ತಾಳಿಕೋಟಿ ತಾಲೂಕಿನ ಆಸ್ಕಿ, ಬೆಕಿನಾಳ, ಬೂದಿಹಾಳ ಹಾಗೂ ಹುಣಶ್ಯಾಳ ಕೆರೆಗಳು | ಜಿಲ್ಲಾಧಿಕಾರಿಗೆ ಮನವಿ
ವಿಜಯಪುರ: ಜಿಲ್ಲೆಯ ತಾಳಿಕೋಟಿ ತಾಲೂಕಿನ ಆಸ್ಕಿ, ಬೆಕಿನಾಳ, ಬೂದಿಹಾಳ ಹಾಗೂ ಹುಣಶ್ಯಾಳ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಟಿ.ಬೂಬಾಲನ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ಈ ವರ್ಷ ಒಟ್ಟಾರೆ ಮಳೆ ಬಾರದಿರುವುದರಿಂದ ಬರಲಿರುವ ಬೇಸಿಗೆ ಸಮಯದಲ್ಲಿ ರೈತರಿಗೆ, ಜನಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದೇ ಸಮಸ್ಯೆ ಇಡಾಗಬೇಕಾಗುತ್ತದೆ, ಕೂಡಲೆ ಅಧಿಕಾರಿಗಳ ಜೊತೆ ಚರ್ಚಿಸಿ ಈ ೪ ಕೆರೆಗಳನ್ನು ತುಂಬಬೇಕು ಎಂದು ಮನವಿ ಸಲ್ಲಿಸಿ ಆಗ್ರಹಿಸಿದರು.
ಮುಳವಾಡ ಏತನೀರಾವರಿ, ಬೂದಿಹಾಳ-ಪೀರಾಪುರ, ಏತನೀರಾವರಿ ಯೋಜನೆಗಳು ರೈತರಿಗೆ ಅನುಕೂಲವಾಗುವ ಯೋಚನೆಯನ್ನಿಟ್ಟುಕೊಂಡು ಸರಕಾರದ ಕೋಟ್ಯಾಂತರ ರೂಪಾಯಿ ಹಣ ವ್ಯಯ ಮಾಡಿ ಪ್ರಾರಂಭ ಮಾಡಿರುವ ಯೋಜನೆಗಳು ಇನ್ನು ಮುಗಿದಿಲ್ಲ, ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದ್ದರು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ, ಆದ್ದರಿಂದ ತಾವುಗಳು ಕುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸರಕಾರಕ್ಕೆ ಹಾಗೂ ರೈತರಿಗೆ ಆಗುತ್ತಿರುವ ನಷ್ಟವನ್ನು ತಡೆಯಬೇಕು, ಅದೇರೀತಿ ರೈತರಿಗೆ ಈ ನೀರಾವರಿ ಯೋಜನೆಗಳು ವರಧಾನವಾಗುವಂತೆ ಮಾಡಬೇಕು ಎಂದರು.
ಆಸ್ಕಿ-ಕಲಕೇರಿ, ಕಲಕೇರಿ- ತಾಳಿಕೋಟಿ ವರೆಗಿನ ಡಾಂಬರ ರಸ್ತೆ ಭೂಮಿ ಪೂಜೆ ಆಗಿ ವರ್ಷಗಳೆ ಕಳೆದರೂ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ, ಕೂಡಲೆ ಗುಣಮಟ್ಟಾದ ರಸ್ತೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಳಿಕೋಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಕಲಕೇರಿ ಹೋಬಳಿ ಅಧ್ಯಕ್ಷರಾದ ಮಹಿಬೂಬ ಬಾಷಾ ಮನಗೂಳಿ, ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

