ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಹಕಾರಿ ಬ್ಯಾಂಕುಗಳು ರೈತರಿಗೆ ಸಂಕಷ್ಟ ದಿನಗಳಲ್ಲಿ ವರದಾನವಾಗಿವೆ ಎಂದು ಕೈಗಾರಿಕೆ, ಮೂಲ ಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಬೃಹತ್ ಕಟ್ಟಡದ ಗೋದಾಮು ಉದ್ಘಾಟಿಸಿ ಅವರು ಮಾತನಾಡಿದರು.
ಈಗ ಕೃಷಿ ಕ್ಷೇತ್ರ ಕಷ್ಟಕರವಾಗಿದೆ. ಆಲಮಟ್ಟಿ ಜಲಾಶಯ ಎತ್ತರ 524.256 ಮೀ. ಪೂರ್ಣವಾದರೆ ರೈತರ ಗೋಳು ನೀಗಲಿದೆ. ಸದ್ಯ ತೀವ್ರ ಬರಗಾಲದ ಪರಿಸ್ಥಿತಿ ಇದೆ. ರೈತರು ಎರಡು ಮೂರು ಬಾರಿ ಬಿತ್ತನೆ ಮಾಡಿ ಸೋತಿದ್ದಾರೆ. ಜಗತ್ತಿನಲ್ಲಿ ಪ್ರಕೃತಿ ಅಸಮತೋಲನ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಸಹಕಾರ ಸಂಘಗಳು ರೈತರಿಗೆ ಬಹಳಷ್ಟು ನೆರವು ಒದಗಿಸುತ್ತಿವೆ. ನೀರಾವರಿ ಪ್ರದೇಶಗಳ ರೈತರು ವಾಣಿಜ್ಯ ಬೆಳೆ ಬೆಳೆದು ಸದೃಢರಾಗುತ್ತಿದ್ದು, ಅವರು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು.
12 ವರ್ಷಗಳಲ್ಲಿ ಕೇಂದ್ರ ಸರಕಾರ ರೂ. 10 ಲಕ್ಷ ಕೋ. ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂದು ಬಿಜೆಪಿಯ ಸುಬ್ರಮಣ್ಯಸ್ವಾಮಿ ಹೇಳಿದ್ದಾರೆ. ಆದರೆ ರೈತರ ಕೇವಲ ರೂ. 2 ಲಕ್ಷ ಕೋ. ಸಾಲ ಮನ್ನಾ ಮಾಡುತ್ತಿಲ್ಲ. ಮನಮೋಹನ್ ಸಿಂಗ್ ಅವರೊಬ್ಬರೇ ಈ ದೇಶದಲ್ಲಿ ಸಾಲ ಮನ್ನಾ ಮಾಡಿದ್ದರು. ಇಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಮಾಡಿದ್ದರಿಂದ ರೈತರಿಗೆ ಒಳಿತಾಗಿದೆ. ಈ ಭಾಗದ ಅಸ್ಮಿತೆಯಾದ ಈ ಕಾರ್ಖಾನೆ ಉಳಿಸಬೇಕು. ಕಷ್ಟದಲ್ಲಿರುವ ಇದನ್ನು ನಾನು ಮತ್ತು ಶಾಸಕ ಶಿವಾನಂದ ಪಾಟೀಲ, ಸಚಿವ ಲಕ್ಷ್ಮಣ ಸವದಿ ಅವರೆಲ್ಲ ಸೇರಿ ಉಳಿಸಿಕೊಳ್ಳುತ್ತೇವೆ. ಮುಳುಗಡೆ ರೈತರಿಗೆ ಮೊದಲು ರೂ. 30 ಸಾವಿರ ಕೋ. ಅದು ಈಗ ರೂ. 60 ಸಾವಿರ ಕೋ. ಗೆ ಹೆಚ್ಚಿದೆ. 70 ಸಾವಿರ ಎಕರೆ ಭೂಮಿ ಮುಳುಗಡೆಯಾಗಿದ್ದು, 20 ಹಳ್ಳಿಗಳು ಸ್ಥಳಾಂತರವಾಗಬೇಕಿದೆ ಎಂದು ಅವರು.
ಇಲ್ಲಿ ಸಹಕಾರಿ ಸಂಘದ ಭವ್ಯ ಕಟ್ಟಡ ನಿರ್ಮಾಣವಾಗಿರುವುದು ಸಂತೋಷವಾಗಿದೆ. ಸಾಲ ತೆಗೆದುಕೊಂಡವರು ಪ್ರಾಮಾಣಿಕವಾಗಿರಬೇಕು. ಶಿವಾನಂದ ಪಾಟೀಲರು ದಕ್ಷತೆಯಿಂದ ಡಿಸಿಸಿ ಬ್ತಾಂಕ್ ಮುನ್ನೆಡೆಸಿ ಜಿಲ್ಲೆಯಲ್ಲಿ ತೊಂಬತ್ತರ ದಶಕದಿಂದಲೂ ಸಹಕಾರಿ ಕ್ಷೇತ್ರ ಬಲಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು
ಮಾಜಿ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಎಸ್. ಪಾಟೀಲ ಮಾತನಾಡಿ, ಸಹಕಾರಿ ಚಳವಳಿ ಈ ದೇಶಕ್ಕೆ ಸಂಜೀವಿನಿ. ಇದು ಜಾತ್ಯಾತೀತ, ಪಕ್ಷಾತೀತ. ಕಡಿಗನಾಳ ಸಿದ್ಧನಗೌಡ ಧಾರವಾಡದಲ್ಲಿ ಸಹಕಾರಿ ಬಲ ತುಂಬಿದರೆ, ಅದು ಈ ಭಾಗದ ಬಿ. ಟಿ. ಪಾಟೀಲ ಅವರಿಂದ ಜಿಲ್ಲೆಯಲ್ಲಿ ಬೆಳೆದು ನಿಂತಿದೆ. ಒಟ್ಟು 272ರ ಸಂಘಗಳ ಪೈಕಿ ಇನ್ನು ಕೇವಲ 20 ಸಂಘಗಳ ಕಟ್ಟಡವಾದರೆ ಶೇ. 100 ರಷ್ಟು ಕಟ್ಟಡ ಹೊಂದಿದಂತಾಗುತ್ತದೆ. ಜಿಲ್ಲೆಯಲ್ಲಿ ಪ್ರತಿ ರೈತರಿಗೆ ರು. 80 ಸಾವಿರ ನೀಡಲಾಗುತ್ತಿದ್ದು, ಇದು ರಾಜ್ಯದಲ್ಲಿಯೇ ಅತೀ ಹೆಚ್ಚು. ಡಿಸಿಸಿ ಬ್ಯಾಂಕು ಇಂದು ರೂ. 6000 ಕೋ. ವ್ಯವಹಾರ ನಡೆಸುತ್ತಿದೆ. ಇದು ದಾಖಲೆಯಾಗಿದೆ. ಕೇಂದ್ರ ಸರಕಾರ ರೈತರ ಪರವಿಲ್ಲ, ಅದರ ನೀತಿಗಳಿಂದ ನಬಾರ್ಡ್ ಕೂಡ ಸಾಲ ನೀಡದ ಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಟಕ್ಕಳಕಿ ಗ್ರಾಮದಲ್ಲಿ ಕುಡಿಯಲೂ ನೀರು ಸಿಗುತ್ತಿರಲಿಲ್ಲ ಆದರೆ ಅಲ್ಲಿನ ಹೆಣ್ಣುಮಕ್ಕಳು ದಿನಕ್ಕೆ 3000 ಲೀಟರ್ ಸಾವಿರ ಹಾಲು ಉತ್ಪಾದಿಸಿ ಸಹಕಾರಿ ರಂಗಕ್ಕೆ ಕೊಟ್ಟು ಸಬಲರಾಗಿದ್ದಾರೆ. ಹೊಲದಲ್ಲಿ ಮನೆ ಕಟ್ಟಿದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಸವನ ಬಾಗೇವಾಡಿಯ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಮತ್ತು ಮಾಜಿ ಸಚಿವ ಶಿವಾನಂದ ಎಸ್. ಪಾಟೀಲ ಅವರು ಜಿಲ್ಲೆಯ ಅಭಿವೃದ್ಧಿ ಪಥದ ಜೋಡೆತ್ತುಗಳು. ಒಬ್ಬರು ನೀರಾವರಿ, ಇನ್ನೊಬ್ಬರು ಸಹಕಾರಿ. ಒಬ್ಬರು ನೀರು ಕೊಟ್ಟು ರೈತರನ್ನು ಶ್ರೀಮಂತಗೊಳಿಸಿದ್ದರೆ, ಇನ್ನೊಬ್ಬರು ಸಹಾಕಾರಿ ರಂಗದಲ್ಲಿ ರೈತರನ್ನು ತೊಡಗಿಸಿ ಆರ್ಥಿಕ ಅಡಿಪಾಯ ಹಾಕಿದ್ದಾರೆ. ಇವರಿಬ್ಬರಿಂದ ಮುಂದೆಯೂ ಜಿಲ್ಲೆ ಇನ್ನಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಎಂ. ಡಿ. ಪಡಸಲಗಿ ಸ್ವಾಗತಿಸಿದರು. ಬಬಲಾದಿಯ ಸದಾಶಿವಯ್ಯ ಶ್ರೀ, ಕಣಬೂರಿನ ರಾಚಯ್ಯ ಪೂಜಾರಿ ಸಾನಿಧ್ಯ ವಹಿಸಿದ್ದರು. ಸಹಕಾರಿ ಸಂಘಗಳ ಉಪನಿಬಂಧಕಿ ಎಸ್. ಕೆ. ಭಾಗ್ಯಶ್ರೀ, ಜಿಲ್ಲಾ ಪ್ರಬಂಧಕ ವಿಕಾಸ ರಾಠೋಡ, ಡಿಸಿಸಿ ಸಿಇಒ ಎಸ್. ಎ. ಢವಳಗಿ, ಸಹಾಯಕ ನಿಬಂಧಕ ಚೇತನ ಭಾವಿಕಟ್ಟಿ, ತರಬೇತಿ ಸಂಯೋಜಕ ಆರ್. ಎಂ. ಬಣಗಾರ ಮುಂತಾದವರು ಉಪಸ್ಥಿತರಿದ್ದರು.

