ಕೊಲ್ಹಾರ: ಸ್ಥಳೀಯ ಪಟ್ಟಣವನ್ನು ತಾಲೂಕು ಕೆಂದ್ರವನ್ನಾಗಿ ಮಾಡಿ ಸುಮಾರು ೧೦-೧೨ ವರ್ಷಗಳೇ ಕಳೆದರೂ ಹೆಸರಿಗೆ ಮಾತ್ರ ತಾಲೂಕು ಕೇಂದ್ರವಾಗಿದ್ದು ಈ ತಾರತಮ್ಯವನ್ನು ಹೋಗಲಾಡಿಸಿ ಪರಿಪೂರ್ಣ ತಾಲೂಕು ಕಚೇರಿಗಳನ್ನು ಹೊಂದಿದ ಕೊಲ್ಹಾರ ತಾಲೂಕು ಕೇಂದ್ರವಾಗಲು ಸಚಿವರಾದ ಶಿವಾನಂದ ಎಸ್ ಪಾಟೀಲ ವಿಶೇಷ ಕಾಳಜಿವಹಿಸಬೇಕೆಂದು ಹಿರೇಮಠದ ಮುರುಘೇಂಧ್ರ ಮಹಾಸ್ವಾಮೀಜಿ ಹಾಗೂ ಕೊಲ್ಹಾರ ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಬ ಕೋಮಾರ ಆಗ್ರಹಿಸಿದರು.
ಈ ಕುರಿತು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂವತ್ತು ಹಳ್ಳಿಗಳನ್ನು ಹಂಚಿಕೆ ಮಾಡಿ ಜನಸಂಖ್ಯೆ ಆಧಾರದ ಮೇಲೆ ಕೊಲ್ಹಾರ ಪಟ್ಟಣವನ್ನು ಹೋರಾಟ ಸಮೀತಿಯವರ ನಿರಂತರ ಹೋರಾಟದ ಫಲವಾಗಿ ಹಿಂದಿನ ಸರಕಾರಗಳು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದವು ಅದರಂತೆ ಕೆಲವೇ ಕೆಲವು ತಾಲೂಕಾ ಆಡಳಿತದ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು ರೈತರಿಗೆ ಸಾರ್ವಜನಿಕರಿಗೆ ಅವಶ್ಯಕವಾದ ತಾಲೂಕಾ ಆಡಳಿತದ ಕಚೇರಿಗಳು ಪೂರ್ಣಪ್ರಮಾಣದಲ್ಲಿ ಬರದೇ ಇರುವದರಿಂದ ಜನರು ಈಗಲು ಮೂಲ ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆಯನ್ನು ತಪ್ಪಿಸಲು ಇದೇ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿ ಸಚಿವ ಶಿವಾನಂದ ಎಸ್ ಪಾಟೀಲರು ಮುಂದಾಗಬೇಕೆಂದರು.
ತಾಲೂಕಾ ಆಡಳಿತದ ಸರಕಾರಿ ಕಚೇರಿಗಳನ್ನು ಪ್ರಾರಂಭಿಸಲು ಮತ್ತು ಮೂಲ ಸೌಕರ್ಯಗಳನ್ನು ದೊರಕಿಸಿಕೊಳ್ಳಲು ಪುನರ್ವಸತಿ ಕೆಂದ್ರವಾದ ಕೊಲ್ಹಾರ ಪಟ್ಟಣದಲ್ಲಿ ಕಟ್ಟಡಗಳು ಮತ್ತು ಜಾಗದ ಕೊರತೆಯೇನು ಇಲ್ಲ ಆದರೂ ಕೂಡ ಮೀನಾಮೇಷ ಎಣಿಸುತ್ತಿರುವುದು ಇಲ್ಲಿನ ಜನರ ಆಶಾಭಾವನೆಗೆ ದ್ರೋಹಬಗೆದಂತಾಗುತ್ತದೆ. ಆದ್ದರಿಂದ ತಾಲೂಕಿಗೆ ಅವಶ್ಯಕವಾಗಿರುವ ಕಚೇರಿಗಳನ್ನು ಸಿಬ್ಬಂದಿ ಸಮೇತ ಪ್ರಾರಂಭಿಸಬೇಕು ಪಕ್ಕದ ಬಬಲೇಶ್ವರ ಮತಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಎಂ.ಬಿ.ಪಾಟೀಲರು ಬಬಲೇಶ್ವರ, ತಿಕೋಟಾ ತಾಲೂಕಿಗೆ ಉಪ ನೋಂದಣಿ ಕಚೇರಿ ಮಂಜೂರಾಗಿದೆ ಎಂದು ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟಿದ್ದು ಅವರಷ್ಟೇ ಪ್ರಭಾವಿಗಳಾದ ಶಿವಾನಂದ ಪಾಟೀಲರು ಪ್ರತಿನಿಧಿಸುವ ಬಸವನ ಬಾಗೇವಾಡಿ ಮತಕ್ಷೇತ್ರದ ಕೊಲ್ಹಾರ ಪಟ್ಟಣದಲ್ಲಿ ಉಪನೊಂದಣಿ ಕಚೇರಿ ಸೇರಿದಂತೆ ತಾಲೂಕು ಕಚೇರಿಗಳು ಪ್ರಾರಂಭವಾಗಲು ಆಮೆ ನಡಿಗೆಯತ್ತ ಸಾಗಿರುವದು ಏಕೆ ಎನ್ನುವದು ಜನರಲ್ಲಿ ಜಿಜ್ಞಾಸೆ ಮೂಡುತ್ತಿದೆ ಎಂದರು.
ಗ್ರೇಡ್-೧ ತಹಶೀಲ್ದಾರ ಕಚೇರಿ ಸೇರಿದಂತೆ ಮೂಲ ತಾಲೂಕು ಕೇಂದ್ರದಿಂದ ಹೊಸದಾಗಿ ಪ್ರಾರಂಭವಾದ ತಾಲೂಕು ಕೇಂದ್ರದಲ್ಲಿ ತಾಲೂಕು ಆಡಳಿತದ ಎಲ್ಲ ಇಲಾಖೆಗಳ ಪ್ರಮುಖ ಹುದ್ದೆಗಳು ಹಾಗೂ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅಸಾಧ್ಯವಾಗಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಹಿಂದೆ ರಾಜಕೀಯ ಕೈವಾಡ ಇರಬಹುದು ಎನ್ನುವ ಶಂಕೆ ವ್ಯಕ್ತವಾಗುತ್ತಿದೆ ಆದ್ದರಿಂದ ಕೊಲ್ಹಾರ ತಾಲೂಕು ವ್ಯಾಪ್ತಿಯ ಹಾಗೂ ಪಟ್ಟಣ ಪಂಚಾಯತಿಯ ಜನಪ್ರತಿನಿಧಿಗಳು ನಾಗರಿಕರು ಮಹಿಳೆಯರು ಒಗ್ಗಟ್ಟಾಗಿ ಪರಿಪೂರ್ಣ ತಾಲುಕು ಕೇಂದ್ರವಾಗುವ ಕುರಿತು ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರನ್ನು ಮತ್ತು ನಮ್ಮ ಭಾಗದ ಶಾಸಕರಾದ ಸಚಿವ ಶಿವಾನಂದ ಪಾಟೀಲರನ್ನು ಭೇಟಿಯಾಗಲು ಸಿದ್ದರಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಸಾರ್ವಜನಿಕರು ಮುಂದಾಗಬೇಕು ಎಂದು ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

