ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆˌ (ಜಮಖಂಡಿ): ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿ–ತಂದೆಯರೇ ಮೊದಲ ಗುರುಗಳು. ಹೀಗಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್, ಕುಂಬಾರಹಳ್ಳದ ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಹೇಳಿದರು.
ಕುಂಬಾರಹಳ್ಳದ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪಾಲಕರಿಗಾಗಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಎಸ್ಎಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಪಾಲಕರು ಮಕ್ಕಳ ಅಧ್ಯಯನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಟಿವಿ ಹಾಗೂ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ಮಕ್ಕಳ ಭವಿಷ್ಯದ ಬಗ್ಗೆ ಸದಾ ನಿಗಾ ವಹಿಸುವಂತೆ ಅವರು ಸಲಹೆ ನೀಡಿದರು.
ವರ್ಗ ಶಿಕ್ಷಕಿ ಸವಿತಾ ಬೆನಕಟ್ಟಿ ಅವರು ರೂಪಣಾತ್ಮಕ ಪರೀಕ್ಷೆಯ ಫಲಿತಾಂಶದ ವಿವರ ನೀಡಿದರು.
ಗಣಿತ ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ, “ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ಸು ಸಾಧಿಸಬಹುದು. ಮೊಬೈಲ್–ಟಿವಿ ಬಿಟ್ಟು ಪುಸ್ತಕ ಹಿಡಿಯುವ ಅಭಿಯಾನ ಇಂದಿನಿಂದಲೇ ಆರಂಭವಾಗಲಿ” ಎಂದು ಕರೆ ನೀಡಿದರು.
ರಜಾ ದಿನಗಳಲ್ಲಿಯೂ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಕುಂಬಾರಹಳ್ಳ ಶಾಲೆಯ ವಿದ್ಯಾರ್ಥಿಗಳು ಜಮಖಂಡಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಆಂಗ್ಲ ಭಾಷಾ ಶಿಕ್ಷಕ ಅಶೋಕ ಬಿರಾದಾರ ಪಾಟೀಲ, ವಿಜ್ಞಾನ ಶಿಕ್ಷಕಿ ಆಶೀಪಾ ಭಾನು ಮೋಮಿನ ಹಾಗೂ ಕನ್ನಡ ಶಿಕ್ಷಕಿ ಶಾರದಾ ಮಠ ಅವರು ವಿದ್ಯಾರ್ಥಿಗಳ ಅಧ್ಯಯನದ ಕುರಿತು ಸಲಹೆ ನೀಡಿದರು.
ಚಿತ್ರಕಲಾ ಶಿಕ್ಷಕ ಚಂದ್ರಕಾಂತ ಪೋಲಿಸ್ ಮಾತನಾಡಿ, “ಮಕ್ಕಳ ಮುಂದೆ ಪಾಲಕರು ಯಾವುದೇ ದುಶ್ಚಟಗಳಿಗೆ ಒಳಗಾಗಬಾರದು. ದುಶ್ಚಟದ ಸಾಮಗ್ರಿಗಳನ್ನು ಮಕ್ಕಳಿಂದ ತರಿಸಬಾರದು” ಎಂದು ಮನವಿ ಮಾಡಿದರು.
ಸಭೆಯಲ್ಲಿ ಎಸ್ಡಿಎಂಸಿ ಸದಸ್ಯರಾದ ಪದ್ಮವ್ವಾ ಹುದಲಿ, ಶೈಲಾ ಮಾಳಿ, ಅಪ್ಪಾಸಾಬ್ ನದಾಫ, ಹನಮಂತ ಮರನೂರ ಹಾಗೂ ಸದಾಶಿವ ಮಾಳಿ ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಪಾಲಕರು ಹಾಗೂ ತಾಯಂದಿರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಎರಡನೇ ರೂಪಣಾತ್ಮಕ ಪರೀಕ್ಷೆಯಲ್ಲಿ ಎಸ್ಎಸ್ಎಲ್ಸಿಯ ‘ಅ’ ಮತ್ತು ‘ಬ’ ವರ್ಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಮಂಜುಳಾ ಕಡಕೋಳ, ಶಕುಂತಲಾ ಬಿರಾದಾರ, ಸಗರೆಪ್ಪ ಸೊನ್ನದ, ಸೌಜನ್ಯಾ ಬಾಳಿಗಿಡದ ಹಾಗೂ ಕರೆಪ್ಪ ವಾಜಂತ್ರಿ ಉಪಸ್ಥಿತರಿದ್ದರು. ಶಿಕ್ಷಕಿ ಶಾರದಾ ಮಠ ನಿರೂಪಿಸಿದರು. ಚಿತ್ರಕಲಾ ಶಿಕ್ಷಕ ಚಂದ್ರಕಾಂತ ಪೋಲಿಸ್ ವಂದಿಸಿದರು.

