಳುತ್ತಿದೆ. ಜೊತೆಗೆ ತಾರತಮ್ಯವನ್ನು ಮೈ ಮೇಲೆ ಎಳೆದುಕೊಂಡಂತೆ ಕಂಡಿದ್ದರಿಂದಲೇ ಸತತ ಸಹನೆಯ ಹೋರಾಟ ನಂತರ ಇದೀಗ ನಾಡಿನಾದ್ಯಂತ ಖಂಡಿಸಲೆಂದೇ ಕನ್ನಡಿಗರ ಕೂಗಾಗಿ ಜನಾಂದೋಲನವಾಗಿ ಇದೇ ಭಾನುವಾರ 17 ಬೆಂಗಳೂರಿನಲ್ಲಿ ಪ್ರತಿಭಟನೆಗೆ ಮುಂದಾಗಿದೆ. ನಮ್ಮ ನಾಡಿನ ಸುಪುತ್ರ ಕನ್ನಡಕ್ಕೆ ಕನ್ನಡನತನಕ್ಕೆ ಕೀರ್ತಿ ತಂದ ಮೇರು ಕಲಾವಿದರಾಗಿ ಜೊತೆಗೆ ಸಾಮಾಜಿಕ ಸೇವಾ ಕಾಳಜಿಗೆ ಸಾಕ್ಷಿಯಾದ ಹೃದಯವಂತ ವಿಷ್ಣುವರ್ಧನ್ ಅವರ ವಿಷಯದಲ್ಲಿ ಸರ್ಕಾರ ಹೀಗೆ ನಡೆದುಕೊಳ್ಳಬಾರದಿತ್ತು. ಇದನ್ನು ಪ್ರಶ್ನಿಸುವುದರಲ್ಲಿ ಪ್ರತಿಯೊಬ್ಬ ಕನ್ನಡಿಗರ ಅಭಿಮಾನಿಗಳ ಹಕ್ಕು ಇದೆ. ಇದಕ್ಕಾಗಿ ನಾಡಿನಾದ್ಯಂತ ಅಭಿಮಾನದ ನಿಸ್ವಾರ್ಥ ಮನಸ್ಸುಗಳು ಮಹಿಳೆಯರು, ಚಿಕ್ಕ ಮಕ್ಕಳು, ವಯೊವೃದ್ಧರು, ಜಾತಿ ಕುಲ ಗೋತ್ರ ಬೇಧಗಳಿಲ್ಲದೆ ಪುಣ್ಯಭೂಮಿ ಪಡೆದೇ ತೀರಲು ಹಗಲಿರುಳು ಶ್ರಮಿಸುತ್ತಿವೆ. ಜೊತೆಗೆ ಮುಖ್ಯವಾಗಿ ನಾಡಿನ ಹಲವಾರು ಹೋರಾಟಗಳ ಸಂಘ ಸಂಘಟಕ ಸಮಿತಿಯವರು ವಿಷ್ಣುವರ್ಧನ್ ಅವರ ಪರವಾಗಿ ಅಭಿಮಾನದಿಂದ ಕೈಜೋಡಿಸಿದ್ದು ನಿಜವಾಗಿಯೂ ಸ್ವಾಗತಾರ್ಹ ಹಾಗೂ ಅಭಿನಂದನೀಯ. ಈ ಬಾರಿ ಸರ್ಕಾರದ ಕಣ್ತೆರೆಯಲಿ ಸಮಸ್ತ ಕನ್ನಡಿಗರ ಒಕ್ಕೊರಲಿನ ಕೂಗಿಗೆ ಪುಣ್ಯಭೂಮಿ ಸತ್ಕಾರ್ಯಕ್ಕೆ ಜಯ ಸಿಗಲಿ.


