ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳಿಗೆ “ಗುರುನಮನ”
ವಿಜಯಪುರ: ಶತಮಾನದ ಸಂತ, ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಭೌತಿಕ ದೇಹವನ್ನು ತ್ಯಜಿಸಿ ಬಯಲಲ್ಲಿ ಬಯಲಾಗಿ ಒಂದು ವರ್ಷವಾಗುವ ಹಿನ್ನೆಲೆಯಲ್ಲಿ ಮುಂಬರುವ ಜನೇವರಿ 1 ಮತ್ತು 2 ರಂದು ನಗರದ ಜ್ಞಾನಯೋಗಾಶ್ರಮದಲ್ಲಿ “ಗುರುನಮನ
ಮಹೋತ್ಸವ” ವನ್ನು ಹಮ್ಮಿಕೊಳ್ಳಲಾಗಿದೆ.
ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ರವಿವಾರ ಜ್ಞಾನಯೋಗಾಶ್ರಮದಲ್ಲಿ ಕರೆದಿದ್ದ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ಈ ಕುರಿತು ವಿವರಣೆ ನೀಡಿದರು.
ಹಲವು ದಶಕಗಳವರೆಗೆ ಆಧ್ಯಾತ್ಮಿಕ ಜ್ಞಾನದಾಸೋಹ ಮಾಡಿ ಎಲ್ಲ ಜನಾಂಗದ ಪ್ರೀತಿಯನ್ನು ಗಳಿಸಿದ ಪೂಜ್ಯ ಸಿದ್ಧೇಶ್ವರ ಶ್ರೀಗಳು 2023 ರ ಜನೇವರಿ 2 ರಂದು ದೇಹತ್ಯಾಗ ಮಾಡಿ ಬಯಲಲ್ಲಿ ಬಯಲಾದರು. ತನ್ನಿಮಿತ್ಯ ಆ ದಿನದಂದು ಪೂಜ್ಯರಿಗೆ ಭಕ್ತರೆಲ್ಲ ಸೇರಿ ಹೃದಯಾಂತರಾಳದ ನಮನಗಳನ್ನು ಅರ್ಪಿಸಲು ನಿರ್ಧರಿಸಿದ್ದು, ಗುರುನಮನ ಮಹೋತ್ಸವದ ಅಂಗವಾಗಿ ಜ್ಞಾನದಾಸೋಹ ಸತ್ಸಂಗ ಕಾರ್ಯಕ್ರಮ, ವಿಶೇಷ ಗೋಷ್ಠಿಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಜ.1 ರಂದು ದೀಪೋತ್ಸವ ನಡೆಯುವುದು. ಅಂದು ಸಂಜೆ
ಜ್ಞಾನಯೋಗಾಶ್ರಮದಲ್ಲಿ ಪ್ರತಿಯೊಬ್ಬರು ದೀಪಗಳನ್ನು ಬೆಳಗಿಸುವ ಮೂಲಕ ಜ್ಞಾನಯೋಗಿಗಳಿಗೆ ಗುರುನಮನ ಸಲ್ಲಿಸುವುದು. ಜ.2 ರಂದು ಬೆಳಿಗ್ಗೆ 8 ಗಂಟೆಗೆ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ ಪೂಜೆ ನಂತರ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಗೀತನಮನ ಜೊತೆಗೆ ಸಾಮೂಹಿಕವಾಗಿ ಪುಷ್ಪಗಳನ್ನು ಅರ್ಪಿಸುವ ಮೂಲಕ ಗುರುನಮನ ಸಲ್ಲಿಸುವ ವಿಶೇಷ ಕಾರ್ಯಕ್ರಮ ನಡೆಯುವುದು. ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಪೂಜ್ಯರು, ಗಣ್ಯಮಾನ್ಯರು ಸೇರಿದಂತೆ ಲಕ್ಷಾಂತರ ಜನ ಭಕ್ತರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಗುರುನಮನ ಮಹೋತ್ಸವದ ಪೂರ್ವಭಾವಿಯಾಗಿ ಬರುವ ಡಿಸೆಂಬರ 1 ರಿಂದ 15 ರ ವರೆಗೆ ನಗರದ ಎಲ್ಲ ಪ್ರಮುಖ ಬಡಾವಣೆಗಳಲ್ಲಿ ಜ್ಞಾನದಾಸೋಹ ಕಾರ್ಯಕ್ರಮ ನಡೆಯುವುದು. ಡಿ.23 ರಿಂದ 31 ರ ವರೆಗೆ ಜ್ಞಾನಯೋಗಾಶ್ರಮದಲ್ಲಿ ಪ್ರತಿದಿನ ಸಂಜೆ ಗೋಷ್ಠಿಗಳು ನಡೆಯುವವು. ಗ್ರಾಮೀಣ ಜನರ ಬದುಕು, ಯುವಕರು ಮತ್ತು ದೇಶಪ್ರೇಮ, ಮಹಿಳೆ ಮತ್ತು ಸಂಸ್ಕೃತಿ, ಶಿಕ್ಷಣ ಮತ್ತು ವಿಜ್ಞಾನ, ಜನಪದ ಕಲೆಗಳು, ಕ್ರೀಡೆ-ಯೋಗ-ಆರೋಗ್ಯ, ಜಾಗತಿಕ ಆಧ್ಯಾತ್ಮಿಕ ಚಿಂತನೆ, ಪರಿಸರ ಸಂರಕ್ಷಣೆ, ಸ್ವಚ್ಛತೆ- ಸಮಯಪಾಲನೆ- ವ್ಯಸನಮುಕ್ತಿ ಎಂಬ ವಿಷಯ ಕುರಿತು ಒಂಭತ್ತು ಗೋಷ್ಠಿಗಳು ನಡೆಯಲಿದ್ದು, ನಾಡಿನ ಹಲವಾರು ಪೂಜ್ಯರು, ವಿದ್ವಾಂಸರು, ಪಂಡಿತರು, ಗಣ್ಯವ್ಯಕ್ತಿಗಳು ಭಾಗವಹಿಸಿ ವಿಷಯ ಮಂಡಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪೂಜ್ಯ ಸಿದ್ದೇಶ್ವರ ಶ್ರೀಗಳ ಪ್ರವಚನ ಆಧಾರಿತ ಕನ್ನಡ ಮತ್ತು ಹಿಂದಿ ಗ್ರಂಥಗಳ ಬಿಡುಗಡೆ, ಜ್ಞಾನಯೋಗಾಶ್ರಮದ ಗುರುದೇವ ಗ್ರಂಥಾಲಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶ್ರೀಗಳ ವಿಶೇಷ ಭಾವಚಿತ್ರಗಳ (ಫೋಟೊ ಗ್ಯಾಲರಿ) ಪ್ರದರ್ಶನವೂ ನಡೆಯಲಿದೆ ಎಂದು ಅವರು ತಿಳಿಸಿದರು.
ಶತಮಾನದ ಸಂತ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಬಾಲ್ಯದಿಂದಲೇ ಆಧ್ಯಾತ್ಮಿಕ ಸಾಧನೆಯಲ್ಲಿ ಆಸಕ್ತಿ ಹೊಂದಿದವರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಆಧ್ಯಾತ್ಮಿಕ ಸಾಧನೆಯ ಹಂಬಲದಿಂದ ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಶಿಷ್ಯತ್ವ ಪಡೆದರು.ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಗೈದು ಅವರು ಜ್ಞಾನಯೋಗಿಯಾಗಿ ಬೆಳೆದರು. ಜ್ಞಾನಸೌರಭ ಪಸರಿಸುವುದಕ್ಕಾಗಿಯೇ ಅವತರಿಸಿದ ಪೂಜ್ಯರು ನುಡಿದುದ್ದೆಲ್ಲಾ ಪ್ರವಚನಗಳಾದವು. ಬರೆದ ಬರಹವೆಲ್ಲಾ ಸಾಹಿತ್ಯವಾಯಿತು. ಅವರು ನಡೆದಾಡಿದ ನೆಲ ಪಾವನವಾಯಿತು. ಯಾವ ರೀತಿ ಜೇನುನೊಣ ಹೂವುಗಳ ಮಕರಂದವನ್ನು ಹೀರಿ ಸಿಹಿಜೇನು ಕೊಡುತ್ತದೋ ಅದೇ ರೀತಿ ಪೂಜ್ಯ ಸಿದ್ಧೇಶ್ವರ ಶ್ರೀಗಳು ಎಲ್ಲ ಧರ್ಮದ ಜ್ಞಾನವನ್ನು ಹೀರಿ ಸಮಾಜಕ್ಕೆ ಆಧ್ಯಾತ್ಮದ ಅಮೃತವನ್ನು ನೀಡಿದ ಶ್ರೇಷ್ಠ ಸಂತರು. ಅವರು ಈಗ ಬಯಲಲ್ಲಿ ಬಯಲಾಗಿದ್ದಾರೆ ಅಂಥ ಪೂಜ್ಯರಿಗೆ ಗುರುನಮನ ಸಮರ್ಪಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಡಾ.ಹರ್ಷಾನಂದ ಮಹಾಸ್ವಾಮಿಗಳು (ಹುಲ್ಯಾಳ) ಮಾತನಾಡಿ, ಜ.1 ಮತ್ತು 2 ರಂದು ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಂಡಿರುವುದು ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಗುರುನಮನ ಸಮರ್ಪಣೆ ಮಾಡುವ ಕಾರ್ಯಕ್ರಮ. ಅದು ಪುಣ್ಯತಿಥಿ, ಪುಣ್ಯಸ್ಮರಣೆ ಕಾರ್ಯಕ್ರಮ ಅಲ್ಲ. ಜೀವನ್ಮುಕ್ತರಾದ ಮಹಾತ್ಮರಿಗೆ ಪುಣ್ಯತಿಥಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.
ಸಭೆಯಲ್ಲಿ ಡಾ. ಶ್ರದ್ಧಾನಂದ ಮಹಾಸ್ವಾಮಿಗಳು, ಅಂತಾರಾಷ್ಟ್ರೀಯ ಯೋಗಗುರು ಶ್ರೀ ಅಮೃತಾನಂದ ಮಹಾಸ್ವಾಮಿಗಳು, ಆಶ್ರಮದ ಕಾರ್ಯದರ್ಶಿ ಪ್ರೊ. ಹಳ್ಳದ, ಸಾಯಬಣ್ಣ ಬಾಲಗಾಂವಿ, ಸಂಗು ಸಜ್ಜನ ಉಪಸ್ಥಿತರಿದ್ದರು.


