ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ನಾಡಿನ ಜನತೆಗೆ, ಜಗತ್ತಿನ ಜನರಿಗೆ ಜ್ಞಾನದ ಬುತ್ತಿಯನ್ನು ಉಣಬಡಿಸಿ ಸಮಾಜದಲ್ಲಿ ಸಾತ್ವಿಕ ನೆಲೆಗಟ್ಟಿನಲ್ಲಿ ಜೀವನ ಶೈಲಿಯನ್ನು ಆದರ್ಶಮಯವಾಗಿ ಅಳವಡಿಸಿಕೊಂಡು ಲಕ್ಷಾಂತರ ಜನರ ಮನದಲ್ಲಿ ಅಚ್ಚಳಿಯದೇ ಶಾಶ್ವತವಾಗಿ ನೆಲೆ ನಿಂತವರು ಪೂಜ್ಯ ಲಿಂ. ಶರಣ ದೈವಾಂಶ ಸಂಭೂತರಾದ ಸಿದ್ದೇಶ್ವರ ಮಹಾಸ್ವಾಮಿಗಳು ಜನಿಸಿದ ಈ ನೆಲವೇ ಪಾವನವಾಗಿದೆ ಎಂದು ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹಿರೇಮಠದ ಸಭಾಂಗಣದಲ್ಲಿ ನಡೆದ ಖ್ಯಾತ ಸಾಹಿತಿ ಬಿ.ಆರ್. ಪೋಲಿಸ್ಪಾಟೀಲ ಅವರು ರಚಿಸಿದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳ ಜೀವನ ಚರಿತ್ರೆಯ ನಾಟಕದ ಪುಸ್ತಕದ ಬಿಡುಗಡೆ ಸಮಾರಂಭದ ಸಾನಿದ್ಯವಹಿಸಿ ಮಾತನಾಡುತಿದ್ದರು.
ಕಿಸೆಯಿಲ್ಲದ ಶುಭ್ರ ವಸ್ತ್ರ ಧಾರಿಯಾಗಿ ನಾಡಿನ ಸಂತ ಶ್ರೇಷ್ಠರಾಗಿ ಬದುಕಿನ ಜೀವನ ಶೈಲಿಯನ್ನು ನಮ್ಮೆಲ್ಲರಿಗೂ ತೋರಿಸಿಕೊಟ್ಟ ಮಹಾನ್ ತತ್ವಜ್ಞಾನಿಗಳು ಸಿದ್ದೇಶ್ವರರು ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ವಿರಕ್ತರಲ್ಲಿ ವಿರಕ್ತರಾಗಿ ಜೋಳಿಗೆಯನ್ನೇ ಹಿಡಿಯದೇ ಭಕ್ತರು ಸಮರ್ಪಿಸಿದ ಕಾಣಿಕೆಯನ್ನು ಭಕ್ತರಿಗೆ ಅರ್ಪಿಸಿದ ಸಿದ್ದೇಶ್ವರ ಶ್ರೀಗಳು ಸದಾಕಾಲ ಸ್ಮರಣೀಯರು ಎಂದರು.
ನಾಟಕಕಾರ ಬಿ.ಆರ್. ಪೋಲೀಸ್ಪಾಟೀಲ ಮಾತನಾಡಿ, ಮಾನವರು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನಡೆ ಬರಲು ಜ್ಞಾನದ ದೀವಿಗೆಯನ್ನು ಹಚ್ಚಿದವರು ಜ್ಞಾನಜ್ಯೋತಿ ಸಿದ್ದೇಶ್ವರರು ಎಂದರು.
ಈ ಸಂಧರ್ಭದಲ್ಲಿ ಚಿನ್ನಪ್ಪ ಗಿಡ್ಡಪ್ಪಗೋಳ, ಬಿ.ಎಸ್. ಹಂಗರಗಿ, ಟಿ.ಟಿ. ಹಗೇದಾಳ ಮಾತನಾಡಿದರು. ಈರಣಗೌಡ ಕೋಮಾರ, ಚಿತ್ರಕಲಾ ಶಿಕ್ಷಕ ಎಸ್.ಎಮ್. ಡಾಂಗೆ, ಈರಯ್ಯ ಮಠಪತಿ, ಪರಪ್ಪ ಗು ಗಣಿ, ವೀರಭದ್ರಪ್ಪ ಬಾಗಿ, ಬಸಪ್ಪ ಕೊಠಾರಿ ಅನೇಕ ಮಹಣೀಯರು ಪಾಲ್ಗೊಂಡಿದ್ದರು.
ಉಪನ್ಯಾಸಕ ಮಂಜುನಾಥ ಮಟ್ಯಾಳ ಸ್ವಾಗತಿಸಿ ನಿರೂಪಿಸಿದರು. ಪರಶುರಾಮ ಗಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

