ನಿಡಗುಂದಿಯಲ್ಲಿ ’ಪ್ರೇರಣಾ-೨೦೨೩’ ಕಾರ್ಯಕ್ರಮದಲ್ಲಿ ಅಭಿಷೇಕ ಖ್ಯಾಡಿ ಅಭಿಮತ
ನಿಡಗುಂದಿ: ಓದುವ ಪ್ರವೃತ್ತಿ ಬೆಳೆಸಿಕೊಂಡು, ಓದಿನ ಜತೆ ನಮ್ಮ ವೈಯಕ್ತಿಕ ಪ್ರವೃತ್ತಿಗಳಿಗೂ, ಮನೋರಂಜನೆಗೂ ಆದ್ಯತೆ ಎಷ್ಟು ನೀಡಬೇಕು? ಎಂಬುದನ್ನು ನಮ್ಮಷ್ಟಕ್ಕೆ ನಾವೇ ಅರಿತುಕೊಂಡು, ಅದೇ ರೀತಿ ಸಾಗಿದರೆ ಯಶಸ್ವಿ ಖಂಡಿತ ಸಾಧ್ಯ ಎಂದು ನೌಕಾಪಡೆಯ ಲೆಫ್ಟಿನಂಟ್ ಆಲಮಟ್ಟಿಯ ಅಭಿಷೇಕ ಖ್ಯಾಡಿ ಅಭಿಪ್ರಾಯಪಟ್ಟರು.
ಪಟ್ಟಣದ ಜಿವಿವಿಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿಡಗುಂದಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಪ್ರೇರಣಾ-೨೦೨೩ ಕಾರ್ಯಕ್ರಮ ಅಂಗವಾಗಿ, ಎನ್ ಡಿಎ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಶಾಲಾ ಗ್ರಂಥಾಲಯದಲ್ಲಿ ಪುಸ್ತಕ ಓದುವ ಚಟ ಹೆಚ್ಚಿಸಿಕೊಳ್ಳಿ, ವಿದ್ಯಾರ್ಥಿಗಳಲ್ಲಿ ಈಗ ಮೊಬೈಲ್ ಹಾಗೂ ಸಾಮಾಜಿಕ ಜಾಲ ತಾಣದ ಬಳಕೆ ಹೆಚ್ಚಿದೆ. ಅದನ್ನೇ ಕಲಿಕೆಗಾಗಿ ಸದುಪಯೋಗ ಮಾಡಿಕೊಳ್ಳಬೇಕು, ಬುದ್ಧಿಶಕ್ತಿ ಹೆಚ್ಚಿಸುವ ಗೇಮ್ ಗಳನ್ನು ಆಡಬೇಕು, ಜ್ಞಾನ ಪಡೆಯುವ ಯೂಟ್ಯೂಬ್ ಚೆನಲ್ ಗಳನ್ನು ನೋಡಬೇಕು, ಒಮ್ಮೆಲೆ ಈಗಿರುವ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ, ಅದನ್ನು ಹಂತ ಹಂತವಾಗಿ ಬದಲಾಯಿಸಿಕೊಳ್ಳಿ ಎಂದರು.
ಯಾವುದೇ ಕಾರ್ಯವಿರಲಿ, ಓದಿರಲಿ, ಮನೆಗೆಲಸವಿರಲಿ, ಕ್ರೀಡೆಯಿರಲಿ ಅದನ್ನು ಖುಷಿಯಿಂದ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಅಂದಾಗ ಅಧ್ಯಯನ ಜತೆಗೆ ಬದುಕಿನ ವ್ಯಕ್ತಿತ್ವ ಬದಲಾವಣೆಗೂ ಕಾರಣವಾಗುತ್ತದೆ ಎಂದರು.
ಸೇನೆಯ ಮೂರು ವಿಭಾಗದ ಅಧಿಕಾರಿಯಾಗಲು ಎನ್ ಡಿಎ ಅಕಾಡೆಮಿ ಸೇರುವುದು ಒಳ್ಳೆಯ ಅವಕಾಶ, ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮ ತರಬೇತಿ ನೀಡುವ ಸಂಸ್ಥೆಯಾಗಿದೆ ಎಂದರು. ಎನ್ ಡಿಎ ಪಿಯುಸಿ ದ್ವಿತೀಯ ವರ್ಷ ಓದುವಾಗಲೇ ಕಟ್ಟಬಹುದು, ಒಟ್ಟಾರೇ ೧೭.೫ ವರ್ಷ ವಯಸ್ಸಿನಿಂದ ೧೯.೫ ವರ್ಷ ವಯಸ್ಸಿನವರೆಗೂ ಪರೀಕ್ಷೆ ಕಟ್ಟಬಹುದು. ಆಯ್ಕೆಗಾಗಿ ಐದು ದಿನಗಳ ಕಾಲ ನಡೆಯುವ ವ್ಯಕ್ತಿತ್ವ ಪರೀಕ್ಷೆ ಜಗತ್ತಿನಲ್ಲಿಯೇ ಅತ್ಯಂತ ಕಠಿಣ, ವಿಶ್ವಾಸಾರ್ಹ ಪರೀಕ್ಷೆ ಎನಿಸಿದೆ ಎಂದರು.
ಭೂಸೇನೆಯ ಲೆಫ್ಟಿನಂಟ್ ಸಿಂದಗಿ ತಾಲ್ಲೂಕಿನ ಗಬಸಾವಳಗಿ ಗ್ರಾಮದ ಅರುಣ ಬಿರಾದಾರ ಮಾತನಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿದರು.
ಜಿವಿವಿಎಸ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ ಅನೂಪ್ ನಾಗಠಾಣ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯ ಮೇಲೆ ಬಿ.ಎಸ್. ನಾಯಕ, ಜೆ.ಜಿ. ವಾರಿ, ನೌಕರರ ಸಂಘದ ಅಧ್ಯಕ್ಷ ಆರ್.ಎ. ನದಾಫ್, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಸಲೀಂ ದಡೆದ, ರಾಘವೇಂದ್ರ ವಂದಗನೂರ, ರಾಜು ಹಲಗಿ ಮತ್ತೀತರರು ಇದ್ದರು.

