ವಿಜಯಪುರ: ಮಧುಮೇಹಿಗಳು ಮುಖದಷ್ಟೇ ಪಾದಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ.ಕೋಟೆಣ್ಣವರ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಇಂದು ಶನಿವಾರ ಆಯೋಜಿಸಲಾಗಿದ್ದ ಉಚಿತ ಮಧುಮೇಹ ಪಾದರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಚ್ಚು ಮಧುಮೇಹಿಗಳು ದೇವಾಲಯ ದರ್ಶನಕ್ಕೆ ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಾರೆ. ಆಗ ಪಾದದ ಸಮಸ್ಯೆಗೆ ಒಳಗಾಗುತ್ತಾರೆ. ಆದ್ದರಿಂದ ಮಧುಮೇಹಿಗಳು ಮನೆಯೇ ದೇವಾಲಯವೆಂದು ತಿಳಿದು ಆದಷ್ಟು ಜಾಗೃತೆ ವಹಿಸಬೇಕು ಎಂದು ಹೇಳಿದ ಅವರು, ಮಧುಮೇಹಿಗಳು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಮಾತನಾಡಿ, ಭಾರತವು ಮಧುಮೇಹದಲ್ಲಿ ವಿಶ್ವದ ರಾಜಧಾನಿಯಾಗುತ್ತಿದೆ. ಮಧುಮೇಹಿಗಳು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ದೀರ್ಘಕಾಲೀನ ತೊಂದರೆಗಳು ಉಂಟಾಗುತ್ತವೆ. ದ್ರಷ್ಟಿಹೀನತೆ(ರೆಟಿನೊಪತಿ), ಕಿಡ್ನಿ ವೈಫಲ್ಯ(ನೆಫ್ರೊಪತಿ) ಮತ್ತು ನರಗಳ ದೌರ್ಬಲ್ಯತೆಯಿಂದ (ನ್ಯೂರೊಪತಿ) ಪಾದದ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಮಧುಮೇಹ ರೋಗಕ್ಕೆ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನು ಜಿಲ್ಲೆಯ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಪ್ರಾಧ್ಯಾಪಕರಾದ ಡಾ. ಗಿರೀಶ.ಕುಲ್ಲೊಳ್ಳಿ, ಡಾ. ರಮಾಕಾಂತ ಬಳೂರಕರ, ಡಾ. ಶ್ರುತಿ ಶೀಳಿನ, ಡಾ. ಮಂಜುನಾಥ ಸಾವಂತ, ಡಾ. ಪ್ರದೀಪ ಜಾಜು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ನರೇಂದ್ರ, ಡಾ. ಸಕೇತ, ಡಾ. ದಿವ್ಯಾಂಗ, ಡಾ. ಈಶ್ವರ, ಡಾ. ಶ್ರೀಯಾ ಉಪಸ್ಥಿತರಿದ್ದರು.
ಈ ಉಚಿತ ಸಪ್ತಾಹ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಮಧುಮೇಹಿಗಳು ಪ್ರಯೋಜನ ಪಡೆದರು. ಈ ಶಿಬಿರದಲ್ಲಿ ಉಚಿತವಾಗಿ ರಕ್ತ ತಪಾಸಣೆ, ಮೋನೊಫಿಲಾಮೆಂಟ್, ಬಯೋಥೀಸಿಯೊಮೀಟರ್, ಹ್ಯಾರಿಸ್ ಮ್ಯಾಟ್, ಹ್ಯಾಂಡ್ ಹೆಲ್ಡ್ ಡಾಪ್ಲರ್ ತಪಾಸಣೆಗಳನ್ನು ಮಾಡಿದರು. ಅಲ್ಲದೇ, ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

