ಜಿಲ್ಲೆಯ ೨೭೫೫ ಅಂಗನವಾಡಿ ಕೇಂದ್ರಗಳ ಪಾಲಕರ ಸಭೆ: ೪೩೫೮೪ ಮಕ್ಕಳ ಪಾಲಕರು ಭಾಗಿ
ವಿಜಯಪುರ: ಪ್ರತಿ ತಿಂಗಳು ನಡೆಯುವ ಪಾಲಕರ ಸಭೆಯನ್ನು ಜಿಲ್ಲೆಯ ೨೭೫೫ ಅಂಗನವಾಡಿ ಕೇಂದ್ರಗಳಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ೪೩೫೮೪ ಮಕ್ಕಳ ಪಾಲಕರು ಸಭೆಯಲ್ಲಿ ಭಾಗವಹಿಸಿ ಸಮಾಲೋಚನೆ ನಡೆಸುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ ಅವರು ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪಾಲಕರ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಇಲಾಖೆಯು ಮಹಿಳೆಯರ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದು, ಇಲಾಖೆಯ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲು ಜಿಲ್ಲೆಯ ಎಲ್ಲ ಪಾಲಕರು ಮುಂದೆ ಬರಬೇಕು ಎಂದರು. ಅಂಗನವಾಡಿ ಕೇಂದ್ರದಲ್ಲಿ ಎಲ್ಲ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರವನ್ನು ಸರ್ಕಾರದ ನಿರ್ದೇಶನದಂತೆ ನೀಡಲಾಗುತ್ತಿದೆ. ಎಲ್ಲ ಅಂಗನವಾಡಿ ಕೇಂದ್ರಗಳು ಇಲಾಖೆಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ಜೊತೆಗೆ ಸಮುದಾಯದ ಸಹಭಾಗಿತ್ವವು ತುಂಬಾ ಮುಖ್ಯವಾಗಿದೆ. ಎಲ್ಲ ಪಾಲಕರು ಅಂಗನವಾಡಿ ಕೇಂದ್ರ ತಮ್ಮ ಆಸ್ತಿಯಂತೆ ಭಾವಿಸಿ, ಕೇಂದ್ರದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಅಂಗನವಾಡಿ ಕೇಂದ್ರದ ಪ್ರಗತಿ ಗ್ರಾಮದ ಜನತೆಯಲ್ಲಿದೆ. ಜನರೊಂದಿಗೆ ಉತ್ತಮ ಭಾಂಧವ್ಯ ಹೊಂದಿ, ಸೌಲಭ್ಯಗಳನ್ನು ಪಲಾನುಭವಿಗಳ ಮನೆಗೆ ತಲುಪಿಸಬೇಕು. ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು ಮಾದರಿ ಕೇಂದ್ರಗಳಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾರ್ಗದರ್ಶನ ನೀಡಲಾಗಿದ್ದು, ಅವರ ಜೊತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಹಮ್ಮಿಕೊಂಡ ಪಾಲಕರ ಸಭೆಯಲ್ಲಿ ಉಪ ನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನದ ಅಂಗನವಾಡಿ ಕೇಂದ್ರದಲ್ಲಿ ಸಭೆಗೆ ಹಾಜರಾಗಿದ್ದರು ಎಂದು ಜಿಲ್ಲಾ ಪಂಚಾಯತಿಯ ಯೋಜನಾ ವಿಭಾಗದ ಪ್ರಕಟಣೆ ತಿಳಿಸಿದೆ.

