ವಿವಿಧ ನಿಗಮ ಮಂಡಳಿಗಳ ನೇಮಕಾತಿಗೆ ಅ.೨೮ ಹಾಗೂ ಅ.೨೯ರಂದು ಸ್ಪರ್ಧಾತ್ಮಕ ಪರೀಕ್ಷೆ
ವಿಜಯಪುರ: ವಿವಿಧ ನಿಗಮ ಮಂಡಳಿಗಳ ನೇಮಕಾತಿಗೆ ಜಿಲ್ಲೆಯ ೬೪ ಪರೀಕ್ಷಾ ಕೇಂದ್ರಗಳಲ್ಲಿ ಅಕ್ಟೋಬರ್ ೨೮ ಹಾಗೂ ೨೯ ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚನೆ ನೀಡಿದರು.
ನಗರದ ಗಾಂಧಿವೃತ್ತದಲ್ಲಿರುವ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜ್ ಶಾರದಾ ಭವನದಲ್ಲಿ ಗುರುವಾರ ಆಯೋಜಿಸಿದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವ್ಯವಸ್ತಿತ ಪರೀಕ್ಷೆಗಾಗಿ ೨೧ ಮಾರ್ಗಾಧಿಕಾರಿಗಳ ತಂಡ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ವೀಕ್ಷಕರಂತೆ ೬೪ ವೀಕ್ಷಕರು ಪ್ರತಿ ಪರೀಕ್ಷಾ ಕೇಂದ್ರಕ್ಕೆ ೦೧ ಉಪ ಮುಖ್ಯ ಅಧೀಕ್ಷಕರು ೦೧ ಪ್ರಶ್ನೆಪತ್ರಿಕೆ ಪಾಲಕರು ಮತ್ತು ೦೧ ವಿಶೇಷ ಸ್ಥಾನಿಕ ಜಾಗೃತ ದಳದ ಸದಸ್ಯರನ್ನು ನೇಮಕ ಮಾಡಲಾಗಿದೆ. ಅಕ್ಟೋಬರ್ ೨೮ರಂದು ನಡೆಯುವ ಪತ್ರಿಕೆ-೧ ಪರೀಕ್ಷೆಗೆ ೧೪೨೮೦ ಹಾಗೂ ಪತ್ರಿಕೆ-೨ ಪರೀಕ್ಷೆ ೧೪೩೭೫, ಅಕ್ಟೋಬರ್ ೨೯ ರಂದು ನಡೆಯುವ ಪತ್ರಿಕೆ-೧ ಪರೀಕ್ಷೆ ೨೪೧೮೯ ಹಾಗೂ ಪತ್ರಿಕೆ-೨ ಪರೀಕ್ಷೆಗೆ ೨೪೧೮೭ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು, ಪರೀಕ್ಷಾ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾ ಖಜಾನೆಯಿಮದ ಪರೀಕ್ಷಾ ಕೇಂದ್ರಗಳಿಗೆ ರಹಸ್ಯ ಬಂಡಲ್ಗಳನ್ನು ರವಾನೆ ಮಾಡಲು ನಿಯೋಜಿಸಿದ ಮಾರ್ಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ತಮ್ಮ ವಾಹನದಲ್ಲಿಯೇ ರಹಸ್ಯ ಬಂಡಲ್ಗಳನ್ನು ಸರಬರಾಜು ಮಾಡಬೇಕು. ಪರೀಕ್ಷೆ ಮುಗಿದ ನಂತರ ಮರಳಿ ಜಿಲ್ಲಾ ಖಜಾನೆಗೆ ಒಪ್ಪಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಅಕ್ಟೋಬರ್ ೨೮ ಹಾಗೂ ೨೯ ರಂದು ಜಿಲ್ಲೆಯ ೧೧ ತಾಲೂಕುಗಳ ಒಟ್ಟು ೬೪ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಅಕ್ಟೋಬರ್ ೨೮ ರಂದು ಆಪ್ತ ಕಾರ್ಯದರ್ಶಿ-ಹಿರಿಯ ಸಹಾಯಕರು, ಪ್ರಥಮ ದರ್ಜೆ ಸಹಾಯಕ, ಸೇಲ್ಸ್ ಮೇಲ್ವಿಚಾರಕರು ಮುಂತಾದ ಸಮನಾದ ಹುದ್ದೆಗಳಿಗೆ ಬೆಳಿಗ್ಗೆ ೧೦-೩೦ರಿಂದ ಮಧ್ಯಾಹ್ನ ೧೨-೩೦ರವರೆಗೆ ಪತ್ರಿಕೆ-೧ ಹಾಗೂ ಮಧ್ಯಾಹ್ನ ೨-೩೦ರಿಂದ ಸಂಜೆ ೪-೩೦ರವರೆಗೆ ಪತ್ರಿಕೆ-೨ ಪರೀಕ್ಷೆಗಳು ಹಾಗೂ ಅಕ್ಟೋಬರ್ ೨೯ ರಂದು ದ್ವೀತಿಯ ದರ್ಜೆ ಸಹಾಯಕರು/ ಕಿರಿಯ ಸಹಾಯಕರು ಮುಂತಾದ ಸಮನಾದ ಹುದ್ದೆಗಳಿಗೆ ಬೆಳಿಗ್ಗೆ ೧೦-೩೦ರಿಂದ ಮಧ್ಯಾಹ್ನ ೧೨-೩೦ರವರೆಗೆ ಪತ್ರಿಕೆ-೧ ಹಾಗೂ ಮಧ್ಯಾಹ್ನ ೨-೩೦ರಿಂದ ಸಂಜೆ ೪-೩೦ರವರೆಗೆ ಪತ್ರಿಕೆ-೨ ಪರೀಕ್ಷೆ ಜರುಗಲಿವೆ.
ಸಭೆಯಲ್ಲಿ ಖಜಾನಾಧಿಕಾರಿ ಹಣಮಂತ ಕಾತರಕಿ, ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪಿ.ಹೊಸಮನಿ, ಡಿವೈಎಸ್ಪಿ ಬಸವರಾಜ ಯಲಿಗಾರ, ಪ್ರಾಂಶುಪಾಲ ಸಿ.ಬಿ.ನಾಟಿಕಾರ ಸೇರಿದಂತೆ ವಿವಿಧ ತಹಶೀಲ್ದಾರರು, ಪರೀಕ್ಷಾ ಮೇಲ್ವಿಚಾರಕರು, ವೀಕ್ಷಕರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.