ಮಿನಿ ವಿಧಾನಸೌಧ, ಬಸ್ ಡಿಪೋ, ವಿದ್ಯುತ್ ಬಿಲ್ ಕೌಂಟರ್, ರೈತ ಸಂಪರ್ಕ ಕೇಂದ್ರ ಮತ್ತು ಕೆರೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ
ಕಲಕೇರಿ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮವನ್ನು ಹೋಬಳಿಯನ್ನಾಗಿಸುವ ಸಲುವಾಗಿ ೨೦೦೩ ರಿಂದಲೂ ಹೋರಾಟ ಮಾಡುತ್ತಾ ಬಂದಿದ್ದು ಯಾರೂ ಈ ಕಡೆ ಗಮನ ಹರಿಸುತ್ತಿಲ್ಲ. ಈಗಲಾದರೂ ಕಲಕೇರಿಯನ್ನು ಹೋಬಳಿ ಎಂದು ಘೋಷಿಸಿ ಮೂಲ ಸೌಲಭ್ಯಗಳನ್ನು ಒದಗಿಸಿ ರೈತರು, ಕೂಲಿಕಾರ್ಮಿಕರು, ಬಡವರು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ನಿವಾರಿಸಲು ಮುಂದಾಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಮುಖಂಡರಾದ ಡಾ.ಈರಣ್ಣ ಗುಮಶೆಟ್ಟಿ, ಯಮನೂರಿ ಕುಲಕರ್ಣಿ ಸೇರಿದಂತೆ ಅನೇಕ ಮುಖಂಡರು ಆಗ್ರಹಿಸಿದರು.
ಗ್ರಾಮದ ಮುಖಂಡರು ಮತ್ತು ಪ್ರಗತಿಪರ ಚಿಂತಕರು ಕಲಕೇರಿಯನ್ನು ಹೋಬಳಿ ಮಾಡುವಂತೆ ಆಗ್ರಹಿಸಿ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾ ಸಭೆಯಲ್ಲಿ ಅವರು ಮಾತನಾಡಿದರು.
ಮುಖಂಡರಾದ ಯಮನೂರಿ ಕುಲಕರ್ಣಿಯವರು ಮಾತನಾಡಿ, ಅದಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಯನ್ನು ಚರ್ಚಿಸಲು ಎರಡು ದಿನಗಳನ್ನು ಮೀಸಲಿಟ್ಟಿದ್ದು, ಈ ನಿಟ್ಟಿನಲ್ಲಿ ನಾವು ಆಗ್ರಹಪಡಿಸುವುದೇನೆಂದರೆ ದಯವಿಟ್ಟು ಕಲಕೇರಿ ಗ್ರಾಮವನ್ನು ಹೋಬಳಿ ಮಾಡಿ ಇಲ್ಲಿನ ಸುತ್ತಮುತ್ತಲಿನ ಸುಮಾರು ೪೦ ಹಳ್ಳಿಗಳ ಜನರ ಸಮಸ್ಯೆಯನ್ನು ನಿವಾರಿಸಲು ಮುಂದಾಗಬೇಕು ಹಾಗೂ ಗ್ರಾಮದ ಪ್ರಮುಖ ಬೇಡಿಕೆಗಳಾದ ರೈತ ಸಂಪರ್ಕ ಕೇಂದ್ರ ಇಲ್ಲದ್ದರಿಂದ ೩೦ ರಿಂದ ೩೫ ಕೀ.ಮಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ರೈತ ಸಂಪರ್ಕ ಕೇಂದ್ರ ಸ್ಥಾಪಿಸುವುದು ಮತ್ತು ಸಾರಿಗೆ ಸಚಿವ ರಾಮಲಿಂಗಾರಡ್ಡಿಯವರು ಇತ್ತ ಗಮನ ಹರಿಸಿ ಬಸ್ಸ್ಯಾಂಡ್ ಸುಧಾರಣೆ ಕಾರ್ಯ ಮಾಡಬೇಕು, ಬಹಳ ದಿನಗಳ ಬೇಡಿಕೆಯಾದ ಮಿನಿ ಬಸ್ ಡಿಪೋಗಾಗಿ ಜಾಗದ ಲಭ್ಯತಿಯಿದ್ದು ಕೂಡಲೇ ಮಿನಿ ಬಸ್ಡಿಪೋ ಮಾಡಬೇಕು, ಕುದರಗುಂಡ ಮತ್ತು ಹುಣಶ್ಯಾಳ ಕೆರೆ ತುಂಬುವ ಯೋಜನೆ ಇನ್ನೂ ಪೂರ್ಣವಾಗಿಲ್ಲ, ಮಾನ್ಯ ಮುಖ್ಯ ಮಂತ್ರಿಗಳು, ಕಂದಾಯ ಸಚಿವರು, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಗಮನಹರಿಸಿ ಕೂಡಲೇ ಕಲಕೇರಿಯನ್ನು ಹೋಬಳಿ ಮಾಡಿ ಜನರ ಬವಣೆಯನ್ನು ತಪ್ಪಿಸಬೇಕೆಂದು ಹೇಳಿದರು.
ಮುಖಂಡರಾದ ಡಾ.ಈರಣ್ಣ ಗುಮಶೆಟ್ಟಿಯವರು ಮಾತನಾಡಿದರು.
ಪತ್ರಿಕಾ ಸಭೆಯಲ್ಲಿ ನಾನಾಗೌಡ ಚೌಧರಿ, ಬಾಪು ದೇಸಾಯಿ, ರಾಜು ದೇಸಾಯಿ, ವೀರೇಶ ಆಲಗೂರ ಸೇರಿದಂತೆ ಇತರರು ಇದ್ದರು.

