ಕಲಕೇರಿಯಲ್ಲಿ ಚಾತುರ್ಮಾಸ ಮುಕ್ತಾಯ | ಬ್ರಹ್ಮ ಪ್ರಶಸ್ತಿ ಪ್ರಧಾನ | ಧರ್ಮಸಭೆ
ಕಲಕೇರಿ: ಮಠಮಾನ್ಯಗಳು ಸಮಾಜ ಸುಧಾರಣೆಯ ಸಂಸ್ಕೃತಿಯ ಪ್ರತೀಕಗಳಾಗಬೇಕು ಈ ದಿಸೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟದಂತಿರುವ ತಿಳಗೂಳದ ಆಶ್ರಮ ಬಳಲಿ ಬಂದವರ ಆರೈಕೆಯ ಶಕ್ತಿ ಕೇಂದ್ರವಾಗಿದ್ದು, ದೈವಿಗುಣ, ಮಾತೃ ಹೃದಯಿಯಾಗಿರುವ ಶ್ರೀಗಳು ನಂಬಿ ಬಂದ ಭಕ್ತರ ಉದ್ಧಾರ ಮಾಡುವ, ಸಾಧಕರನ್ನು ಗುರುತಿಸಿ ಗೌರವಿಸುವ, ಸ್ತ್ರೀ ಶಕ್ತಿಯನ್ನು ಪೂಜಿಸುವ ಶ್ರೇಷ್ಟ ಕಾರ್ಯಗಳನ್ನು ಮಾಡುವ ಪರೋಪಕಾರಿ ಸಂತರಾಗಿದ್ದಾರೆ ಎಂದು ಆಲಮೇಲ ವಿರಕ್ತಮಠದ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಹೇಳಿದರು.
ಸಮೀಪದ ತಿಳಗೂಳ ಗ್ರಾಮದ ಶ್ರೀಚಕ್ರ ಬಗಳಾಂಭ ಶಕ್ತಿಪೀಠ ಬ್ರಹ್ಮವಿದ್ಯಾಶ್ರಮದ ಪೂಜ್ಯ ಮಹೇಶ್ವರಾನಂದತೀರ್ಥ ಮಹಾಸ್ವಾಮಿಗಳ ಚಾತುರ್ಮಾಸ ಮುಕ್ತಾಯದ ಪ್ರಯುಕ್ತ ನಡೆದ ಮಹಾಪೂಜೆ, ಮಹಾಯಜ್ಞೆ, ೧೦೦೮ ಮುತ್ತೈದೆಯರಿಗೆ ಉಡಿತುಂಬುವದು, ಧರ್ಮಸಭೆ, ಬ್ರಹ್ಮ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆದಿಶಕ್ತಿಯ ಮಹಾಪೂಜೆ, ಮಹಾಯಜ್ಞೆ, ೧೦೦೮ ಮುತ್ತೈದೆಯರಿಗೆ ಪೂಜೆಯೊಂದಿಗೆ ಉಡಿತುಂಬುವದು, ಚಾತುರ್ಮಾಸ ವ್ರತ ಮುಕ್ತಾಯಗೊಳಿಸಿದ ಶ್ರೀಗಳಿಗೆ ಭಕ್ತರಿಂಗ ತುಲಾಭಾರ ಸೇವೆ ಮತ್ತು ಗೌರವ ಸಮರ್ಪಣೆ ಕಾರ್ಯ ನಡೆಯಿತು.
ಬ್ರಹ್ಮ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶ್ರೀಮಠದ ವತಿಯಿಂದ ಬೆಂಗಳೂರಿನ ತಹಶೀಲ್ದಾರರಾದ ವಸುದೇವ ವಿ.ಸ್ವಾಮಿ ಅವರನ್ನು ವಿಶೇಷ ಗೌರವದೊಂದಿಗೆ ಸನ್ಮಾನಿಸಲಾಯಿತು. ಚನ್ನಪ್ಪ ಪತ್ತಾರ ಗುಡಗುಂಟಿ ಅವರಿಗೆ ಸೇವಾಬ್ರಹ್ಮ ಪ್ರಶಸ್ತಿ, ಶ್ರೀಕಾಂತ ಪತ್ತಾರ ತಾಳಿಕೋಟಿ ಅವರಿಗೆ ಸಾಹಿತ್ಯಬ್ರಹ್ಮ ಪ್ರಶಸ್ತಿ, ರವೀಂದ್ರ ಕುಲಕರ್ಣಿ ಕೋರಳ್ಳಿ ಅವರಿಗೆ ಸಂಗೀತಬ್ರಹ್ಮ ಪ್ರಶಸ್ತಿ ನೀಡುವುದರ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ, ದಾನಿಗಳಿಗೆ, ಹಿರಿಯ ಜೀವಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಿಂದಗಿ ಮೂರುಜಾವದಮಠದ ರಾಮಚಂದ್ರ ಮಹಾಸ್ವಾಮಿಗಳು, ಕೆಸರಟ್ಟಿ ಶಂಕರಲಿಂಗ ಗುರುಪೀಠದ ಬಾಲತಪಸ್ವಿ ಸೋಮಲಿಂಗ ಮಹಾಸ್ವಾಮಿಗಳು, ಚಿಗರಳ್ಳಿಯ ಜಗದ್ಗುರು ಮರುಳ ಶಂಕರದೇವರ ಗುರುಪೀಠದ ಸಿದ್ಧಬಸವಕಬೀರ ಮಹಾಸ್ವಾಮಿಗಳು, ಸಾಹಿತ್ಯಬ್ರಹ್ಮ ಪ್ರಶಸ್ತಿ ಸ್ವೀಕರಿಸಿದ ಶ್ರೀಕಾಂತ ಪತ್ತಾರ ಮಾತನಾಡಿದರು.
ಶ್ರೀಮಠದ ಮಹೇಶ್ವರಾನಂದತೀರ್ಥ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬಸವನಬಾಗೇವಾಡಿಯ ವಿಶ್ವವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಣ್ಣಾರಾಯಗೌಡ ಬಿರಾದಾರ, ಹಿರೇಮಠದ ಮಹಾಂತಯ್ಯ ಶ್ರೀಗಳು, ಬಸವರಾಜ ಶರಣರು, ಮೋಹನಾಚಾರ್ಯರು, ಮಲ್ಲಿಕಾರ್ಜುನ ವಿಶ್ವಕರ್ಮ, ಶ್ರೀಶೈಲ ಮಾನಪ್ಪ ಬಡಿಗೇರ, ಮುರಳೀಧರ ಚಂ. ಪತ್ತಾರ, ದೇವಿಂದ್ರ ಪತ್ತಾರ, ಕಾಳಪ್ಪ ಗವಾಯಿಗಳು ಇವಣಗಿ, ಅಶೋಕ ಬಡಿಗೇರ ಆಲಮೇಲ, ಈರಣ್ಣ ಪತ್ತಾರ, ರಾಜಶೇಖರ ಸಾತಿಹಾಳ, ಗೋಪಾಲ ಸಣತಂಗಿ, ಮಾರುತಿ ಕಮ್ಮಾರ, ಮೌನೇಶ ಪತ್ತಾರ ಸೇರಿದಂತೆ ಇತರರು ಇದ್ದರು.

