ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ಪುನಶ್ಚೇತನ ಶಿಬಿರದ ಸಮಾರೋಪದಲ್ಲಿ ಮಾಜಿ ಎಂಎಲ್ಸಿಅರುಣ ಶಹಾಪೂರ ಅಭಿಮತ
ಸಿಂದಗಿ: ಸಂಸ್ಕೃತ ಭಾಷೆ ಅತ್ಯಂತ ಪುರಾತನ ಭಾಷೆ ನಮ್ಮ ಭಾಷೆ. ಚೈನಾ ದೇಶದಲ್ಲಿಯೂ ಕೂಡಾ ಸಂಸ್ಕೃತ ಬಳಕೆಯಲ್ಲಿ ಇದೆ ಎಂದರೆ ಅದು ಭಾರತದ ಹೆಮ್ಮೆಯ ಸಂಗತಿ. ಆದರೆ ನಮ್ಮ ಸಂಸ್ಕೃತ ಭಾಷೆಯನ್ನು ಭಾರತೀಯರೆ ಆದ ನಾವುಗಳೂ ಅದನ್ನು ಪ್ರಚಾರ, ಪ್ರಸಾರ ಮಾಡದೆ ದೂರ ಮಾಡಿದ್ದೇವೆ ಎಂಬುದೇ ವಿಷಾದನೀಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಕಳವಳ ವ್ಯಕ್ತಪಡಿಸಿದರು.
ಅವರು ಪಟ್ಟಣದ ಶ್ರೀ ಸಾತವಿರೇಶ್ವರ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಮತ್ತು ಶ್ರೀ ಪದ್ಮರಾಜ ಸಂಸ್ಕೃತ ವೇದ ಪಾಠಶಾಲೆ ಇವುಗಳ ಸಹಯೋಗದಲ್ಲಿ ೧೦ ದಿನಗಳ ಕಾಲ ಆಯೋಜಿಸಿರುವ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಪರಂಪರೆಯ ಸಂಕೇತವಾಗಿದೆ. ಈ ಭಾಷೆ ನಮ್ಮ ಸಮಾಜವನ್ನು ಹಲವು ವರ್ಷಗಳಿಂದ ಶ್ರೀಮಂತಗೊಳಿಸುತ್ತಾ ಬಂದಿದೆ.ಇಂದಿನ ಮತ್ತು ಮುಂದಿನ ಪೀಳಿಗೆಗೆ ಈ ಭಾಷೆಯ ಮಹತ್ವ ತಿಳಿಯಪಡಿಸುವುದು ಅತ್ಯಂತ ಅವಶ್ಯವಾಗಿದೆ ಎಂದರು.
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಬಿಎಲ್ಡಿಇ ಸಂಸ್ಥೆಯ ಆರ್ಯೇದಿಕ ಕಾಲೇಜ್ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಮಾತನಾಡಿ, ಸಂಸ್ಕೃತ ಭಾಷೆಯ ಬೆಳವಣಿಗೆಗೆ ಸರ್ಕಾರಗಳು ಹೆಚ್ಚು ಮಹತ್ವ ನೀಡಿ ಇದರ ವ್ಯಾಪ್ತಿಯನ್ನು ವಿಶಾಲ ಮಾಡಬೇಕು. ಪ್ರಾಥಮಿಕ ಹಂತದಿಂದ ಇದರ ಮಹತ್ವ ಮಕ್ಕಳಿಗೆ ಅರಿವು ನೀಡುವಂತಾಗಬೇಕು ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಪ್ರೊ.ಜಿ.ಪಾಲಯ್ಯ ಹಾಗೂ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಸಹಾಯಕ ನೀರ್ದೇಶಕರು ಪ್ರೊ.ಮಲ್ಲನಗೌಡ ಎಸ್ ಮಾತನಾಡಿದರು.
ಸಮ್ಮುಖ ವಹಿಸಿದ ಕನ್ನೋಳ್ಳಿ ಹಿರೇಮಠದ ಶ್ರೀ ಸಿದ್ದಲಿಂಗ ಶೀವಾಚಾರ್ಯರು ಆಶೀರ್ವಚನ ನೀಡಿದರು. ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಶೋಕ ವಾರದ, ಜಗದೀಶ ಕರೆಪ್ಪನವರ, ಬಿ.ಬಿ.ಆರ್ಯರ್, ಚನ್ನಬಸವರಾಜ ಕತ್ತಿ, ವಿರೇಶ ಸ್ತಾçವರಮಠ ಮತ್ತು ಬೆಳಗಾವಿ ಧಾರವಾಡ, ಮೈಸೂರ ವಲಯಗಳ ಸುಮಾರು ೧೫ ಜಿಲ್ಲೆಗಳ ಅನುದಾನಿತ ಮತ್ತು ಅನುದಾನ ರಹಿತ ಸಂಸ್ಕೃತ ಪಾಠಶಾಲೆಯ ಸುಮಾರು ೨೫೦ ಕ್ಕೂ ಶಿಕ್ಷಕರು ಭಾಗವಹಿಸಿದ್ದರು.
ಶಿಕ್ಷಕಿ ಸುವರ್ಣ.ವೈ ನಿರೂಪಿಸಿದರು, ಶಿಕ್ಷಕ ನರಂಸಿವ ಭಟ್ಟ ಸ್ವಾಗತಿಸಿದರು, ಶಿಕ್ಷಕರ ಕಲ್ಮೇಶ ನಾಯಕ ವಂದಿಸಿದರು.

