ಮಾಜಿ ಸಿಎಂ ಸಿದ್ದರಾಮಯ್ಯ ಮೂರ್ತಿ ತೆರವಿಗೆ ಅಹಿಂದ ಸಮಾಜದ ಆಕ್ಷೇಪ | ಇದು ಅವಮಾನಿಸುವ ಪ್ರಯತ್ನವೆಂದ ಡಾ.ಕೊಳ್ಳೂರ
ಉದಯರಶ್ಮಿ ದಿನಪತ್ರಿಕೆ
ಕಲಬುರಗಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕಲಬುರಗಿಗೆ ಆಗಮಿಸುವ ಹೊತ್ತಿನಲ್ಲೇ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿಯನ್ನು ತೆರವುಗೊಳಿಸಿರುವ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಕ್ರಮವನ್ನು ಅಹಿಂದ ಸಮಾಜ ಗಂಭೀರವಾಗಿ ಪರಿಗಣಿಸಲಿದೆ ಎಂದು ಮಾಶಾಳ ಗ್ರಾಮದ ಖ್ಯಾತ ವೈದ್ಯ ಡಾ. ಸಿದ್ದಾರ್ಥ್ ಕೊಳ್ಳೂರ್ ಅವರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
“ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಇಂತಹ ಹಿರಿಯ ರಾಜಕೀಯ ನಾಯಕರ ಮೂರ್ತಿಯನ್ನು ಮುಖ್ಯಮಂತ್ರಿ ನಗರಕ್ಕೆ ಬರುವ ಸಂದರ್ಭದಲ್ಲಿ ತೆರವುಗೊಳಿಸಿರುವುದು ಸಾಮಾನ್ಯ ಘಟನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಬೆಳವಣಿಗೆ ಅವರ ಅಭಿಮಾನಿಗಳು ಹಾಗೂ ಅಹಿಂದ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವಂತಿದೆ” ಎಂದು ಅವರು ಹೇಳಿದ್ದಾರೆ.
“ಮೂರ್ತಿ ತೆರವುಗೊಳಿಸುವ ಹಿಂದೆ ನಿಜವಾದ ಕಾರಣವೇನು ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ಕಾನೂನು ಅಥವಾ ಆಡಳಿತಾತ್ಮಕ ಕಾರಣವಿದ್ದರೆ ಅದನ್ನು ಬಹಿರಂಗವಾಗಿ ಜನರಿಗೆ ತಿಳಿಸಲಿ. ಆದರೆ ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಮಯಕ್ಕೆ ಸರಿಯಾಗಿ ಮೂರ್ತಿ ತೆರವುಗೊಳಿಸಿರುವುದರಿಂದ ಸಾರ್ವಜನಿಕರಲ್ಲಿ ಅನುಮಾನ ಮೂಡುವಂತಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದು ಕೇವಲ ಒಂದು ಮೂರ್ತಿಯ ಪ್ರಶ್ನೆಯಲ್ಲ; ಗೌರವ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ. ಅಹಿಂದ ಸಮಾಜ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ಈ ವಿಚಾರದ ಕುರಿತು ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತಬೇಕಾಗುತ್ತದೆ” ಎಂದು ಡಾ. ಸಿದ್ದಾರ್ಥ್ ಕೊಳ್ಳೂರ್ ಎಚ್ಚರಿಕೆ ನೀಡಿದ್ದಾರೆ.
“ಯಾವುದೇ ಮಹನೀಯರ ಪ್ರತಿಮೆ ತೆರವುಗೊಳಿಸುವ ಸಂದರ್ಭದಲ್ಲೂ ಪಾರದರ್ಶಕತೆ ಇರಬೇಕು. ರಾಜಕೀಯ ಭೇದಾಭಿಪ್ರಾಯಗಳ ಕಾರಣಕ್ಕೆ ಇಂತಹ ಕ್ರಮಗಳು ನಡೆಯಬಾರದು. ಜಿಲ್ಲಾಡಳಿತ ವಾಸ್ತವಾಂಶವನ್ನು ಜನರ ಮುಂದೆ ಇಡಬೇಕು” ಎಂದು ಡಾ.ಕೊಳ್ಳೂರ ಅವರು ಒತ್ತಾಯಿಸಿದ್ದಾರೆ.

