ದೇಶಪ್ರೇಮ & ಜನಜಾಗೃತಿ ಮೂಡಿಸಿದ ರಂಗಕರ್ಮಿಗಳು | ಹಿರಿಯ ಕಲಾವಿದ ಸಿದ್ರಾಮ್ ತತ್ರಾಣಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆˌ (ಜಮಖಂಡಿ): ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕದ ರಂಗಭೂಮಿ ಹಾಗೂ ನಾಟಕ ಕಲಾವಿದರು ಜನರಲ್ಲಿ ದೇಶಪ್ರೇಮ, ರಾಷ್ಟ್ರಾಭಿಮಾನ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು ಎಂದು ಹಿರಿಯ ಕಲಾವಿದ ಸಿದ್ರಾಮ್ ತತ್ರಾಣಿ ಹೇಳಿದರು.
ನಗರದ ಬಸವೇಶ್ವರ ಸರ್ಕಲ್ ಸಮೀಪದ ವೀರುವ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘದ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ನೇರವಾಗಿ ಧುಮುಕಿದವರಲ್ಲಿ ವೃತ್ತಿ ರಂಗಭೂಮಿಯ ಅನೇಕ ಕಲಾವಿದರು ಇದ್ದರು. ಅಂದಿನ ಸಂದರ್ಭದಲ್ಲಿ ನಾಟಕಗಳು ಕೇವಲ ಮನರಂಜನೆಯ ಮಾಧ್ಯಮವಾಗಿರದೆ, ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಹಾಗೂ ಬ್ರಿಟಿಷರ ವಿರುದ್ಧ ಹೋರಾಟದ ಕಿಚ್ಚು ಹಚ್ಚುವ ಶಕ್ತಿಶಾಲಿ ಮಾಧ್ಯಮವಾಗಿದ್ದವು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಾಟಕದ ಸಂಗೀತ ನಿರ್ದೇಶಕ ಬಸವಲಿಂಗಪ್ಪ ಕೊಡ್ಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟಕ್ಕೆ ಸೀಮಿತವಾಗಿರಲಿಲ್ಲ. ರಂಗಭೂಮಿ, ನಾಟಕ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಕಲಾ ಮಾಧ್ಯಮಗಳ ಮೂಲಕವೂ ಬ್ರಿಟಿಷರ ವಿರುದ್ಧ ಜನಜಾಗೃತಿ ಮೂಡಿಸಲಾಗಿತ್ತು. ಕಲಾವಿದರು ತಮ್ಮ ಕಲೆ ಮತ್ತು ಪ್ರತಿಭೆಯನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಸಮರ್ಪಿಸಿಕೊಂಡಿದ್ದರು ಎಂದು ತಿಳಿಸಿದರು.
ಇಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಕಲಾವಿದರು ವಹಿಸಿದ ಪಾತ್ರವನ್ನು ಅರಿತುಕೊಂಡು ದೇಶದ ಏಕತೆ, ಸಂವಿಧಾನದ ಮೌಲ್ಯಗಳು ಮತ್ತು ರಾಷ್ಟ್ರೀಯ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ರಂಗಭೂಮಿಯಂತಹ ಜನಪರ ಕಲಾ ಮಾಧ್ಯಮಗಳ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶಗಳನ್ನು ಸಾರುವ ಕಾರ್ಯ ಮುಂದುವರಿಯಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜೇವರ್ಗಿ ನಾಟಕ ಕಂಪನಿಯ ಕಲಾವಿದರಾದ ರಾಘವೇಂದ್ರ ಮುದೋಳ, ಸಂಘದ ಒಡತಿ ಸುಜಾತಾ ಗುಬ್ಬಿ, ಪ್ರಭು ಹಿರೇಮಠ್, ಸಿದ್ದು ಹಿರೇಮಠ್, ಪ್ರಿಯಾ ಅಕ್ಕಲಕೋಟ, ಧನ್ರಾಜ್ ಬುಗಡೆಕರ, ಸಿದ್ದಣ್ಣ ಬಾಪ್ರಿ, ಕಮತಗಿ ಅವಿನಾಶ್ ಅಕ್ಕಲಕೋಟ, ಪುಟ್ಟು ಕೊಡ್ಲಿ, ಪೃಥ್ವಿ ಬಾದಾಮಿ, ಪ್ರೇಮ ಮೂಡಲಗಿ, ರವಿ ಬಿಸರಹಳ್ಳಿ ಸೇರಿದಂತೆ ವಿವಿಧ ಕಲಾವಿದರು ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಂಗಭೂಮಿ ಕಲಾವಿದರು ಒಂದೆಡೆ ಸೇರಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ಕಲೆಯ ಜೊತೆಗೆ ದೇಶಪ್ರೇಮದ ಸಂದೇಶವನ್ನು ಸಾರಿದರು.

