ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ, ಕೊಲ್ದಾರ ಹಾಗೂ ನಿಡಗುಂದಿ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿರುವ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ ನೋಂದಣಿ ರದ್ದುಪಡಿಸಲು ಕ್ರಮವಹಿಸಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈ ಸಹಕಾರ ಸಂಘಗಳು ನಿಯಮಾವಳಿಗಳಂತೆ ಕಾರ್ಯನಿರ್ವಹಿಸದೇ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಸಮಾಪನಾ ಆದೇಶ ಹೊರಡಿಸಿದ್ದು, ಸಮಾಪನಾಧಿಕಾರಿಯನ್ನೂ ನೇಮಕ ಮಾಡಿದ್ದಾರೆ.
ಈ ಸಂಘಗಳು ನೋಂದಾಯಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ಆಡಳಿತ ಮಂಡಳಿ ಸದಸ್ಯರು ಅಥವಾ ಮುಖ್ಯ ಕಾರ್ಯನಿರ್ವಾಹಕರ (ಕಾರ್ಯದರ್ಶಿ) ಮಾಹಿತಿ ಲಭ್ಯವಿರುವುದಿಲ್ಲ. ಅಲ್ಲದೆ, ಸುದೀರ್ಘ ಅವಧಿಯಿಂದ ಲೆಕ್ಕ ಪರಿಶೋಧನೆಯೂ ನಡೆದಿರುವುದಿಲ್ಲ.
ಆಕ್ಷೇಪಣೆಗೆ ೭ ದಿನಗಳ ಗಡುವು:
ಈ ಕೆಳಗಿನ ಸಹಕಾರ ಸಂಘಗಳೊಂದಿಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ವ್ಯವಹಾರಿಕ ಬಾಕಿ (ಕೊಡತಕ್ಕ ಅಥವಾ ಬರತಕ್ಕ ಬಾಕಿಗಳು) ಹೊಂದಿದ್ದರೆ, ಸೂಕ್ತ ದಾಖಲಾತಿಗಳೊಂದಿಗೆ ಈ ಪ್ರಕಟಣೆ ಹೊರಬಿದ್ದ ೦೭ ದಿನಗಳೊಳಗಾಗಿ ಬಸವನಬಾಗೇವಾಡಿಯ ಪಿಎಲ್ಡಿ ಬ್ಯಾಂಕ್ ಕಚೇರಿ ಕಟ್ಟಡದಲ್ಲಿರುವ ಸಹಕಾರ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ನಿಗದಿತ ಅವಧಿಯೊಳಗೆ ಯಾವುದೇ ಅರ್ಜಿ ಅಥವಾ ಆಕ್ಷೇಪಣೆಗಳು ಬಾರದಿದ್ದಲ್ಲಿ, ಆಕ್ಷೇಪಣೆಗಳಿಲ್ಲವೆಂದು ಪರಿಗಣಿಸಿ ನಿಯಮಾನುಸಾರ ಸಂಘಗಳ ಅಢಾವೆಯನ್ನು ಶೂನ್ಯಗೊಳಿಸಿ, ನೋಂದಣಿ ರದ್ದತಿಗೆ ಅಂತಿಮ ಕ್ರಮ ಕೈಗೊಳ್ಳಲಾಗುವುದು. ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಸಮಾಪನಾಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿ., ಮಣ್ಣೂರು,ನೇಕಾರ ಸಹಕಾರ ಉತ್ಪಾದಕ ಸಹಕಾರ ಸಂಘ ನಿ., ನಿಡಗುಂದಿ ತಾಲೂಕಿನ ವಂದಾಲ, ಸಜ್ಜನ ಎಣ್ಣೆ ಹಿಂಡಿ ಉತ್ಪಾದಕರ ಸಹಕಾರ ಸಂಘ ನಿ., ನಿಡಗುಂದಿ, ಬಾಗೇವಾಡಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ ನಿ., ಬಸವನಬಾಗೇವಾಡಿ,ಶ್ರೀ ಗುರುಪರಮಾನಂದ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘ, ದಿಂಡವಾರ, ದಿ ಬ.ಬಾಗೇವಾಡಿ ಹೈಸ್ಕೂಲ ಶಿಕ್ಷಕರ ಪತ್ತಿನ ಸಹಕಾರ ಸಂಘ, ಬಸವನಬಾಗೇವಾಡಿ, ಸುಜಲ ಕೈಮಗ್ಗ ಮತ್ತು ನೇಕಾರರ ಸಹಕಾರ ಸಂಘ ನಿಡಗುಂದಿ ತಾಲೂಕಿನ ಚಿಮ್ಮಲಗಿ,ಟಿಪ್ಪು ಸುಲ್ತಾನ ಅಲ್ಪಸಂಖ್ಯಾತರ ವಿವಿಧೋದ್ದೇಶಗಳ ಸಹಕಾರ ಸಂಘ, ಮನಗೂಳಿ,ಶ್ರೀ ಬನಶಂಕರಿ ನೇಕಾರರ ಸಹಕಾರ ಸಂಘ ನಿ., ಕೊಲ್ದಾರ, ಪ್ರಾಥಮಿಕ ಕೈಮಗ್ಗ ನೇಕಾರರ ಸಹಕಾರ ಸಂಘ ನಿ., ನಿಡಗುಂದಿ,ಶ್ರೀ ದಾನೇಶ್ವರಿ ಕೈಮಗ್ಗ ನೇಕಾರರ ಸಹಕಾರಿ ಸಂಘ ನಿ., ಮುತ್ತಗಿ, ಶ್ರೀ ಅಲೆಮಾರಿ ಜನಾಂಗದ ವಿವಿಧೋದ್ದೇಶಗಳ ಸಹಕಾರ ಸಂಘ ನಿ., ಬಸವನಬಾಗೇವಾಡಿ,ಶ್ರೀ ಭಾವಿ ಬಸವೇಶ್ವರ ವಿವಿಧೋದ್ಧೇಶಗಳ ಸಹಕಾರ ಸಂಘ ನಿ., ಬಳೂತಿ ಸೇರಿದಂತೆ ಇತರ ಸಹಕಾರ ಸಂಘಗಳು ಸೇರಿವೆ ಎಂದು ಬಸವನ ಬಾಗೇವಾಡಿಯ ಸಮಾಪನಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
