ಕೊಲ್ಹಾರ: ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಪ್ರಪ್ರಥಮ ಬಾರಿಗೆ ಪದವಿ ಪೂರ್ವ ಮಹಾವಿದ್ಯಾಲಯಗಳ ವಿಧ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ೧೯ ರಿಂದ ೨೧ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಶೈಲ ಬ ಪತಂಗಿ ಹೇಳಿದರು.
ಕ್ರೀಡಾಕೂಟದ ಸಿದ್ದತೆಯನ್ನು ವೀಕ್ಷಿಸಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಯಂಕಾಲ ಕ್ರೀಡಾಪಟುಗಳಿಂದ ಪಟ್ಟಣದ ಪ್ರಮುಖ ರಾಜಬೀದಿಯಲ್ಲಿ ಪಥಸಂಚಲನ ನಡೆಯುವದು. ನಂತರ ಸಂಜೆ ೬ಘಂಟೆಗೆ ಉದ್ಘಾಟನೆ ಕಾರ್ಯಕ್ರಮ ಇರುವದು. ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಉಪನಿರ್ದೇಶಕರ ಕಛೇರಿ ವಿಜಯಪೂರ ಮತ್ತು ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಪದವಿ ಪೂರ್ವ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುವುದು ಎಂದರು.
ಕನ್ನೇರಿ ಮಠದ ಅದೃಷ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟನೆ ನೆರವೇರಿಸುವರು. ಅಧ್ಯಕ್ಷತೆಯನ್ನು ಸಚಿವ ಶಿವಾನಂದ ಪಾಟೀಲ ವಹಿಸುವರು. ಅತಿಥಿಗಳಾಗಿ ಅವಳಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು ಜಿಲ್ಲೆಯ ಸರ್ವ ಶಾಸಕರು ಗಣ್ಯರು ಆಗಮಿಸುವರು.
ದಿನಾಂಕ ೨೧ರಂದು ಸಮಾರೋಪ ಸಮಾರಂಭ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅಧ್ಯಕ್ಷತೆಯಲ್ಲಿ ಜರುಗುವದು. ಅತಿಥಿಗಳಾಗಿ ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಗೋವಿಂದ ಕಾರಜೋಳ, ಶಾಸಕರು ರಾಜಕೀಯ ಗಣ್ಯರು ಆಗಮಿಸುವರು ಎಂದರು.
ಪ್ರಾಚಾರ್ಯ ಡಾ|| ಆನಂದ ಚವ್ಹಾಣ ಮಾತನಾಡಿ, ಈ ಕ್ರೀಡಾಕೂಟದಲ್ಲಿ ರಾಜ್ಯದ ೩೩ ಶೈಕ್ಷಣಿಕ ಜಿಲ್ಲೆಗಳಿಂದ ೩೩ ಬಾಲಕರ ಜಿಲ್ಲಾ ತಂಡಗಳ ೪೫೦ ಜನ ಹಾಗೂ ೩೩ ಬಾಲಕೀಯರ ಜಿಲ್ಲಾ ತಂಡಗಳ ೪೫೦ ಜನ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸುವರು. ೫೦ ಜನ ಪರಿಣಿತ ತೀರ್ಪುಗಾರರು, ೨೦ ಜನ ತಾಂತ್ರಿಕ ಸಮೀತಿಯವರು, ೪ ಜನ ರಾಜ್ಯದ ವೀಕ್ಷಕರು, ಕ್ರೀಡಾಕೂಟದಲ್ಲಿ ಭಾಗವಹಿಸುವರು. ಆಟಗಾರರಿಗೆ, ತರಬೇತುದಾರರಿಗೆ , ತೀರ್ಪುಗಾರರಿಗೆ ಮತ್ತು ಅಧಿಕಾರಿಗಳಿಗೆ, ಪಟ್ಟಣದಲ್ಲಿರುವ ಶಾಲಾ ಕಾಲೇಜುಗಳಲ್ಲಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ, ಉತ್ತರ ಕರ್ನಾಟಕ ಮಾದರಿಯಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆ ಇರುವದು. ೧೨ರಿಂದ ೧೫ ಸಾವಿರ ಪ್ರೇಕ್ಷಕರು ಕುಳಿತುಕೊಂಡು ಕಬಡ್ಡಿ ಆಟವನ್ನು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಯು.ಗಿಡ್ಡಪ್ಪಗೋಳ, ನಿರ್ದೇಶಕರಾದ ಸಿ.ಎಸ್.ಗಿಡ್ಡಪ್ಪಗೋಳ, ತುಳಸಿಗೇರಿ ಹಗೇದಾಳ, ದೈಹಿಕ ಶಿಕ್ಷಕ ಉಪನ್ಯಾಸಕ ರಮೇಶ ತೋಟದ, ಎಸ.ಜಿ.ಜಮಖಂಡಿ, ರಾಜಶೇಖರ ಉಮರಾಣಿ, ವಾಯ.ಜಿ.ಶಿರೋಳ, ವಿಜಯಮಹಾಂತೇಶ ಗಿಡ್ಡಪ್ಪಗೋಳ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
