೨೪ ಗಂಟೆಯೊಳಗೆ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಿ | ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ
ವಿಜಯಪುರ: ರಾಜ್ಯಾದ್ಯಂತ ಬರಗಾಲ ಘೋಷಣೆಯಾಗಿದೆ. ವಿಜಯಪುರ ಜಿಲ್ಲೆಯ ೧೩ ತಾಲೂಕುಗಳನ್ನು ಬರ ಘೋಷಿಸಲಾಗಿದೆ. ಬರ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರದೆ ಸಮಸ್ಯೆ ಬಂದ ೨೪ ಗಂಟೆಯೊಳಗೆ ಕುಡಿಯುವ ನೀರು ಪೂರೈಸಲು ಸನ್ನದ್ಧವಾಗಿರುವಂತೆ ಅಧಿಕಾರಿಗಳಿಗೆ ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕುಡಿಯುವ ನೀರು ಮೇವಿಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ೪೬ ಕೋಟಿ ರೂ. ಹಾಗೂ ತಹಶೀಲ್ದಾರ ಖಾತೆಯಲ್ಲಿ ೪.೫ ಕೊಟಿ ರೂ. ಒದಗಿಸಲಾಗಿದೆ. ಜಿಲ್ಲೆಯ ೬ ಕಡೆ ಟ್ಯಾಂಕರ್ ಮತ್ತು ಬಾಡಿಗೆ ಬೊರವೆಲ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರ ತಾಲೂಕಾ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆಗೆ ಆದೇಶ ನೀಡಿದ್ದು, ಪಂಚಾಯತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮಾಧಿಕಾರಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರನ್ನೊಳಗೊಂಡ ಅಧಿಕಾರಿಗಳು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಮಾಹಿತಿಯನ್ನು ಕಲೆ ಹಾಕಿ, ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗದುಕೊಂಡು ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಮುಂಚಿತವಾಗಿಯೇ ಗುರುತಿಸಿಟ್ಟುಕೊಳ್ಳಬೇಕು. ಖಾಸಗಿ
ಬೊರವೆಲ್ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಮನವೊಲಿಸಿ, ನಿಗದಿತ ದರ ನಿಗದಿ ಮಾಡಿಟ್ಟುಕೊಂಡು ಸಮಸ್ಯೆ ಬಂದ ೨೪ ಗಂಟೆಯೊಳಗೆ ನೀರು ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಕುಡಿಯುವ ನೀರಿಗೆ ಸಂಬಧಿಸಿದ ಯಾವುದೇ ಬಿಲ್ಲಗಳನ್ನು ಬಾಕಿ ಉಳಿಸಿಕೊಳ್ಳದೇ ೧೫ ದಿನಗಳಲ್ಲಿ ಸಲ್ಲಿಸಬೇಕು. ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮಾಧಿಕಾರಿಗಳು ಹಾಗೂ ಸಹಾಯಕ ಅಭಿಯಂತರರು ಕುಡಿಯುವ ನೀರಿನ ಬಿಲ್ಲಗಳನ್ನು ತಹಶೀಲ್ದಾರಗಳಿಗೆ ಸಲ್ಲಿಸಬೇಕು. ತಹಶೀಲ್ದಾರರು ಪರಿಶೀಲನೆ ನಡೆಸಿ ತಮ್ಮ ಹಂತದಲ್ಲಿಯೇ ಬಿಲ್ ಪಾವತಿಗೆ ಅವಕಾಶ ಕಲ್ಪಿಸಲಾಗಿದ್ದು, ನಿಗದಿತ ಅವಧಿಯೊಳಗೆ ತಹಶೀಲ್ದಾರರು ಕುಡಿಯುವ ನೀರಿನ ಬಿಲ್ ಪಾವತಿಗೆ ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಿ ಸುಗಮವಾಗಿ ಕಂದಾಯ ಇಲಾಖೆ ದಾಖಲೆಗಳನ್ನು ಒದಗಿಸಿ ಪಾರದರ್ಶಕ ಸೇವೆ ನೀಡುವ ನಿಟ್ಟಿನಲ್ಲಿ ಎಲ್ಲ ದಾಖಲೆಗಳನ್ನು ಡಿಜಟಲೀಕರಣ ಮಾಡುವ ಮೂಲಕ ರಾಜ್ಯದ ಎಲ್ಲ ತಹಶೀಲ್ದಾರ ಕಚೇರಿಗಳನ್ನು ಪೂರ್ಣ ಪ್ರಮಾಣದಲ್ಲಿ ಅಟೋಮೇಷನ್ ವ್ಯವಸ್ಥೆ ಮಾಡಲಾಗುವುದು. ಪಾವತಿಖಾತೆ ಹಾಗೂ ಹಕ್ಕು ಬದಲಾವಣೆ ಹೊರತುಪಡಿಸಿ ಉಳಿದ ಎಲ್ಲ ದಾಖಲೆಗಳ ಕುರಿತಂತೆ ಪಾರದರ್ಶಕ ಒದಗಿಸಲು ರಾಜ್ಯದ ಎಲ್ಲ ತಹಶೀಲ್ದಾರ ಕಚೇರಿಗಳಲ್ಲಿನ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಪೂರ್ಣ ಪ್ರಮಾಣದಲ್ಲಿ ಆಟೋಮಿಷನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಗ್ರಾಮ ಲೆಕ್ಕಿಗರು ಪೂರ್ಣ ತಂತ್ರಜ್ಞಾನ ಅಳವಡಿಸಿಕೊಂಡು ಸರಾಗವಾಗಿ ಹಾಗೂ ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ತಂತ್ರಜ್ಞಾನ ಅಳವಡಿಕೆಯಿಂದ ಡಿಜಿಟಲೀಕರಣದಿಂದ ಕಂದಾಯ ಇಲಾಖೆ ಒತ್ತಡವು ಸಹ ಕಡಿಮೆಯಾಗಲಿದೆ ಎಂದು ಹೇಳಿದರು.
ಹಲವು ಕಂದಾಯ ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ೫೯೮೦೦ ಹಾಗೂ ಐದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಬಾಕಿ ಇದ್ದ ೩೨೭೮೦ ಪ್ರಕರಣಗಳನ್ನು ಕಳೆದ ನಾಲ್ಕು ತಿಂಗಳಲ್ಲಿ ೨೩ ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ ಪ್ರಕರಣಗಳನ್ನು ೬ ತಿಂಗಳೊಳಗೆ ವಿಲೇವಾರಿ ಮಾಡಲು ತಹಶೀಲ್ದಾರಗಳಿಗೆ ಸೂಚಿಸಲಾಗಿದ್ದು, ಪ್ರತಿ ತಿಂಗಳ ಪ್ರಕರಣಗಳ ಕುರಿತು ಟ್ರ್ಯಾಕಿಂಗ್ ಸಹ ಮಾಡಲಾಗುತ್ತಿದೆ ಎಂದು ಹೇಳಿದರು.
ಸಮಸ್ಯೆಗಳನ್ನು ಹೇಳಿಕೊಳ್ಳುವ ಹಕ್ಕು ಜನರಿಗೆ ಮಾತ್ರ ಇದೆ. ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸಬೇಕು. ಸ್ವಯಂ ಪ್ರೇರಣೆಯಿಂದ ಅದಿಕಾರಿಗಳು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.
ಜಿಲ್ಲೆಯ ಎಫ್ಐಡಿ ಪ್ರಗತಿ ಹೆಚ್ಚಿಸಬೇಕೆಂದ ಸಚಿವರು, ಕೇವಲ ನಂಬರ್ಗಳಲ್ಲಿ ಮಾತ್ರ ಪ್ರಗತಿ ಕಾಣದೇ, ಜಿಲ್ಲೆಯಲ್ಲಿ ಇನ್ನೂ ೨.೪೦ ಲಕ್ಷ ರೈತರ ನೋಂದಣಿ ಬಾಕಿ ಇದೆ. ಇದರಿಂದ ರೈತರಿಂದ ಹಣ ಪಾವತಿ ಮಾಡುವುದು ಹೇಗೆ ಸಾಧ್ಯವಾಗುತ್ತದೆ ಎಂದರು.
ಬರ ಪರಿಹಾರ ಒದಗಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದ್ದು, ಶೀಘ್ರವೇ ತೀರ್ಮಾನವಾಗಬಹುದೆಂಬ ಆಶಾಭಾವನೆ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿಗಳು ಸಹ ಮುಂದಿನ ವಾರದಲ್ಲಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಬರ ಪರಿಹಾರ ಬಿಡುಗಡೆ ಮನವಿ ಮಾಡಲಿದ್ದಾರೆ. ಕೇಂದ್ರ ಬರ ಪರಿಹಾರ ಬರುವ ಮೊದಲೇ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹಣ ಬಂದ ಮೇಲೆ ಇಟ್ಟುಕೊಳ್ಳಲು ಆಗುವುದಿಲ್ಲ. ರೈತರ ಖಾತೆಗೆ ಜಮೆ ಮಾಡಬೇಕಾಗುತ್ತದೆ. ಜಿಲ್ಲೆಯಲ್ಲಿ ಕೇವಲ ಶೇ.೬೪ ರಷ್ಟು ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿದ್ದು, ಒಂದು ವಾರದೊಳಗೆ ನಿಗದಿ ಪ್ರಗತಿ ಸಾಧಿಸುವಂತೆ ತಿಳಿಸಿದ ಅವರು, ಫ್ರೂಟ್ಸ್ನಲ್ಲಿ ರೈತರು ಕೇವಲ ಐಡಿ ಮಾತ್ರ ಸೃಜನೆ ಮಾಡಿಕೊಂಡಿರುತ್ತಾರೆ. ವಿಸ್ತೀರ್ಣ ನೋಂದಣಿಯಾಗಿರುವುದಿಲ್ಲ. ಇದರಿಂದ ರೈತರಿಗೆ ಪರಿಹಾರ ಹಣ ನೀಡಲು ತೊಂದರೆಯಾಗುವುದರಿಂದ ಫ್ರೂಟ್ಸ್ನಲ್ಲಿ ವಿಸ್ತೀರ್ಣ ಸಹ ನೊಂದಾಯಿಸುವುದು ಕಡ್ಡಾಯವಾಗಿದ್ದು, ಕೂಡಲೇ ತಮ್ಮ ಬಳಿ ಲಭ್ಯವಿರುವ ದಾಖಲೆಗಳನುಸಾರ ವಿಸ್ತೀರ್ಣ ದಾಖಲಿಸಲು ಕ್ರಮ ವಹಿಸಬೇಕು. ಹಣ ಪಾವತಿಯಲ್ಲಿ ಪಾರದರ್ಶಕವಾಗಿರಬೇಕು. ಯಾವುದೇ ತಂಟೆ ತಕರಾರಿಲ್ಲದೇ ನೇರವಾಗಿ ರೈತರ ಖಾತೆಗೆ ಫ್ರೂಟ್ಸ್ ಡಾಟಾ ಬೇಡ್ ಮೂಲಕ ಜಮೆ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಅಪ್ಪಾಜಿ ಸಿ.ಎಸ್.ನಾಡಗೌಡ, ವಿಠ್ಠಲ ಕಟಕದೊಂಡ ಅಶೋಕ ಮನಗೂಳಿ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲುಮಾರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

