ಬೇನಾಳದಲ್ಲಿ ಶಾಲಾ ಕೊಠಡಿ ಉದ್ಘಾಟನೆ | ಕಬಡ್ಡಿ ಪಂದ್ಯಾವಳಿಗೆ ಚಾಲನೆ
ಆಲಮಟ್ಟಿ: ನನ್ನ ಮತಕ್ಷೇತ್ರದ ಸರ್ವ ಗ್ರಾಮಗಳನ್ನು ಭಾವೈಕ್ಯತೆಯ ಗ್ರಾಮಗಳನ್ನಾಗಿ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದರೆ, ಭಾವೈಕ್ಯತೆಯನ್ನೇ ತನ್ನ ಉಸಿರನ್ನಾಗಿ ಜೀವಿಸುತ್ತಿರುವ ಪ್ರಗತಿ ಗ್ರಾಮ ಎಂದರೇ ಅದು ಬೇನಾಳ, ಆ ಗ್ರಾಮದ ಶಾಸಕನಾಗಿರುವುದಕ್ಕೂ ನಾನು ಹೆಮ್ಮೆ ಪಡುತ್ತೇನೆ ಎಂದು ಜವಳಿ, ಎಪಿಎಂಸಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಬೇನಾಳ ಆರ್ ಎಸ್ ಗ್ರಾಮದಲ್ಲಿ ಶನಿವಾರ ರಾತ್ರಿ ಅಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಎರಡು ಹೆಚ್ಚುವರಿ ಕೊಠಡಿಗಳು ಉದ್ಘಾಟನೆ ಹಾಗೂ ಟಿಪ್ಪು ಸುಲ್ತಾನ್ ಯುವಕ ಸಂಘ ಟಿಪ್ಪು ಸುಲ್ತಾನ ಮತ್ತು ಭಕ್ತ ಕನಕದಾಸ ಜಯಂತಿ ನಿಮಿತ್ತ ಹಮ್ಮಿಕೊಂಡ ರಾಜ್ಯ ಮಟ್ಟದ 55 ಕೆಜಿಯೊಳಗಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಬೇನಾಳ ಗ್ರಾಮ ಹಲವು ಸಂಸ್ಕೃತಿಕ ವಿಶಿಷ್ಠ್ಯತೆಯ ತಾಣ, ಗ್ರಾಮದ ಅಭಿವೃದ್ಧಿಗೆ ಇಡೀ ಗ್ರಾಮವೇ ಪ್ರಯತ್ನಿಸಿ, ನಾನಾ ಕಾಮಗಾರಿಗಳನ್ನು ಮಂಜೂರಿ ಮಾಡಿಸಿಕೊಂಡ ಮಾದರಿ ಗ್ರಾಮ ಎಂದರು. ಶಾಲೆಯ ಶ್ರೇಯೋಭಿವೃದ್ಧಿಗೆ ಗ್ರಾಮಸ್ಥರು ಕೂಡಾ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಯಾರೆ ಗೆದ್ದರೂ ಕ್ರೀಡೆ ಗೆಲ್ಲುತ್ತದೆ ವಿನಃ ತಂಡವಲ್ಲ ಎಂದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ದಾಸರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಪ್ರತಿ ವರ್ಷದಲ್ಲಿ ರಾಜ್ಯ ಮಟ್ಟದವರೆಗೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಬಸವರಾಜ ಹಂಚಲಿ ಉಪನ್ಯಾಸ ನೀಡಿ ಮಾತನಾಡಿದರು.
ಸಚಿವ ಶಿವಾನಂದ ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದ ಶಿಕ್ಷಕರ ತಂಡದ ಮಧ್ಯೆ 15 ನಿಮಿಷಗಳ ಕಾಲ ಕಬಡ್ಡಿ ಆಡಿದ್ದು ಗಮನಸೆಳೆಯಿತು.
ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಗುರು ಚಲವಾದಿ, ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ, ಬಿಇಓ ವಸಂತ ರಾಠೋಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ, ಜಿ.ಸಿ. ಮುತ್ತಲದಿನ್ನಿ, ಗ್ಯಾನಪ್ಪಗೌಡ ಬಿರಾದಾರ, ಬಿ.ಎಚ್. ಗಣಿ, ಬುಡ್ಡೇಸಾಬ್ ಬಾಗವಾನ, ಎಂ.ಡಿ. ಫತ್ತೇಪುರ, ಟಿ.ಎಸ್. ಬಿರಾದಾರ, ಜಬ್ಬಾರ್ ಕೋಟ್ಯಾಳ, ಸಿ.ಬಿ. ಕಲ್ಲೋಲ, ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ಮುಕಾರ್ತಿಹಾಳ, ಪ್ರಧಾನಕಾರ್ಯದರ್ಶಿ ಸಲೀಂ ದಡೆದ,, ಮುತ್ತು ಬಡಿಗೇರ, ಮಹೇಶ ಗಾಳಪ್ಪಗೋಳ, ಟಿಪ್ಪು ಸುಲ್ತಾನ ಯುವಕ ಸಂಘದ ಅಧ್ಯಕ್ಷ ಮಹಮ್ಮದ್ ಬೇದ್ರೇಕರ ಇದ್ದರು.

