ತಾರಕಕ್ಕೇರಿದ ಶಾಸಕ ಯತ್ನಾಳ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ ವೈಮನಸ್ಸು
ವಿಜಯಪುರ: ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವಾಚ್ಯ ಶಬ್ದದಿಂದ ತಮ್ಮನ್ನು ನಿಂದಿಸಿದ ಶಾಸಕ ಬಸನಗೌಡ ಯತ್ನಾಳ ಮೆದುಳು ನಾಲಿಗೆಗೆ ಸಂಪರ್ಕವಿಲ್ಲದ ಓರ್ವ ಅನಾಗರಿಕ ವ್ಯಕ್ತಿ ಎಂದು ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಮತ್ತು ವಕ್ತಾರ ಸುರೇಶ ಬಿರಾದಾರ ಕುಟುಕಿದರು.
ಸೋಮವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯುದ್ದಕ್ಕೂ ಶಾಸಕ ಯತ್ನಾಳರ ವಿರುದ್ಧ ಅವರು ಏಕವಚನದಲ್ಲಿಯೇ ತೀವ್ರ ವಾಗ್ದಾಳಿ ನಡೆಸಿದರು.
ಇವರನ್ನು ಶಾಸಕರನ್ನಾಗಿ ಮಾಡಿದ್ದೇ ನಾವು. ನನ್ನನ್ನೇ ಯತ್ನಾಳ ಅವರು ನಗರದ ದಾನಮ್ಮ ದೇವಿಯ ಕಾರ್ಯಕ್ರಮದಲ್ಲಿ ಲೋಫರ್, ಎಂದು ಬೈದಿದ್ದಾರೆ. ಗಜ್ಜ ಇಡತೀನಿ ಎಂದಿದ್ದಾರೆ. ಚುನಾವಣೆಯಲ್ಲಿ ಇವರ ಸೋಲಿಗಾಗಿ ಹಣ ಹಂಚುತ್ತಿದ್ದೆ ಎಂದು ಸುಳ್ಳು ಆರೋಪ ಮಾಡಿದ ಇವರು ಇದನ್ನು ರುಜುವಾತು ಪಡಿಸಿದರೆ ತಾವು ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಬಿರಾದಾರ ಸವಾಲು ಹಾಕಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನೂ ಸಹ ಬಿಜೆಪಿ ಟಿಕೆಟ್ ಕೇಳಿದ್ದರಿಂದ ಯತ್ನಾಳರು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇವಲ ಆರು ಸಾವಿರ ಮತಗಳಿಂದ ಗೆದ್ದ ಯತ್ನಾಳರದು ಗೆಲುವಲ್ಲ. ರಾಜ್ಯ ನಾಯಕನೆಂದುಕೊಳ್ಳುವ ಇವರಿಗೆ ಚುನಾವಣೆಯಲ್ಲಿ ಮೂವತ್ನಾಲ್ಕು ಕ್ಷೇತ್ರದಲ್ಲಿ ಇವರ ಉಸ್ತುವಾರಿ ಇತ್ತು. ಅಲ್ಲೆಲ್ಲ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ.
ಯತ್ನಾಳ್ ನಿಜವಾದ ಹಿಂದೂ ಹುಲಿಯಾಗಿದ್ದರೆ ತಾವು ಹಿಂದೆ ಸೋತಿದ್ದ ದೇವರಹಿಪ್ಪರಗಿ ಅಥವಾ ಪಕ್ಷ ಬಬಲೇಶ್ವರದಿಂದ ಕಣಕ್ಕಿಳಿಯಲು ಹೇಳಿದಾಗ ಏಕೆ ಹಿಂದೆ ಸರಿದರು ಎಂದು ಪ್ರಶ್ನಿಸಿದ ಬಿರಾದಾರ ಅವರು, ಗಂಡಸ್ತನ ಇದ್ದರೆ ಯತ್ನಾಳ ಬೇರೆ ಕ್ಷೇತ್ರದಿಂದ ಗೆದ್ದುಬರಲಿ ಎಂದು ಸವಾಲು ಹಾಕಿದರು.
ಮೈಕ್ ಮುಂದೆ ನಿಂತರೆ ಅನಾಗರಿಕರಂತೆ ಮಾತನಾಡುವ ಯತ್ನಾಳರದು ಬಿಜೆಪಿ, ಆರೆಸ್ಸೆಸ್ ಅಥವಾ ಹಿಂದುತ್ವದ ಸಂಸ್ಕೃತಿ ಅಲ್ಲ ಎಂದರು.
ನನ್ನ ಮುಗ್ಧತೆ ನನ್ನ ಬಲಹೀನತೆಯಲ್ಲ. ಮತ್ತೆ ನನ್ನ ಬಗ್ಗೆ ಅವರು ಯಾವುದೇ ವೇದಿಕೆಯಲ್ಲಿ ಕೇವಲವಾಗಿ ಮಾತನಾಡಲು ಮುಂದಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಿರಾದಾರ ಎಚ್ಚರಿಸಿದರಲ್ಲದೆ, ಇವರ ಹಲವು ಹಗರಣಗಳ ಅಗತ್ಯ ದಾಖಲೆಗಳು ನನ್ನ ಬಳಿ ಇದ್ದು ಸೂಕ್ತ ಸಮಯದಲ್ಲಿ ಬಯಲು ಮಾಡುವುದಾಗಿ ಸುರೇಶ ಬಿರಾದಾರ ಎಚ್ಚರಿಸಿದರು.
ರಾಜ್ಯದಲ್ಲಿ ಯತ್ನಾಳಂತವರಿಂದಲೇ ನಾವು ಅಧಿಕಾರ ವಂಚಿತರಾದೆವು. ಪಕ್ಷಕ್ಕೆ ಇವರಿಂದ ತೀರ್ವ ಮುಜುಗರವಾಗುತ್ತಿದೆ.
ಯುವಕರು ಯತ್ನಾಳ್ ಭಾಷಣದಿಂದ ಪ್ರಚೋದನೆಗೆ ಒಳಗಾಗದೇ ಎಚ್ಚರವಾಗಿ ಇರಬೇಕು ಎಂದು ಬಿರಾದಾರ ಸಲಹೆ ನೀಡಿದರು.

