ವಿಜಯಪುರ: ಬೆಳೆ ನಷ್ಟವಾಗಿರುವ ರೈತರು ಪರಿಹಾರ ಪಡೆಯಲು ತಮ್ಮ ಭೂಮಿ ವಿವರ ಹೊಂದಿರುವ ಎಫ್ಐಡಿ ಗುರುತಿನ ಸಂಖ್ಯೆ ಹೊಂದುವುದು ಅವಶ್ಯಕವಾಗಿರುವುದರಿಂದ ಕೂಡಲೇ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಕಂದಾಯ, ತೊಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಮತ್ತು ಮೀನುಗಾರಿಕೆ ಇಲಾಖೆ ಕಚೇರಿಗಳಲ್ಲಿ ಎಫ್ಐಡಿ ಮಾಡಿಸಿಕೊಳ್ಳುವಂತೆ ಹಾಗೂ ಎಲ್ಲ ಜಮೀನುಗಳನ್ನು ಎಫ್ಐಡಿಗೆ ಜೋಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರ ಜಿಲ್ಲೆಯ ೧೩ ತಾಲುಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಬರ ಪರಿಹಾರ ಹಣ ಮಾತ್ರವಲ್ಲದೇ ಬೆಳೆ ವಿಮೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಲು ಮತ್ತು ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಹಾಗೂ ಬ್ಯಾಂಕ್ ಸಾಲ ಪಡೆಯಲು ಎಫ್ಐಡಿ ಅಗತ್ಯವಿದ್ದು, ಎಫ್ಐಡಿಯನ್ನು ಹೊಂದಿರದ ರೈತರು ಆಧಾರ ಕಾರ್ಡ ಪ್ರತಿ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನುಗಳ ಪಹಣಿ, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಪ್ರತಿ (ಎಸ್ಸಿ-ಎಸ್ಟಿ ರೈತರು), ಪಾಸ್ ಪೋರ್ಟ ಅಳತೆಯ ಫೋಟೋ ದಾಖಲೆಗಳನ್ನು ಸಲ್ಲಿಸಿ ಹೊಸದಾಗಿ ಎಫ್ಐಡಿ ಸೃಜಿಸಿಕೊಳ್ಳಬೇಕು ಹಾಗೂ ಈಗಾಗಲೇ ಎಫ್ಐಡಿ ಗುರುತಿನ ಸಂಖ್ಯೆ ಹೊಂದಿರುವ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲ ಸಾಗುವಳಿ ಭೂಮಿಗಳ ವಿವರಗಳನ್ನು ಎಫ್ಐಡಿಗೆ ಸೇರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೬೬೭೭೫೨ ರೈತರ ಜಮೀನುಗಳಿದ್ದು, ಇಲ್ಲಿಯವರೆಗೆ ೪೨೪೯೬೧ ರೈತರ ಜಮೀನುಗಳ ಎಫ್ಐಡಿ ಸೃಜಿಸಲಾಗಿದೆ. ಇನ್ನೂ ೨೪೨೭೯೧ ರೈತರ ಜಮೀನುಗಳ ಎಫ್ಐಡಿ ಸೃಜಿಸಬೇಕಾಗಿದೆ ಅಥವಾ ಎಫ್ಐಡಿಗೆ ಸೇರ್ಪಡೆಗೊಳಿಸಬೇಕಾಗಿದೆ. ವಿಜಯಪುರ ತಾಲೂಕಿನಲ್ಲಿ ೪೩೫೨೩, ಇಂಡಿ ೩೬೪೮೬, ಸಿಂದಗಿ ೧೩೫೭೪, ಬಸವನಬಾಗೇವಾಡಿ ೧೮೮೪೬, ಮುದ್ದೇಬಿಹಾಳ ೧೯೭೫೨, ನಿಡಗುಂದಿ ೧೦೫೭೬, ಬಬಲೇಶ್ವರ ೧೮೪೦೭, ಚಡಚಣ ೧೪೭೧೩, ತಾಳಿಕೋಟೆ ೧೦೪೨೦, ತಿಕೊಟಾ ೨೩೭೪೨, ಕೊಲ್ಹಾರ ೮೧೬೨, ದೇವರಹಿಪ್ಪರಗಿ ೧೩೨೪೦ ಹಾಗೂ ಆಲಮೇಲ ತಾಲೂಕಿನ ೧೧೩೫೦ ರೈತರ ಜಮೀನುಗಳು ಎಫ್ಐಡಿಗೆ ಸೇರ್ಪಡೆಯಾಗಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

