೨೦೦೦ಕಿ.ಮೀ ದೂರ | ೫೫ ದಿನಗಳ ಪಯಣ | ಸತತ ೪೫ ವರ್ಷಗಳಿಂದ ಮಾಲೆಧಾರಣೆ | ೨೪ ವರ್ಷದಿಂದ ಪಾದಯಾತ್ರೆ
ಸಿಂದಗಿ: ನಿರಂತರವಾಗಿ ೨೪ ವರ್ಷಗಳಿಂದ ಸುಮಾರು ೨೦೦೦ಕಿ.ಮೀ ೫೫ ದಿನಗಳವರೆಗೆ ಬರಿಗಾಲಿನಲ್ಲಿ ಪಾದಯಾತ್ರೆಯ ಮೂಲಕ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರುಶನ ಪಡೆಯುವ ಭಕ್ತರೊಬ್ಬರು ಸಿಂದಗಿ ನಗರಕ್ಕೆ ಗುರುವಾರ ಆಗಮಿಸಿದ್ದರು.
ಅವರನ್ನು ಪಟ್ಟಣದ ಎಪಿಎಂಸಿ ಯಾರ್ಡಿನ್ ಧರ್ಮಶಾಸ್ತಾ ಸನ್ನಿಧಾನಂನ ಅಯ್ಯಪ್ಪಸ್ವಾಮಿ ಮಾಲಾಧಾರಿ ಕಿರಣ ಶಿವಸಿಂಪಿ ಗುರುಸ್ವಾಮಿ ಹಾಗೂ ವ್ರತಧಾರಿಗಳು ಅವರನ್ನು ಸ್ವಾಗತಿಸಿ, ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.
ಉಪೇಂದ್ರಸ್ವಾಮಿ ಪೂಜಾರಿ ಎಂಬುವವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿ. ಇವರೇ ಈ ಯಾತ್ರೆಯ ಭಕ್ತರು. ಹಲವು ವರ್ಷಗಳ ಹಿಂದಯೇ ಜೀವನೋಪಾಯಕ್ಕಾಗಿ ಉದ್ಯೋಗವನ್ನು ಅರಸಿಕೊಂಡು ದೂರದ ಮುಂಬೈ ಪಟ್ಟಣಕ್ಕೆ ತೆರಳಿದ್ದರು. ೧೯೮೯ರಲ್ಲಿ ಮುಂಬೈನಲ್ಲಿ ಯಾರೋ ಶಬರಿಮಲೆ ಸ್ವಾಮಿ ಅಯ್ಯಪ್ಪನ ವ್ರತ ಆಚರಣೆ ಮಾಡು, ಮಾಲೆ ಧರಿಸು ಎಂದು ಹೇಳಿದ್ದಕ್ಕಾಗಿ ಭಕ್ತಿಯಿಂದ ಮಾಲೆ ಧರಿಸಿ ಸು.೩-೪ ವರ್ಷಗಳವರೆಗೆ ಶಬರಿಗೆ ಹೋಗಿ ಬಂದಿದ್ದರು. ೪೫ ವರ್ಷಗಳಿಂದ ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಧರಿಸುತ್ತಲೇ ಬಂದಿದ್ದಾರೆ. ಇವರು ಶಬರಿಮಲೆಗೆ ಕಾಲ್ನಡಿಗೆಯ ಮುಖಾಂತರ ಬರುತ್ತೇನೆ ಎಂದು ೧೯೯೩ರಲ್ಲಿ ಹರಕೆಯನ್ನು ಹೋರುತ್ತಾರಂತೆ, ಅಂದಿನಿಂದ ೧೯೯೯ರಿಂದ ಈ ಅಯ್ಯಪ್ಪನ ಭಕ್ತ್ತ ಸತತವಾಗಿ ಪಾದಯಾತ್ರೆ ಮಾಡುತ್ತಿದ್ದು, ಪ್ರಸ್ತುತ ೨೪ ವರ್ಷಗಳಾಯಿತು. ಪ್ರತಿಬಾರಿಯೂ ಬರಿಗಾಲಿನಲ್ಲಿ ಮುಂಬೈನಿಂದ ಪ್ರಾರಂಭವಾಗುವ ಪಾದಯಾತ್ರೆಯು ಕರ್ನಾಟಕ, ಆಂಧ್ರ, ತಮಿಳುನಾಡು ಮುಖಾಂತರ ಕೇರಳದ ಶಬರಿಮಲೆಗೆ ಜನೆವರಿ ತಿಂಗಳ ಮಕರ ಸಂಕ್ರಮಣದಂದು ಕೊನೆಗೊಳ್ಳುತ್ತದೆ.
*ಸ್ಫೂರ್ತಿ ನೀಡುತ್ತಿರುವ ಪಾದಯಾತ್ರೆ*
ವಾಹನ ಸೌಲಭ್ಯಗಳಿಲ್ಲದ ಕಾಡು, ಪರ್ವತ, ಸರಿಯಾಗಿಲ್ಲದ ರಸ್ತೆ ಹಾಗೂ ತಗ್ಗು ದಿನ್ನೆಗಳ ಮದ್ಯೆದಲ್ಲಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಈ ಭಕ್ತ ಹಲವಾರು ನಗರಗಳನ್ನು ಪ್ರವೇಶ ಮಾಡುತ್ತಿದ್ದಂತೆ ಆ ಪ್ರದೇಶದ ಅಯ್ಯಪ್ಪಸ್ವಾಮಿ ವ್ರತಧಾರಿಗಳು ಭಕ್ತಿಭಾವದಿಂದ ಸ್ವಾಗತಿಸಿ, ಪ್ರಸಾದವನ್ನುಣಿಸಿ ತುಂಬು ಹೃದಯದಿಂದ ಬೀಳ್ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ಇವರಿಗೆ ಹಲವಾರು ಅಯ್ಯಪ್ಪಸ್ವಾಮಿ ವ್ರತಧಾರಿಗಳು ಸ್ಪೂರ್ತಿ ನೀಡುತ್ತಿದ್ದಾರೆ.
ಸಿಂದಗಿ ತಾಲೂಕಿನ ಕೆರೂಟಗಿ ಗ್ರಾಮದ ಅರುಣಕುಮಾರ ಬಿರಾದಾರ ಎನ್ನುವ ವ್ರತಧಾರಿ ಎರಡನೆಯ ಬಾರಿ ಹಾಗೂ ಮೊದಲ ಬಾರಿಗೆ ಮುಂಬೈಯಿಂದ ಅವರ ಜೊತೆಯಾಗಿ ಪಾಂಡು ತಿಮ್ಮಪ್ಪ ಶೆಟ್ಟಿ ಇವರ ಪಾದಯಾತ್ರೆ ಸ್ಪೂರ್ತಿಯಾಗಿದ್ದು, ಉಪೇಂದ್ರಸ್ವಾಮಿ ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ನಗರವನ್ನು ಪ್ರವೇಶಿಸಿದ ಉಪೇಂದ್ರ ಸ್ವಾಮಿಯನ್ನು ಪಟ್ಟಣದ ಎಪಿಎಂಸಿ ಯಾರ್ಡಿನ ರೈತಭವನದಲ್ಲಿರುವ ಶ್ರೀ ಧರ್ಮಶಾಸ್ತಾ ಸನ್ನಿಧಾನಂ ಮಾಲಾಧಾರಿಗಳು ಕಿರಣ ಶಿವಸಿಂಪಿ ಗುರುಸ್ವಾಮಿಗಳು, ಆನಂದ ಮಲ್ಲೇದ, ಬಸವರಾಜ ನಾವಿ, ಪ್ರವೀಣ, ಅರವಿಂದ ವಸ್ತ್ರದ, ಹಣಮಂತ ಕುಂಬಾರ, ರಾಜು ಬಡಿಗೇರ, ರಾಜು ಉಪ್ಪಿನ, ಶಾಂತೂ ಬಿರಾದಾರ, ಶಿವಾನಂದ ಪರಸಪ್ಪಗೋಳ, ರಾಘವೇಂದ್ರ ಕುಂಬಾರ ಗುರುಸ್ವಾಮಿಗಳ ನೇತೃತ್ವದಲ್ಲಿನ ತಂಡದ ವ್ರತಧಾರಿಗಳು ಭಕ್ತಿಯಿಂದ ಸ್ವಾಗತಿಸಿ ನಗರದ ಪ್ರಮುಖ ರಸ್ತೆಗಳ ಮೂಲಕ ಭಕ್ತಿಯಿಂದ ಅಯ್ಯಪ್ಪಸ್ವಾಮಿಯ ಜಯಘೋಷದೊಂದಿಗೆ ಮುಂದಿನ ಪಯಣಕ್ಕೆ ಬೀಳ್ಕೊಟ್ಟರು.

