ವಿಜಯಪುರ: ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ 33ನೇ ರಾಜ್ಯ ಸಮ್ಮೇಳನ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 15 ರಿಂದ ಡಿಸೆಂಬರ್ 17ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಡಾ. ವಿದ್ಯಾ ಥೊಬ್ಬಿ ಮತ್ತು ಡಾ. ಶೈಲಜಾ ಬಿದರಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಮ್ಮೇಳನದ ಮುನ್ನಾ ದಿನ ಡಿಸೆಂಬರ್ 14 ರಂದು ಗುರುವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರ ವರೆಗೆ ಬೇಟಿ ಬಚಾವೋ, ಬೇಟಿ ಪಡಾವೋ ವಾಕಥಾನ್ ನಡೆಯಲಿದೆ. ಈ ವಾಕಥಾನ್ಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆ ನೀಡಲಿದ್ದಾರೆ. ವಿಜಯಪುರ ಎಸ್.ಪಿ ರಿಶಿಕೇಶ ಸೋನಾವಣೆ ಚಾಲನೆ ನೀಡಲಿದ್ದಾರೆ. ಬಳಿಕ 9.30 ಗಂಟೆಗೆ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸಂಘದ ರಾಜ್ಯಾಧ್ಯಕ್ಷೆ ಡಾ. ವಿದ್ಯಾ ಥೊಬ್ಬಿ, ಡಾ. ರಾಜಶ್ರೀ ಪಲಾಡಿ ಅವರು ಹೆಣ್ಣುಮಗು ಉಳಿಸಿ ವಿಷಯದಡಿ ಮಾತನಾಡಲಿದ್ದಾರೆ.
ಡಿಸೆಂಬರ್ 15 ರಂದು ಶುಕ್ರವಾರ ಸಂಜೆ 6.30 ಗಂಟೆಗೆ ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಜಯಪುರ- ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅಲ್ಲದೇ, ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಿನ್ಸಿಪಾಲ್ ಡಾ. ಅರವಿಂದ ಪಾಟೀಲ, ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಡಾ. ಎಂ. ಜಿ. ಹಿರೇಮಠ, ಡಾ. ಎಚ್. ನಾಗರಾಜ, ಡಾ. ರಾಜಶ್ರೀ ಪಲಾಡಿ, ಡಾ. ಕಸ್ತೂರಿ ವಿ, ಡೋಣಿಮಠ, ಡಾ. ಭಾರತಿ ರಾಜಶೇಖರ, ಡಾ. ಸುಮನ ಗಡ್ಡಿ, ಅಲ್- ಅಮೀನ ವೈದ್ಯಕೀಯ ಕಾಲೇಜಿನ ಡಾ. ಬಿ. ಎಸ್. ಪಾಟೀಲ, ಸಮ್ಮೇಳನಾ ಸಂಘಟನಾ ಕಾರ್ಯದರ್ಶಿ ಡಾ. ನೀಲಮ್ಮ ಪಾಟೀಲ, ಡಾ. ಶೋಭಾ ಗುಡದಿನ್ನಿ, ಡಾ. ಗೀತಾ ಚೌಧರಿ, ಡಾ. ಕಿರಣ ಓಸ್ವಾಲ್ ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮಕ್ಕೂ ಮೊದಲು ವೃತ್ತಿ ಕೌಶಲ್ಯ ಅಭಿವೃದ್ಧಿ ಕುರಿತು ಐದು ಕಾರ್ಯಾಗಾರಗಳು ನಡೆಯಲಿವೆ.
ಡಿಸೆಂಬರ್ 16 ಮತ್ತು 17 ರಂದು ಕ್ಯಾನ್ಸರ್ ತಡೆಗಟ್ಟುವಿಕೆ, ಸೌಂದರ್ಯವರ್ಧಕ ಸ್ತ್ರೀರೋಗ ಶಾಸ್ತ್ರ, ಎಂಡೊಸ್ಕೋಪಿ ಮತ್ತು ಲ್ಯಾಪ್ರೊಸ್ಕೋಪಿ ಚಿಕಿತ್ಸಾ ವಿಧಾನ, ಕ್ರಿಟಿಕಲ್ ಕೆರ್ ಮತ್ತು ನವಜಾತ ಶಿಶುಗಳ ಆರೈಕೆ ಸೇರಿದಂತೆ ಒಟ್ಟು ಏಳು ವಿಷಯಗಳ ಕುರಿತು ವೈಜ್ಞಾನಿಕ ಗೋಷ್ಠಿಗಳು ನಡೆಯಲಿವೆ. ಈ ಸಂದರ್ಭದಲ್ಲಿ ಖ್ಯಾತ ತಜ್ಞವೈದ್ಯರಾದ ಡಾ. ವಿದ್ಯಾ ಪಂಚೊಲಿಯಾ, ಡಾ. ಕಾಮಿನಿ ರಾವ, ಡಾ. ಸೋಮಶೇಖರ ಪಾಟೀಲ, ಡಾ. ಹೇಮಾ ದೀವಾಕರ ಮೂರು ದಿನಗಳ ಈ ಸಮ್ಮೇಳನದಲ್ಲಿ ದೇಶ- ವಿದೇಶಗಳಿಂದ ಸುಮಾರು 1200 ಪ್ರತಿನಿಧಿಗಳು ಪಾಲ್ಗೋಳ್ಳಲಿದ್ದಾರೆ.
ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ 13 ಪೆಲೋಶಿಪ್ ನೀಡಲಾಗುತ್ತಿದ್ದು, ಸ್ವಾಸ್ತ್ಯ- ಸಖಿ ಹೆಲ್ತ್ಕೇರ್ ಯೋಜನೆಯಡಿ ಸುಮಾರು 500ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷೆ ವಿದ್ಯಾ ಥೊಬ್ಬಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಡಿ.15ರಿಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ರಾಜ್ಯ ಸಮ್ಮೇಳನ
Related Posts
Add A Comment
