ಬಸವನಬಾಗೇವಾಡಿ: ತಾಲೂಕಿನ ಸ್ವಾತಂತ್ರ್ಯಯೋಧರ ಗ್ರಾಮ ಮಸಬಿನಾಳ ಗ್ರಾಮದ ಗೌರಿಶಂಕರ ಜಾತ್ರಾಮಹೋತ್ಸವದಂಗವಾಗಿ ನ. ೨೭ ರಿಂದ ಡಿ.೨ ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಗ್ರಾಮದ ವಿಷ್ಣು ಬಡಿಗೇರ ಅವರ ಮನೆಯಿಂದ ಸೋಮವಾರ ಬೆಳಗ್ಗೆ ಸಕಲ ವಾದ್ಯಮೇಳದೊಂದಿಗೆ ಗೌರಿಶಂಕರ ಮೂರ್ತಿಗಳು ಮೆರವಣಿಗೆ ಮೂಲಕ ಗೌರಿಶಂಕರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡವು. ನ.೩೦ ರಂದು ಸಂಜೆ ೬ ಗಂಟೆಗೆ ಸ್ವಾಮಿ ವಿವೇಕಾನಂದ ಸ್ವ ಸಹಾಯ ಸಂಘದ ಗೆಳೆಯರ ಬಳಗ ಹಾಗೂ ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆಯ ಸಹಯೋಗದಲ್ಲಿ ಸಾಂಸ್ಕ್ರತಿಕ ಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾನಿಧ್ಯವನ್ನು ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ನೇತೃತ್ವವನ್ನು ಸೊನ್ನದ ಶಿವಾನಂದ ಸ್ವಾಮೀಜಿ, ಸಮ್ಮುಖವನ್ನು ನೆಲೋಗಿಯ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಸಬಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಿಜಾ ಬಾಬುಲಾಲ ಮೈರಾ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಕನ್ನಡ ಮತ್ತು ಸಂಸ್ಕ್ರತ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಆಗಮಿಸುವರು. ವಿಜಯಪುರದ ಸನ್ಶೈನ ನೃತ್ಯ ಕಲಾ ಸಂಸ್ಥೆಯಿಂದ ಸಮೂಹ ನೃತ್ಯ, ಬಳ್ಳಾರಿಯ ಜಡ್ಡೆಶ ಎಮ್ಮಿಗನೂರ ಜಾನಪದ ಸಂಗೀತ ಕಲಾ ತಂಡದಿಂದ ಸಂಗೀತ ಸುಧೆ, ದುರ್ಗೇಶ ಹಿರೇಮನಿ ಮತ್ತು ಅನಿತಾ ಅಯ್ಯರ ಇವರಿಂದ ರಸಮಂಜರಿ, ಅಯೂಬ ಧನ್ನೂರ ಅವರಿಂದ ಜಾದೂ ಪ್ರದರ್ಶನ ನಡೆಯಲಿದೆ.
ಡಿ.೧ ರಂದು ಸಂಜೆ ೫ ಗಂಟೆಗೆ ಗೌರಿಶಂಕರ ಜಾತ್ರಾಮಹೋತ್ಸದಂಗವಾಗಿ ಭವ್ಯ ರಥೋತ್ಸವ ಜರುಗಲಿದೆ. ರಾತ್ರಿ ಸುಂದರ ಸಾಮಾಜಿಕ ನಾಟಕ ಪ್ರದರ್ಶನವಿದೆ. ಡಿ.೨ ರಂದು ಬೆಳಗ್ಗೆ ೧೦ ಗಂಟೆಗೆ ಭಾರ ಎತ್ತುವ ಕಾರ್ಯಕ್ರಮ, ಸಂಜೆ ಆಕರ್ಷಕ ಸಿಡಿಮದ್ದು ಸುಡುವ ಕಾರ್ಯಕ್ರಮ, ರಾತ್ರಿ ೯ ಗಂಟೆಗೆ ಗೌರಿಶಂಕರ ಮೂರ್ತಿ ವಿಸರ್ಜನೆ, ರಾತ್ರಿ ೧೦ ಗಂಟೆಗೆ ನಾಟಕ ಪ್ರದರ್ಶನವಿದೆ ಎಂದು ಗೌರಿಶಂಕರ ಜಾತ್ರಾಮಹೋತ್ಸವ ಸಮಿತಿಯು ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

