ಸಮಗ್ರ ಇಂಡಿ ಕ್ಷೇಮಾಭಿವೃದ್ದಿ ಸಂಘ, ಇಂಡಿ ಜಿಲ್ಲಾ ಹೋರಾಟ ಸಮಿತಿ ಮತ್ತು ಆರ್ಟಿಕಲ್ ೩೭೧ ಜೆ ಹಕ್ಕು ಒತ್ತಾಯ ಸಮಿತಿ ಪ್ರತಿಭಟನೆ
ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಸಮಗ್ರ ಇಂಡಿ ಕ್ಷೇಮಾಭಿವೃದ್ದಿ ಸಂಘ, ಇಂಡಿ ಜಿಲ್ಲಾ ಹೋರಾಟ ಸಮಿತಿ ಮತ್ತು ಆರ್ಟಿಕಲ್ ೩೭೧ ಜೆ ಹಕ್ಕು ಒತ್ತಾಯ ಸಮಿತಿ ವತಿಯಿಂದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಸಮಗ್ರ ಇಂಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ಕಾಮಗೊಂಡ ಮಾತನಾಡಿ, ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸಬೇಕು. ಜಿಲ್ಲಾ ಕೇಂದ್ರಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.
ಪಾಪು ಕಿತ್ತಳಿ ಮಾತನಾಡಿ, ಸರಕಾರ ನಮ್ಮ ಮನವಿ ಪರಿಗಣಿಸಿ ಇಂಡಿ ಜಿಲ್ಲಾ ಕೇಂದ್ರ ಘೋಷಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸತೀಶ ಕುಂಬಾರ ಮಾತನಾಡಿ, ಸಧ್ಯ ಸರಕಾರದ ಆಡಳಿತ ಯಂತ್ರವೇ ಬೆಳಗಾವಿಯಲ್ಲಿದ್ದು ಅಭಿವೃದ್ಧಿ ದೃಷ್ಠಿಯಿಂದ ಇಂಡಿಗೆ ಪ್ರತ್ಯೇಕ ಜಿಲ್ಲೆ ಸ್ಥಾನಮಾನ ನೀಡಬೇಕು. ಈ ಭಾಗದ ಬಹುದಿನದ ಜಿಲ್ಲಾ ಬೇಡಿಕೆಗೆ ಸರಕಾರ ಸ್ಪಂದಿಸಬೇಕು ಎಂದರು.
ಜಿ.ವಿ.ಬಿರಾದಾರ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಾ|| ರಮೇಶ ಪೂಜಾರಿ,ಎ.ಸಿ.ಪಾಟೀಲ, ಜಗದೀಶ ಕ್ಷತ್ರಿ, ಕಿರಣಕುಮಾರ ಜೋಶಿ, ಸತೀಶ ಕುಂಬಾರ, ಪುರಸಭೆ ಸದಸ್ಯ ಅಯೂಬ ಬಾಗವಾನ, ತಾ.ಪಂ ಮಾಜಿ ಅಧ್ಯಕ್ಷ ಶೇಖರ ನಾಯಕ, ಅವಿನಾಶ ಬಗಲಿ, ಚನ್ನು ದೇವರ, ಮಹೇಶ ಮೈದರಗಿ, ರುಕ್ಮುದ್ದೀನ ಪಟೇಲ, ಸಂತೋಷ ಪರೆಶೇನ್ನವರ, ಮೇಘು ರಾಠೋಡ, ಬಾಲಾಜಿ ರಜಪೂತ, ರಮೇಶ ಅಡಗಲ್ಲ, ಉದ್ದಿಮೆದಾರ ಅನಂತ ಜೈನ, ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಮತ್ತಿತರಿದ್ದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.

