ವಿಜಯಪುರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ದ | ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸತತ ಮೂರು ವರ್ಷಗಳ ಕಾಲ ದೇಶಾದ್ಯಂತ ಸಂಚಲನ ಸೃಷ್ಠಿಸಿದ ಪಂಚ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರಕ್ಕೆ ವಿಶೇಷ ಗೌರವ ತರುವುದರ ಜೊತೆಗೆ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿವೆ. ನಮ್ಮ ಸರ್ಕಾರ ಜಾರಿಗೊಳಿಸಿದ ಈ ಯೋಜನೆಗಳನ್ನು ಇಂದಿನ ಮುಖ್ಯಮಂತ್ರಿ ಅವರು ಮುಂದುವರಿಸುವುದರ ಜೊತೆಗೆ ಅಧಿಕಾರ ವಹಿಸಿಕೊಂಡ ೧೦೦ ದಿನಗಳಲ್ಲಿ ೪೫ ವಿಶೇಷ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನ ವೀಕ್ಷಿಸಿ, ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಜಿಲ್ಲೆ ಸೇರಿದಂತೆ ದೇಶವ್ಯಾಪಿ ತಮ್ಮ ಜೀವದ ಹಂಗು ತೊರೆದು, ದೇಶಕ್ಕಾಗಿ ಪ್ರಾಣ ತೆತ್ತ ಕೆಚ್ಚೆದೆಯ ಹೋರಾಟ ಮಾಡಿದವರ ಹೆಸರನ್ನು ಸ್ಮರಿಸಿದ ಸಚಿವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಈ ದಿನವನ್ನು ರಾಷ್ಟ್ರೀಯ ಐಕ್ಯತೆ ಬಲಪಡಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ದಿನವಾಗಿದೆ ಎಂದು ಹೇಳಿದರು. ಭಾರತಾಂಬೆಯ ಅಭಿವೃದ್ಧಿಗೆ ಶ್ರಮಿಸಿದ ಸಮಸ್ತರೆಲ್ಲರ ಸಾತ್ವಿಕ ಪರಂಪರೆ ಮುಂದುವರೆಸಿಕೊಂಡು ಹೋಗಲು ನಾವೆಲ್ಲರೂ ಜಾತ್ಯಾತೀತ, ಧರ್ಮಾತೀತ ಮತ್ತು ಸೈದ್ಧಾಂತಿಕವಾಗಿ, ಏಕತೆಯಿಂದ ಶ್ರಮಿಸುತ್ತ, ರಾಷ್ಟ್ರವನ್ನು ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿಕೊಂಡು ಹೋಗಲು ಕಂಕಣಬದ್ಧರಾಗೋಣ ಎಂದು ಸಂಕಲ್ಪಿಸಿ ಪ್ರತಿಜ್ಞೆಗೈಯೋಣ ಎಂದು ಸಚಿವರು ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿದರು.
ಒಂದು ಹೆಕ್ಟೇರ್ ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ.೫೦ ರಷ್ಟು ಸಬ್ಸಿಡಿ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದರು.
ಯುವ ಕರ್ನಾಟಕ ನಿರ್ಮಾಣಕ್ಕೆ ಚಾಲನೆ ನೀಡುವುದು. ಭಾರತ್ ಜೋಡೋ ಯುವಕ ಸಂಘ ಮಿಷನ್, ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ೬೦೦೦, ನಗರ ಪ್ರದೇಶಗಳಲ್ಲಿ ೪೦೦೦ ಸಂಘಗಳ ಸ್ಥಾಪಿಸುವುದು ಮತ್ತು ವಾರ್ಷಿಕ ತಲಾ ೧೦ ಲಕ್ಷ ರೂ. ಅನುದಾನದಂತೆ ವಾರ್ಷಿಕ ೧ ಸಾವಿರ ಕೋಟಿ ವೆಚ್ಚದಲ್ಲಿ ಯುವಕರಲ್ಲಿ ಆರೋಗ್ಯ, ಕೌಶಲ್ಯ, ಸಾಮಾಜಿಕ ಸಾಮರಸ್ಯ ಉತ್ತೇಜನ ನೀಡಲಾಗುವುದು ಎಂದರು.
ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಕಲ್ಪಿಸುವುದು. ಸರ್ಕಾರಿ ಆಸ್ಪತ್ರೆಗಳ ದತ್ತು ಯೋಜನೆ ಮತ್ತು ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಅವಶ್ಯ ಮಾನವ ಸಂಪನ್ಮೂಲ ಒದಗಿಸಲು ಉತ್ತೇಜಿಸಲಾಗುವುದು. ನಶೆ ಮುಕ್ತ ಕರ್ನಾಟಕದ ಭಾಗವಾಗಿ ಯುವಕರಲ್ಲಿ ಜಾಗೃತಿ ಮೂಡಿಸಿ ತ್ಯಜಿಸುವಿಕೆ, ತಿಳಿಸು, ಬೆಂಬಲ ಮತ್ತು ಸಬಲೀಕರಣ ಉಪಕ್ರಮಗಳ ಮೂಲಕ ನಶೆ ಪದಾರ್ಥಗಳ ವ್ಯಸನ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ ಎಂದರು.
ಬರ ಪರಿಸ್ಥಿತಿ ಎದುರಿಸಲು ಸಜ್ಜು: ರಾಜ್ಯದಲ್ಲಿ ಈ ವರ್ಷ ಭೀಕರ ಬರದ ಛಾಯೆ ಕಂಡು ಬಂದಿದ್ದು, ವಿಜಯಪುರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ವಾಡಿಕೆ ಮಳೆಯು ೧೯೬.೭ ಎಂ.ಎಂ ಇದ್ದು, ಇದುವರೆಗೂ ಒಟ್ಟ್ಟು ಮಳೆ ೧೬೩.೫ ಎಂ.ಎಂ ಆಗಿದೆ. ಆಗಸ್ಟ್ ತಿಂಗಳಲ್ಲಿಯೇ ಶೇ.೪೬ ರಷ್ಟು ಮಳೆ ಕೊರತೆ ಆಗಿದೆ. ಬರದಿಂದ ಸಂಭವಿಸಬಹುದಾದ ಸವಾಲುಗಳನ್ನು ಎದುರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಉಸ್ತುವಾರಿ ಸಚಿವನಾಗಿ ನಾನು ಜಿಲ್ಲೆಯ ಪ್ರತಿಯೊಂದು ಭಾಗಕ್ಕೆ ಕಾಲಕಾಲಕ್ಕೆ ಭೇಟಿ ನೀಡಿ, ವಸ್ತುಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಕಾರಣದಿಂದ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೧, ೨ & ೩ ರ ಅಡಿಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿನ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದಹ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ೧೭೫ ಕೆರೆ ಮತ್ತು ಬಾಂದಾರಗಳನ್ನು ತುಂಬಿಸಲು ಕಾಲುವೆ ಜಾಲಕ್ಕೆ ನೀರನ್ನು ಹರಿಸಲಾಗಿರುತ್ತದೆ ಎಂದರು.
ತೆರೆದ ವಾಹನದಲ್ಲಿ ಸಚಿವರು ಪೆರೇಡ್ ತಂಡಗಳ ಪರಿವೀಕ್ಷಣೆ ನಡೆಸಿದರು. ಪರೇಡ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಥಸಂಚಲನದಲ್ಲಿ ಪೊಲೀಸ್ ಇಲಾಖೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ನಾಗರಿಕ ಪೊಲೀಸ್ ಪಡೆ, ಗೃಹರಕ್ಷಕ ದಳ, ಅಗ್ನಿಶಾಮಕ ಇಲಾಖೆ, ಐ.ಆರ್.ಬಿ ಘಟಕ, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಹಲವು ತಂಡಗಳು ಶಿಸ್ತುಬದ್ಧವಾಗಿ ಭಾಗವಹಿಸಿ ಗಮನ ಸೆಳೆದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೋಂದಾಯಿತ ಕಲಾವಿದರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ, ಮೇಯರ್ ಎಂ.ಎಸ್ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗಂಗಾಧರ ಸಂಬಣ್ಣಿ, ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೊಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಸಂತ ಹೊನಮೋಡೆ, ಉಪ ಮೇಯರ್ ಶ್ರೀಮತಿ ಸುಮಿತ್ರಾ ಜಾಧವ ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ., ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯಪುರ ಮಹಾನಗರ ಪಾಲಿಕೆಗೆ ರೂ.೧೫೦ ಕೋಟಿ ಹಂಚಿಕೆ
ವಿಜಯಪುರ ಮಹಾನಗರ ಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಹಂತ-೨ ಯೋಜನೆಯಡಿ ರೂ.೧೫೦ ಕೋಟಿ ಹಂಚಿಕೆಯಾಗಿದ್ದು, ರಸ್ತೆ ಮತ್ತು ಪ್ರವಾಹ ಸಂಬಂಧಿತ ಮಳೆನೀರು ಚರಂಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಶಾಶ್ವತ ಕುಡಿಯುವ ನೀರಿನ ಸಮಗ್ರ ಯೋಜನೆ
ಶಾಶ್ವತ ಕುಡಿಯುವ ನೀರಿನ ಸಮಗ್ರ ಯೋಜನೆಯನ್ನು ೨ ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ವಿಜಯಪುರ ಜಿಲ್ಲೆಯ ೧೩ ತಾಲೂಕುಗಳ ೨೧೧ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ೧೧ ನಗರ ಪ್ರದೇಶಗಳಲ್ಲಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯದ ಹಿನ್ನೀರನ್ನು ಶುದ್ಧೀಕರಿಸಿ ಪೂರೈಸಲು ಒಟ್ಟು ೩೦೫೯ ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದ್ದು, ಇದುವರೆಗೆ ೧೯೯೪ ಕೋಟಿ ರೂಪಾಯಿಗಳ ವೆಚ್ಚ ಭರಿಸಲಾಗಿದೆ ಎಂದರು.

ಉದ್ಘಾಟನೆಗೆ ವಿಮಾನನಿಲ್ದಾಣ ಸಜ್ಜು
ವಿಜಯಪುರ ವಿಮಾನ ನಿಲ್ದಾಣವು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಒಟ್ಟು ೭೨೭ ಎಕರೆ ವಿಸ್ತಾರದ ಈ ಯೋಜನೆಯು ಮೂಲದಲ್ಲಿ ಎಟಿಆರ್-೭೨ ಮಾದರಿಯ ವಿಮಾನ ನಿಲ್ದಾಣದ ಸ್ವರೂಪವನ್ನು ಹೊಂದಿತ್ತಷ್ಟೆ. ನಮ್ಮ ಸರಕಾರ ಬಂದ ಮೇಲೆ ಸಾಕಷ್ಟು ಕೆಲಸಗಳಾಗಿವೆ. ಮುಖ್ಯವಾಗಿ ವಿಎಫ್ಆರ್ (ಹಗಲಿನ ದೃಶ್ಯ ಆಧಾರಿತ ಹಾರಾಟ ನಿಯಮಗಳು)ಗೆ ಸಂಬಂಧಿಸಿದ ಎಲ್ಲಾ ಕಾಮಗಾರಿಗಳನ್ನೂ ೨೦೨೫ರ ಮೇ ತಿಂಗಳಲ್ಲೇ ಮುಗಿಸಲಾಗಿದೆ. ಜತೆಗೆ ೨೪.೫೦ ಕೋಟಿ ರೂ. ವೆಚ್ಚದಲ್ಲಿ ಎರಡು ಅಗ್ನಿಶಾಮಕ ವಾಹನ ಖರೀದಿಸಲಾಗಿದೆ. ವಿಮಾನ ನಿಲ್ದಾಣದ ಭದ್ರತೆ ಮತ್ತು ಸುರಕ್ಷತೆಗೆಂದು ೨.೭೬ ಕೋಟಿ ರೂ. ವೆಚ್ಚದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ಸಾಧನಗಳನ್ನು ಖರೀದಿಸಿದ್ದೇವೆ ಎಂದು ಸಚಿವರು ವಿವರಿಸಿದರು.
ಬಾಕ್ಸ್ ೪
೧.೯೬ ಲಕ್ಷ ಉದ್ಯೋಗ ಸೃಷ್ಟಿ
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಡಿ ಆಗಸ್ಟ್ಟ್-೨೦೨೫ ರಿಂದ ಜುಲೈ-೨೦೨೬ ರ ವರೆಗಿನ ಅವಧಿಯಲ್ಲಿ ಒಟ್ಟು ೧೬,೪೪೦ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆನ್ಲೈನ್ ಮೂಲಕ ಉದ್ಯಮ ನೋಂದಣಿ ಪ್ರಮಾಣ ಪತ್ರ ಪಡೆದಿರುತ್ತವೆ. ಇದರಲ್ಲಿ ೪೨ ಕೋಟಿ ೯೨ ಲಕ್ಷ ಬಂಡವಾಳ ಹೂಡಿಕೆಯಾಗಿದ್ದು, ೧ ಲಕ್ಷ ೬೯ ಸಾವಿರ ಉದ್ಯೋಗ ಅವಕಾಶಗಳು ಸೃಷ್ಠಿಯಾಗಿರುತ್ತವೆ ಎಂದರು.

