ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆˌ (ಜಮಖಂಡಿ): ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಮೀರಿಸುವಂತಹ ಸಾಧನೆ ಮಾಡುವ ಗುರಿ ಹೊಂದಬೇಕು. ಇಂದಿನ ಯುವಜನತೆ ಬುದ್ಧಿವಂತರಾಗಿದ್ದು, ಕೇವಲ ಪದವಿ ಪಡೆಯುವುದಷ್ಟೇ ಜೀವನದ ಗುರಿಯಾಗಬಾರದು. ಸಾಧಿಸಬೇಕೆಂಬ ಛಲವನ್ನು ಗುರಿ ತಲುಪುವವರೆಗೂ ಉಳಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಗರದ ಮೈಗೂರ ರಸ್ತೆಯ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲ್ಲೂಕು ವೀರಶೈವ ಪಂಚಮಸಾಲಿ ಸಂಘ ಹಾಗೂ ರಾಣಿ ಚನ್ನಮ್ಮ ಸಹಕಾರ ಬ್ಯಾಂಕ್ ಆಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಸಾಧನೆಯೊಂದಿಗೆ ವಿನಯವನ್ನೂ ಬೆಳೆಸಿಕೊಳ್ಳಬೇಕು. ಒಂದು ಬಾರಿ ಸಾಧನೆ ಮಾಡಿದರೆ ಸಾಕೆಂದು ಭಾವಿಸದೆ, ಜೀವನದ ಪ್ರತಿಯೊಂದು ಮೆಟ್ಟಿಲಿನಲ್ಲೂ ಸಾಧನೆ ಮಾಡಬೇಕು. ತಮ್ಮ ಸಾಧನೆ ಇತರರಿಗೆ ಮಾದರಿಯಾಗಬೇಕು. ಪಾಲಕರು ಹಾಗೂ ಸಮಾಜ ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಗೌರವ ನೀಡಿ, ಸಮಾಜದ ಋಣ ತೀರಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಮುರುಗೇಶ್ ನಿರಾಣಿ ಹೇಳಿದರು.
ಚನ್ನಮ್ಮನ ಪ್ರತಿಮೆ ಸ್ಥಾಪನೆಗೆ ಸಿದ್ಧತೆ: ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎನ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಎಲ್ಬಿಸಿ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮನ ಪ್ರತಿಮೆ ಸ್ಥಾಪಿಸಲು ಸಿದ್ಧತೆ ನಡೆಸಲಾಗಿದೆ. ಈ ಕುರಿತು ಸಮಿತಿ ರಚಿಸಲಾಗಿದ್ದು, ಪ್ರತಿಮೆ ಸ್ಥಾಪನೆಗೆ ಸಮಾಜದ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆಲಗೂರ ಶಾಂತಮೂರ್ತಿ ಲಕ್ಷ್ಮಣಮುತ್ಯಾ, ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಓಲೆಮಠದ ಆನಂದ ದೇವರು ಸಾನ್ನಿಧ್ಯ ವಹಿಸಿದ್ದರು.
ಉದ್ಯಮಿ ಸಂಗಮೇಶ ನಿರಾಣಿ, ಬಸವರಾಜ ದಲಾಲ, ಸಿ.ಪಿ. ಜನವಾಡ, ಅಪ್ಪಾಸಾಹೇಬ ಜನಗೌಡ, ಸಂಗಣ್ಣ ಪಿಡಶೆಟ್ಟಿ, ನೌಕರ ಸಂಘದ ಅಧ್ಯಕ್ಷ ಮಹಾಂತೇಶ ನರಸನಗೌಡ್ರ, ರಾಣಿ ಚನ್ನಮ್ಮ ಬ್ಯಾಂಕ್ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಗಿರೀಶ ಮನಗೂಳಿ, ಯುವ ಘಟಕದ ಅಧ್ಯಕ್ಷ ವಿನಾಯಕ ಕಾಸರ, ಸುನಿತಾ ಬಳಗಾರ, ಪ್ರಭು ಜನವಾಡ, ಈಶ್ವರ ನ್ಯಾಮಗಡ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

