ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಅಭಿಮತ
ವಿಜಯಪುರ: ಗ್ರಾಮ ನಗರ ಸ್ವಚ್ಛತೆಯನ್ನು ಹೆಚ್ಚಿಸುವಲ್ಲಿ ಪೌರಕಾರ್ಮಿಕರ ಪಾತ್ರ ಅನನ್ಯವಾಗಿದ್ದು, ಸಮಾಜದಲ್ಲಿ ಪೌರ ಕಾರ್ಮಿಕರಿಗೆ ಗೌರವ ನೀಡುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ನಗರಭಿವೃದ್ಧಿ ಕೋಶ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿಜಯಪುರ ವತಿಯಿಂದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರಿಗೆ ಇ.ಎಸ್.ಐ, ಪಿಎಫ್ ವಿಮೆ, ಸ್ವಚ್ಛತೆ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೌರಕಾರ್ಮಿಕರ ಗೌರವಕ್ಕೆ ಕುಂದು ಬಾರದಂತೆ ನಡೆದುಕೊಳ್ಳಬೇಕು. ಅವರು ನಿರ್ವಹಿಸುವ ಕಾರ್ಯ ಅನನ್ಯವಾಗಿದೆ. ಸ್ವಚ್ಛ ಸುಂದರ ನಗರವನ್ನಾಗಿಸುವಲ್ಲಿ ಅವರು ನಿರ್ವಹಿಸುವ ಕಾರ್ಯ ಮಹತ್ತರವಾಗಿದೆ. ಅದರಂತೆ, ಪೌರಕಾರ್ಮಿಕರು ಸಹ ತಮ್ಮ ವೈಯಕ್ತಿಕ ಆರೋಗ್ಯದ ಕುರಿತು ನಿಗಾವಹಿಸಿ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ,ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ಉನ್ನತ ಹುದ್ದೆಗೇರಲು ಪ್ರೇರೇಪಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಬದ್ರುದಿನ್ ಸೌದಾಗರ್ ಮಾತನಾಡಿ, ನಗರ ಸ್ವಚ್ಛತೆಗಾಗಿ ಹಾಗೂ ಆರೋಗ್ಯ ಪೂರ್ಣ ಪರಿಸರ ನಿರ್ಮಾಣಕ್ಕಾಗಿ ಪೌರಕಾರ್ಮಿಕರು ಅನಾರೋಗ್ಯಕರ ವಾತಾವರಣದಲ್ಲಿಯೂ ಪ್ರತಿನಿತ್ಯ ಶ್ರಮ ವಹಿಸುತ್ತಾರೆ. ಅವರ ಕಾರ್ಯವನ್ನು ಪ್ರತಿಯೊಬ್ಬರು ಗೌರವಿಸಬೇಕು. ಸರ್ಕಾರ ಪೌರಕಾರ್ಮಿಕರಿಗೆ ಅನೇಕ ಸವಲತ್ತು ನೀಡುತ್ತಿದೆ. ಪೌರಕಾರ್ಮಿಕರಿಗಿರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಾಗಾರ ಆಯೋಜಿಸಿಲಾಗಿದೆ ಎಂದು ಹೇಳಿದರು.
ಸರಕಾರದಿಂದ ಪೌರಕಾರ್ಮಿಕರಿಗಾಗಿ ಪ್ರತಿ ತಿಂಗಳು ೨ ಸಾವಿರ ರೂ ಸಂಕಷ್ಟ ಭತ್ಯೆ, ವಿಶೇಷ ಭತ್ಯೆ ವರ್ಷದಲ್ಲಿ ೨೧ ದಿನಗಳ ವಿಶೇಷ ಹೆಚ್ಚುವರಿ ವೇತನ, ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸಹಾಯಧನ, ವಸತಿಯಲ್ಲಿ ಸಹಾಯಧನ, ವಿಮೆ ಸೌಲಭ್ಯ ಸೇರಿದಂತೆ ಅಗತ್ಯ ಎಲ್ಲಾ ಸೌಲಭ್ಯ ಸವಲತ್ತುಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಿರಿ ಎಂದು ಮನವರಿಕೆ ಮಾಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವಿಜಯಕುಮಾರ ಮೆಕ್ಕಳಕಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಎಸ್. ಎಮ್. ಗುಣಾರಿ ಅವರು ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಕಾರ್ಯಗಾರ ನೀಡಿ, ಪೌರ ಕಾರ್ಮಿಕರು ಜಿಲ್ಲೆಯ ನಗರ ಹಾಗೂ ಸ್ಥಳೀಯ, ಗ್ರಾಮೀಣ ಭಾಗದ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣದಲ್ಲಿ ಇವರು ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಅರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು. ನಿಮ್ಮ ಸ್ವಚ್ಛತೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಪೌರ ಕಾರ್ಮಿಕರ ತರಬೇತಿದಾರ ಜಗದೀಶ ಅವರು ಪೌರ ಕಾರ್ಮಿಕರ ಸ್ವಚ್ಛತೆ ಕುರಿತು ಕಾರ್ಯಗಾರ ನೀಡಿ, ಪೌರಕಾರ್ಮಿಕರು ಆರೋಗ್ಯದೊಂದಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಷ್ಟೇ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ಸ್ವಾಗತಿಸಿದರು. ಇಎಸ್ ಐ ಅಧಿಕಾರಿಗಳು, ಇಪಿಎಫ್ ಅಧಿಕಾರಿಗಳು, ಭೀಮರಾಯ ಜಿಗಜಿಣಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

