ವಿಜಯಪುರ: ವಿಜಯನಗರ ಅರಸರ ಪರವಾಗಿ ಯುದ್ಧದಲ್ಲಿ ಭಾಗವಹಿಸಿ, ಸೋಲನ್ನು ಅನುಭವಿಸಿ, ಅನೇಕ ಸಾವು- ನೋವುಗಳನ್ನು ನೋಡಿದ ದಾಸ ಶ್ರೇಷ್ಠ ಕನಕದಾಸರು ವೈರಾಗ್ಯ ಹೊಂದಿ, ಸಂಸಾರವನ್ನು ತ್ಯಾಗ ಮಾಡಿದರು. ದೇಶ ಸಂಚಾರ ಮಾಡುತ್ತ, ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥ, ಅಸಮಾನತೆ, ಅನ್ಯಾಯ, ಮೌಡ್ಯತೆಗಳನ್ನು ಹೋಗಲಾಡಿಸಲು ನಿರಂತರ ಶ್ರಮಿಸಿದರು. ತಿಮ್ಮಪ್ಪ ನಾಯಕನೆಂದು ಕರೆಸಿಕೊಳ್ಳುತ್ತಿದ್ದ ಇವರು ಗುರುಗಳಾದ ವ್ಯಾಸರಾಯರಿಂದ ಕನಕದಾಸರೆಂದು ಮರುನಾಮಕರಣ ಹೊಂದಿದರು. ತಮ್ಮ ಆರಾಧ್ಯ ದೈವ ‘ಕಾಗಿನೆಲೆ ಆದಿ ಕೇಶವರಾಯ’ ಎಂಬ ಹೆಸರಿನಿಂದ ಹಲವಾರು ಕೀರ್ತನೆಗಳನ್ನು ರಚಿಸಿ, ಸಮಾಜವನ್ನು ಸುಧಾರಣೆ ಮಾಡಲು ಅವಿರತ ಪ್ರಯತ್ನ ಮಾಡಿದರು ಎಂದು ಕನ್ನಡ ಹಿರಿಯ ಉಪನ್ಯಾಸಕರಾದ ಪ್ರೊ. ಸಿದ್ದು ಸಾವಳಸಂಗ ತಮ್ಮ ಉಪನ್ಯಾಸ ನೀಡುತ್ತಾ ಹೇಳಿದರು.
ಗುರುವಾರ ಕನಕದಾಸರ ಜಯಂತಿ ಪ್ರಯುಕ್ತ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹಾವೇರಿ ಜಿಲ್ಲೆಯ ಬಾಡ ಎನ್ನುವಂತ ಚಿಕ್ಕ ಗ್ರಾಮದಲ್ಲಿ ಕ್ರಿ.ಶ.೧೫೦೮ ರಲ್ಲಿ ಬೀರಪ್ಪ ನಾಯಕ ಹಾಗೂ ಬಚ್ಚಮ್ಮ ದಂಪತಿಗಳ ಮಗನಾಗಿ ಕನಕದಾಸರು ಜನಿಸಿದರು. ಅವರ ಪೂರ್ವನಾಮ ತಿಮ್ಮಪ್ಪನಾಯಕ. ಮುಂದೆ ವಿಜಯನಗರ ಅರಸರಿಂದ ೭೮ ಗ್ರಾಮಗಳನ್ನು ಪಡೆದು ಅವರು ನಾಯಕರಾಗಿದ್ದರು.
ಆನಂತರ ಯುದ್ಧದ ಸಾವು ನೋವುಗಳನ್ನು ಅರಿತು ಸಂಸಾರ ತ್ಯಾಗ ಮಾಡಿ ಸಂತರಾದರು.
ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಬಲ್ಲಿರಾ
ಎಂದು ಜಾತಿ-ಮತಗಳ ವಿರುದ್ಧ ದನಿಯೆತ್ತಿದರು. ಹಾಗೆಯೇ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದು ಇನ್ನೊಂದು ಕೀರ್ತನೆಯಲ್ಲಿ ಹೇಳುತ್ತಾರೆ. ಪುರಂದರದಾಸರು ಹಾಗೂ ಕನಕದಾಸರು ದಾಸ ಸಾಹಿತ್ಯದ ಎರಡು ಕಣ್ಣುಗಳು ಎಂದು ಪ್ರೊ. ಸಿದ್ದು ಸಾವಳಸಂಗ ಹೇಳಿದರು.
ಇನ್ನೋರ್ವ ಹಿರಿಯ ಉಪನ್ಯಾಸಕರಾದ ಪ್ರೊ. ಎಸ್. ಆರ್. ಬಿರಾದಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿ.ಬಿ . ನಾಟೀಕಾರ ಮಾತನಾಡಿದರು.
ಇದಕ್ಕೂ ಮೊದಲು ದಾಸ ಶ್ರೇಷ್ಠ ಸಂತನಾದ ಕನಕದಾಸರ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರು ಕನಕದಾಸರ ಕುರಿತು ಮಾತನಾಡಿದರು. ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

