ಮಳೆಗಾಲದಲ್ಲಿ ವಿಜಯಪುರ ನಗರದ ಪ್ರವಾಹ ಪರಿಸ್ಥಿತಿ ನಿವಾರಣೆಗೆ ಕ್ರಮ | ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಳೆಗಾಲದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ–೨ರಡಿ ೧೯ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ, ಮಳೆಗಾಲದಲ್ಲಿ ಸಾರ್ವಜನಿಕರಿಗೆ ಹಾಗೂ ಮನೆಗಳಿಗೆ ಉಂಟಾಗುವ ತೊಂದರೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ–೨ರಡಿ ಕೈಗೆತ್ತಿಕೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ. ಬಿ. ಪಾಟೀಲ ಅವರು ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ಮಳೆನೀರು ಚರಂಡಿ, ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಿಶೇಷವಾಗಿ ನವಭಾಗ್ ಪ್ರದೇಶದಲ್ಲಿ ಮಳೆನೀರು ಚರಂಡಿ ಹಾಗೂ ನವಭಾಗ್–ಹಮೀದ ನಗರ ರಸ್ತೆಯಲ್ಲಿ ಮಳೆನೀರು ಚರಂಡಿ ಮತ್ತು ಯುಟಿಲಿಟಿ ಡಕ್ಟ್ ಅಭಿವೃದ್ಧಿ ಕಾಮಗಾರಿಯನ್ನು ೧.೫೦ ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ವಾರ್ಡ್ ನಂ.೨೦, ೨೮ ಹಾಗೂ ೩೦ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಒಟ್ಟು ಅಂದಾಜು ಮೊತ್ತ ೧೯ ಕೋಟಿಯಾಗಿದ್ದು, ನಗರದಲ್ಲಿ ಮಳೆನೀರು ನಿರ್ವಹಣೆ, ಒಳಚರಂಡಿ ಹಾಗೂ ರಸ್ತೆ ಮೂಲಸೌಕರ್ಯ ಸುಧಾರಿಸಲು ಈ ಕಾಮಗಾರಿಗಳು ಪೂರಕವಾಗಲಿವೆ ಎಂದರು.
ವಾರ್ಡ್ ನಂ. ೨೮ರ ಅಬ್ದುಲ್ ಹಮೀದ್ ದರ್ಗಾ ಕ್ರಾಸ್ ನಿಂದ ಕೆಕೆಜಿಎಸ್ ವೃತ್ತ ಹಾಗೂ ಸಂದಲ್ ಬಾವಡಿ ಪ್ರದೇಶಗಳಲ್ಲಿ ಒಳಚರಂಡಿ, ರಸ್ತೆ ಮತ್ತು ಮಳೆನೀರು ಚರಂಡಿಯನ್ನು ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.
ಖಾಜಾ ನಗರ ಮತ್ತು ನವಭಾಗ ಪ್ರದೇಶಗಳಲ್ಲಿ ಒಳಚರಂಡಿ, ಚರಂಡಿ ಹಾಗೂ ರಸ್ತೆ ಅಭಿವೃದ್ಧಿಗೆ ೨ ಕೋಟಿ ರೂ, ಟಿಪ್ಪು ಸುಲ್ತಾನ್ ನಗರ ಕೋಟೆ ಗೋಡೆಯಿಂದ ಅಲಿಕ್ ರೋಜಾ ಮಾರ್ಗವಾಗಿ ಸರಕಾರಿ ತೋಟದವರೆಗೆ ೨.೫೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಕಾಸ್ಗೇರಿ ಓಣಿ ಗಜಾನನ ಕಿರಾಣಿ ಅಂಗಡಿಯಿಂದ ಶಿರೂರಕರ ಹಾಗೂ ಜೇರಲಿ ಮನೆವರೆಗೆ ೨ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ವಾರ್ಡ್ ನಂ. ೩೦ರ ಹಳ್ಳಿ ಕಾಲೋನಿ, ಹವೇಲಿ ಗಲ್ಲಿ ಹಾಗೂ ಟಿಪ್ಪು ನಗರ ಮತ್ತು ಲಾಲ್ ಬಂಗ್ಲಾ ಪ್ರದೇಶಗಳಲ್ಲಿ ೩ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿಪಡಿಸಲಾಗುವುದು ಎಂದರು.
ನಗರದ ಮುಬಾರಕ್ ವೃತ್ತದಿಂದ ಆರ್ಕಾಟ್ ದರ್ಗಾ ರಸ್ತೆ ಅಂಕಲ್ ಕಾರ್ನರ್ ವರೆಗೆ ಮಳೆನೀರು ಚರಂಡಿ, ಯುಟಿಲಿಟಿ ಡಕ್ ಹಾಗೂ ರಸ್ತೆಯನ್ನು ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ವಾರ್ಡ್ ನಂ. ೨೦ರ ಟಿಪ್ಪು ಸುಲ್ತಾನ್ ಕಾಲೋನಿ, ಮಕ್ಬೂಲ್ ನಗರ, ಇಂದಿರಾ ನಗರ, ಲತೀಫ್ ನಗರ, ಕೆಎಚ್ಬಿ ಕಾಲೋನಿ ಹಾಗೂ ಆದಿಲ ಶಾಹಿ ಪ್ರದೇಶಗಳಲ್ಲಿ ರಸ್ತೆ ಹಾಗೂ ಒಳಚರಂಡಿ ಪೈಪ್ ಲೈನ್ ಕಾಮಗಾರಿಗೆ ೨ ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ್ ಮೆಕ್ಕಳಕಿ, ಅಧೀಕ್ಷಕ ಅಭಿಯಂತರರಾದ ಇ. ತಿಮ್ಮಪ್ಪ, ಜಮೀರ್ ಬಾಂಗಿ, ಮುಬೀನ್ ಶೇಖ್, ಕೈಸರ್ ಇನಾಮದಾರ್ ಹಾಗೂ ಅಪ್ಪು ಪೂಜಾರಿ ಸೇರಿದಂತೆ ಸಂಬಂಧಿಸಿದ ವಾರ್ಡ್ಗಳ ಪಾಲಿಕೆ ಸದಸ್ಯರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

