ಬಿಜ್ಜರಗಿಯಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾಯಕ, ದಾಸೋಹ ಹಾಗೂ ಸಮಾನತೆಯ ಸಂದೇಶವನ್ನು ಸಾರಿದ ದಾಸ ಸಾಹಿತ್ಯವು ಸಮಾಜದ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿದೆ. ಕನಕದಾಸರಂಥ ಮಹನೀಯರ ಸಮಾಜಮುಖಿ ಚಿಂತನೆಗಳು ಇಂದಿಗೂ ಎಲ್ಲರಿಗೂ ಮಾರ್ಗದರ್ಶಕವಾಗಿವೆ. ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ.
ರವಿವಾರ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಹಂಜಗಿಸಿದ್ಧೇಶ್ವರ, ಹಿರೋಡೇಶ್ವರ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಕನಕದಾಸ ಸರ್ಕಲ್ ಉದ್ಘಾಟಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಚಿವ ಎಂ. ಬಿ. ಪಾಟೀಲ ಅವರು ಸಮರ್ಥ ನಾಯಕರಾಗಿದ್ದು, ಜಲಸಂಪನ್ಮೂಲ ಸಚಿವರಾಗಿದ್ದಾಗ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಈ ಭಾಗದ ರೈತರ ಬಾಳಿಗೆ ಬೆಳಕಾಗಿದ್ದಾರೆ. ಕೊಟ್ಟ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಅಭಿವೃದ್ಧಿ ಮಾಡುತ್ತಾರೆ. ಈಗ ಕೈಗಾರಿಕೆ ಸಚಿವರಾಗಿ ವಿದೇಶಗಳಿಂದ ಬಂಡವಾಳ ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಬಂಡವಾಳ ಹೂಡಿಕೆ ರಾಜ್ಯಗಳಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿರುವ ಶ್ರಮಿಸುತ್ತಿದ್ದಾರೆ. ಎಲ್ಲರೂ ಅವರ ಜನಸೇವೆಯನ್ನು ಮರೆಯಬಾರದು. ಅವರಿಗೆ ಸದಾ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ಸರಕಾರದ ಪ್ರಯತ್ನಗಳ ಜೊತೆಗೆ ಜನರ ಸಹಕಾರವೂ ಅತ್ಯಂತ ಅಗತ್ಯವಾಗಿದೆ. ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ವಿಜಯಪುರ ಜಿಲ್ಲೆಯ ಜನರು ನೀಡಿದ ಶಕ್ತಿ, ಪ್ರೀತಿ ಹಾಗೂ ಸಹಕಾರವನ್ನು ತಮ್ಮ ಮೇಲೂ ಇರಿಸಿ, ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಗಳ ತತ್ವಾದರ್ಶಗಳು ನಮಗೆಲ್ಲ ಮಾದರಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುಡೆಯುತ್ತಿದ್ದೇವೆ.
ಬಿಜ್ಜರಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜನ್ಮಭೂಮಿ. ಸ್ವಾಮೀಜಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ತತ್ವಾದರ್ಶಗಳು ನಮಗೆ ಸದಾ ಪ್ರೇರಣೆಯಾಗಿದೆ. ನಮ್ಮ ಮನಸ್ಸು, ಮನೆ, ಓಣಿ, ಗ್ರಾಮ ಸ್ವಚ್ಛವಾಗಿರಬೇಕು ಎಂದು 50 ವರ್ಷಗಳ ಕಾಲ ಪ್ರವಚನಗಳ ಮೂಲಕ ಸ್ವಾಮೀಜಿಗಳು ಪ್ರತಿಪಾದಿಸಿದ್ದ ನೈರ್ಮಲ್ಯವನ್ನು ಕೇಂದ್ರ ಸರಕಾರ ಸ್ವಚ್ಛ ಭಾರತ ಹೆಸರಿನಲ್ಲಿ ಜಾರಿಗೆ ತಂದಿತು. ಸ್ವಾಮೀಜಿಗಳ ತತ್ವ ಸಿದ್ದಾಂತಗಳು, ಬಸವ, ಕನಕರ ಚಿಂತನೆಗಳಡಿ ಸಿದ್ಧರಾಮಯ್ಯನವರು ಸಿಎಂ ಆಗಿದ್ದಾಗ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು. ಶ್ರೀಗಳ ಆಶಯದಂತೆ ಈ ಭಾಗದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಅಂದಿನ ಸಿಎಂ ಸಿದ್ಧರಾಮಯ್ಯನವರು ಸಂಪೂರ್ಣ ಸಹಕಾರ ನೀಡಿದ್ದರಿಂದ ಜಲಕ್ರಾಂತಿ ಮಾಡಲು ಸಾಧ್ಯವಾಯಿತು. ಈ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ಸಿದ್ಧರಾಮಯ್ಯ ಬಂದಿಲ್ಲ. ಆದರೆ, ಅವರ ಪುತ್ರ ಮತ್ತು ಸಚಿವ ಯತೀಂದ್ರ ಸಿದ್ಧರಾಮಯ್ಯ ಪಾಲ್ಗೊಂಡಿದ್ದಾರೆ. ಬಿಜ್ಜರಗಿ ಗ್ರಾಮಸ್ಥರ ದೈವಭಕ್ತಿಯಿಂದಾಗಿ ಈ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ ಎಂದು ಸಚಿವ ಹೇಳಿದರು.
ಈ ಸಂದರ್ಭದಲ್ಲಿ ಮೂಲ ಗುರುಪೀಠ ಸರೂರ ಅಗತೀರ್ಥದ
ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿ ಹಾಲುಮತದ
ಕವಲಗುಡ್ಡ ಮತ್ತು ಹಣಮಾಪುರ ಸಿದ್ದಸಿರಿ ಸಿದ್ದಾಶ್ರಮದ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು, ಹುಲಿಜಂತಿ ಶ್ರೀ ಮಾಳಿಂಗರಾಯ ಮಹಾರಾಜರು ಮತ್ತು ಅಡಿವೆಪ್ಪ ಮಹಾರಾಜರು, ಮಖಣಾಪುರದ ಶ್ರೀ ಸೋಮೇಶ್ವರ ಮಹಾರಾಜರು, ಹಂಜಗಿಯ ಹೂವಣ್ಣ ಪೂಜಾರಿ, ಹಡಗಲಿಯ ಮಾಯಣ್ಣ ಪೂಜಾರಿ ಹಡಗಲಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮುಖಂಡರಾದ ಸಿದ್ದು ಗೌಡನವರ, ಸೋಮನಾಥ ಬಾಗಲಕೋಟ, ಬಿ. ಡಿ. ಪಾಟೀಲ ಹಂಜಗಿ, ಭೀಮರಾಯ ಮಸಳಿ, ಎ. ಎಂ. ಪಾಟೀಲ, ಎಂ. ಎಸ್. ಲೋಣಿ, ಆರ್. ಎಂ. ಮೆಂಡೇಗಾರ, ಮುದುಕು ಶಿಗ್ಗಾಂವಿ, ಸಾಬು ಕೆಂಪರಾಯಪ್ಪಗೋಳ, ಮಲ್ಲಪ್ಪ ಹಿರೇಕುರಬರ ಮುಂತಾದವರು ಉಪಸ್ಥಿತರಿದ್ದರು.

