ಆಲಮಟ್ಟಿ: ಇಲ್ಲಿ ಶಾಸ್ತ್ರಿ ಜಲಾಶಯ ನಿರ್ಮಿಸಿ ಎರಡು ದಶಕಗಳಿಂದ ನೀರು ಸಂಗ್ರಹಿಸುತ್ತಿದ್ದರೂ ಜಿಲ್ಲೆಯನ್ನು ಸಮಗ್ರ ನೀರಾವರಿ ಏಕೆ ಮಾಡುತ್ತಿಲ್ಲ? ಈ ಭಾಗದ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಇಟಗಿಯ ಗುರುಶಾಂತವೀರ ಸ್ವಾಮೀಜಿ ಹೇಳಿದರು.
ಸೋಮವಾರ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿಯ ಆವರಣದಲ್ಲಿ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ) ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಆಲಮಟ್ಟಿ ಘಟಕದವತಿಯಿಂದ ಆಲಮಟ್ಟಿ ಜಲಾಶಯ ೫೧೯.೬ಮೀ.ದಿಂದ ೫೨೪.೨೫೬ಮೀ.ಗೆ ಎತ್ತರಿಸಿ ಜಿಲ್ಲೆಯನ್ನು ಸಮಗ್ರ ನೀರಾವರಿಗೊಳಪಡಿಸಿ ಎಂದು ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಆಮರಣ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಗೆ ನೀರು ಕೊಡಬೇಕಾದರೆ ಸ್ಕೀಂ.ಗಳನ್ನು ಹೇಳುತ್ತಿದ್ದೀರಿ, ಅನ್ಯ ಜಿಲ್ಲೆಗಳಿಗೆ ನೀರು ಕೊಡಲು ಸ್ಕೀಂ.ಗಳಿಲ್ಲವೇ? ಜಿಲ್ಲೆಯಲ್ಲಿನ್ನು ಸಮರ್ಪಕವಾಗಿ ಕಾಲುವೆ ಜಾಲಗಳನ್ನೂ ನಿರ್ಮಿಸುತ್ತಿಲ್ಲವೇಕೆ? ಜಿಲ್ಲೆಗೆ ನೀರು ಕೊಡಬೇಕಾದರೆ ಜಲಾಶಯ ಎತ್ತರದ ಸಬೂಬು ಹೇಳುತ್ತಿದ್ದೀರಿ, ಹಾಗಿದ್ದರೆ ಜಲಾಶಯವನ್ನು ತ್ವರಿತವಾಗಿ ಎತ್ತರಿಸಲು ಅಗತ್ಯಕ್ರಮಕೈಗೊಳ್ಳಬೇಕಾಗಿರುವುದು ಸರ್ಕಾರಗಳ ಕೆಲಸ. ಇದರ ಶಾಸಕರು, ಸಚಿವರು, ಸಂಸದರುಗಳು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿಲ್ಲವೇಕೆ? ಈಗ ನಡೆಯುತ್ತಿರುವ ಅಧಿವೇಶನದಲ್ಲಾದರೂ ಈ ಭಾಗದ ಎಲ್ಲಾ ರಾಜಕೀಯ ಪಕ್ಷಗಳ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರುಗಳು ವಿಧಾನಮಂಡಲದಲ್ಲಿ ಹಾಗೂ ಸಂಸದರುಗಳು ಲೋಕಸಭೆಯಲ್ಲಿ ಗಟ್ಟಿ ಧ್ವನಿಯಾಗಿ ಮಾತನಾಡಿ ಈ ಭಾಗದ ಜನತೆ ನ್ಯಾಯ ಒದಗಿಸಿಕೊಡಿ ಎಂದು ಹೇಳಿದರು.
ರಾಜ್ಯದ ಸುಮಾರು ೧೨ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣೆಯನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಜನ-ಜಾನುವಾರುಗಳ ದಾಹ ನಿವಾರಿಸುವದರೊಂದಿಗೆ ಬರದಿಂದ ಬೇಸತ್ತಿರುವ ಭೂ ಮಾತೆಗೆ ನೀರುಣಿಸಿ ಬೆಳೆಬೆಳೆಯಲು ಪಕ್ಷಾತೀತವಾಗಿ ಎಲ್ಲರೂ ಧ್ವನಿಯೆತ್ತಿ ಸರ್ಕಾರದ ಕಣ್ತೆರೆಸಬೇಕು ಎಂದು ನುಡಿದರು.
ಧರಣಿಯಲ್ಲಿ ನಿಡಗುಂದಿ ರುದ್ರೇಶ್ವರ ಸಂಸ್ತಾನದ ರುದ್ರಮುನಿ ಸ್ವಾಮೀಜಿ, ಬಸವರಾಜ ಕುಂಬಾರ, ಗುರುನಾಥ ಬಗಲಿ, ಬಿ.ಎಂ.ಕೋಕರೆ, ತಿರುಪತಿ ಬಂಡಿವಡ್ಡರ, ಬಸವರಾಜ ಬಾಗೇವಾಡಿ, ಮಲ್ಲನಗೌಡ ಪಾಟೀಲ, ಗುರುರಾಜ ವಡ್ಡರ, ತಿರುಪತಿ ವಡ್ಡರ, ಸಂಗಣ್ಣ ಕೋತಿನ್, ರೇಷ್ಮಾ ಪಡೇಕನೂರ, ಲಕ್ಷ್ಮೀ ರಾಠೋಡ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಸೈದಮ್ಮಾ ಬೆಣ್ಣಿ ಮೊದಲಾದವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

