ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿರುವ ಸ್ವಾಮಿ ರಾಮಾನಂದ ತೀರ್ಥರ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕು. ಅವರ ಜನ್ಮದಿನವಾದ ಅಕ್ಟೋಬರ್ ೩ರಂದು ರಾಜ್ಯ ಸರ್ಕಾರ ಅಧಿಕೃತವಾಗಿ ಸ್ವಾಮಿ ರಾಮಾನಂದ ತೀರ್ಥ ಜಯಂತಿಯನ್ನು ಆಚರಿಸಬೇಕು. ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವ ಕುರಿತು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ೩೭೧(ಜೆ) ಹೋರಾಟ ಸಮಿತಿ ಮುಖಂಡ ಲಾಯಪ್ಪ ಇಂಗಳೆ ಒತ್ತಾಯಿಸಿದರು.
ಸಿಂದಗಿಯಲ್ಲಿರುವ ಸ್ವಾಮಿ ರಾಮಾನಂದ ತೀರ್ಥರ ಸ್ಮಾರಕ ಭವನದಲ್ಲಿ ಸ್ವಾಮಿ ರಾಮಾನಂದ ತೀರ್ಥ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡ ಹೈದರಾಬಾದ್ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈದರಾಬಾದ್ ಪ್ರಾಂತದ ವಿಮೋಚನಾ ಚಳುವಳಿಗೆ ಸ್ವಾಮಿ ರಾಮಾನಂದ ತೀರ್ಥರು ನೀಡಿದ ಕೊಡುಗೆ ಅಪಾರವಾಗಿದೆ. ಹಾಗಾಗಿ ವಿಮೋಚನಾ ದಿನದಂದು ಸ್ವಾಮಿ ರಾಮಾನಂದ ತೀರ್ಥರಿಗೆ ಗೌರವ ಸಲ್ಲಿಸುವಂತೆ ವಿಜಯಪುರ ಜಿಲ್ಲಾಡಳಿತ, ಸಿಂದಗಿ ತಾಲೂಕು ಆಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸೂಕ್ತ ಗೌರವ ಸಲ್ಲಿಸದೆ ಅಗೌರವ ತೋರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ, ಎನ್. ಸುರೇಶಕುಮಾರ, ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥ ಸೇವಾ ಸಮಿತಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಹೈದರಾಬಾದ್ ಪ್ರಾಂತ ವಿಮೋಚನಾ ಚಳುವಳಿಯ ಪ್ರಮುಖ ಕಾರಣಿಕರ್ತ ಹಾಗೂ ನೇತಾರರಾಗಿದ್ದ ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥರ ಕೊಡುಗೆಯನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದ ಸ್ವಾತಂತ್ರ್ಯ ಚಳುವಳಿಗೆ ಮಹತ್ವದ ಕೊಡುಗೆ ನೀಡಿದ ಪ್ರಮುಖ ನಾಯಕರಲ್ಲಿ ಸ್ವಾಮಿ ರಾಮಾನಂದ ತೀರ್ಥರು ಒಬ್ಬರು. ಅವರ ಸೇವೆ ಹಾಗೂ ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಮತ್ತು ಸಿಂದಗಿಯಲ್ಲಿರುವ ಅವರ ಸ್ಮಾರಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ: ಸಿದ್ದನಗೌಡ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಂಗರಾವ ಖೇಡಗಿ, ಸಮಿತಿಯ ಕಾರ್ಯದರ್ಶಿ ಪ್ರದೀಪ ದೇಶಪಾಂಡೆ, ವಿನೋದ ಖೇಡ, ಕಲ್ಲಪ್ಪ ಶಿವಶರಣ, ಚಂದ್ರಶೇಖರ ಹೊಸಮನಿ, ಬಸವರಾಜ ಕುಂಬಾರ, ಧರ್ಮಣ್ಣ ಗಬಸಾವಳಗಿ, ಬಸನಗೌಡ ಧರ್ಮಗೊಂಡ, ಶಿವಪ್ಪ ಸುಲ್ಪಿ, ಎಂ.ಎಚ್. ಪಟೇಲ, ರಮೇಶ ದೊಡಮನಿ, ಶಬ್ಬೀರ ಪಟೇಲ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

