ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
“ಸಂತನೆಂದರೆ ಯಾರು ದಿವ್ಯತೆಯ ಅರಿತವನು, ಸರಳತೆಯ ಸೂತ್ರದಲಿ ಸುಖವ ಕಂಡವನು, ಮಮತೆ ಬಂಧನ ಕಳಚಿ ಬಲು ದೂರ ನಿಂತವನು…” ಎಂಬ ಹಾಡನ್ನು ತಾವು ಕೇಳಿದಾಗ ಮನದಲ್ಲಿ ಭಕ್ತಿಯ ಭಾವ ಮೂಡಿ ಬಂದಿರಬಹುದು. ಆಷಾಢ ಮಾಸದ ಹುಣ್ಣಿಮೆಯಂದು ಜಗತ್ತಿನೆಲ್ಲೆಡೆ ಆಚರಿಸಲಾಗುವ ಈ ಗುರು ಪೂರ್ಣಿಮೆ ಕಾರ್ಯಕ್ರಮ ಮೂಲಕ ಶಿಷ್ಯರು ತಮ್ಮ ಗುರುಗಳಿಗೆ ಕೃತಜ್ಞತೆ ಮತ್ತು ಗೌರವ ಸಲ್ಲಿಸುತ್ತಾರೆ. ಗುರು-ಶಿಷ್ಯ ಪರಂಪರೆಯನ್ನು ಸ್ಮರಿಸುವ ಮತ್ತು ಮಾರ್ಗದರ್ಶನಕ್ಕಾಗಿ ಕೃತಜ್ಞತಾ ಭಾವ ವ್ಯಕ್ತಪಡಿಸುವ ಸುದಿನವೇ ಈ ಗುರು ಪೂರ್ಣಿಮೆ. ಗುರುವಿಗಿಂತ ಶ್ರೇಷ್ಠವಾದ ದೇವರಿಲ್ಲ. ಅಜ್ಞಾನವೆಂಬ ಅಂಧಕಾರದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುವ ದಾರಿ ದೀಪವೇ ಗುರು. “ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಃಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ” ಗುರುವಿನ ಮಹತ್ವವನ್ನು ಸಾರುವ ಈ ಶ್ಲೋಕದಂತೆ ನಮಗೆ ಗುರುವಿನ ಸ್ಥಾನವು ದೇವರಿಗೆ ಸಮನಾದದ್ದು ಎಂದು ಅರ್ಥೈಸುತ್ತದೆ. ಆಚಾರ್ಯ ದೇವೋ ಭವಃ ಎಂಬ ಸಂಸ್ಕೃತಿ ನಮ್ಮದು. ಜನ್ಮ ನೀಡಿದ ತಾಯಿ, ಬದುಕು ಕಲಿಸಿದ ತಂದೆ ಮತ್ತು ಕಲ್ಲಿನಂತಿರುವ ನಮಗೆ ಸಂಸ್ಕಾರ ನೀಡಿ ಶಿಲೆ ಅಥವಾ ಮೂರ್ತಿಗಳನ್ನಾಗಿ ರೂಪ ನೀಡಿದ ಗುರು ಈ ಮೂವರನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಗುರು ಇಲ್ಲದೇ ಯಾವುದೂ ಸಾಧ್ಯವಿಲ್ಲ.

ಗುರು ಎಂದರೆ ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಿ, ಸುಜ್ಞಾನವೆಂಬ ಜ್ಞಾನದ ಪ್ರಭೆಯನ್ನು ಬೆಳಗಿಸುವ ಮತ್ತು ಸನ್ಮಾರ್ಗದತ್ತ ಕೊಂಡೊಯ್ಯುವ ಮಹಾನ್ ಶಕ್ತಿ ಎಂದು ಹೇಳಬಹುದು. ಜ್ಞಾನ, ವಿವೇಕ ಮತ್ತು ಮಾರ್ಗದರ್ಶನ ನೀಡುತ್ತಾ, ಬದುಕಿನಲ್ಲಿ ಬೆಳಕು ಚೆಲ್ಲಿದ ಮತ್ತು ದಾರಿ ತೋರಿದ ಶಿಕ್ಷಕರು ಮತ್ತು ಗುರುಗಳಿಗೆ ಸಲ್ಲಿಸುವ ಅಪ್ರತಿಮವಾದ ಗೌರವವನ್ನು ಸಲ್ಲಿಸಲು ಈ ಗುರು ಪೂರ್ಣಿಮೆಯನ್ನು ಅತ್ಯಂತ ಧಾರ್ಮಿಕವಾಗಿ ಆಚರಿಸಲಾಗುತ್ತಿದೆ.
ಈ ದಿನದಂದು ಭಾರತದಲ್ಲಿ ವಿಶೇಷವಾಗಿ ತನ್ನ ಅಧ್ಯಾತ್ಮಿಕ ಅಥವಾ ಶೈಕ್ಷಣಿಕ ಗುರುಗಳ ನಮನಗಳನ್ನು ಸಲ್ಲಿಸಲಾಗುತ್ತದೆ. ಅಷ್ಟೇ ಅಲ್ಲ ನಮ್ಮ ದೇಶದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತ ರಚಿಸಿದ ಮಹರ್ಷಿ ವೇದ ವ್ಯಾಸರ ಜನ್ಮದಿನವನ್ನು ಈ ದಿನದಂದೇ ಆಚರಿಸಲಾಗುತ್ತಿರುವುದು ಇನ್ನೊಂದು ವಿಶೇಷ.
ಈ ದಿನವು ಜ್ಞಾನ, ಬುದ್ದಿವಂತಿಕೆ ಮತ್ತು ಗುರುವಿನಿಂದ ಶಿಷ್ಯನಿಗೆ ಅಧ್ಯಾತ್ಮಿಕ ಬೋಧಿಸಿದ ತತ್ವದ ಸಾರ-ಸಂದೇಶದ ಬಗ್ಗೆ ತಿಳಿಸಿಕೊಡುತ್ತದೆ.

ಆದ್ದರಿಂದ ರಾಷ್ಟçಕ್ಕೆ ಉತ್ತಮ ನಾಗರೀಕರು ಮತ್ತು ಸತ್ಪçಜೆಗಳನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಅನನ್ಯ ಮತ್ತು ಮಹತ್ವಪೂರ್ಣವಾಗಿದೆ. ಶಿಕ್ಷಕರು ಕೇವಲ ಇಂದಿನ ಪೀಳಿಗೆಗೆ ಅಂಧಕಾರವೆಂಬ ಅಜ್ಞಾನವನ್ನು ಹೊಡೆದೋಡಿಸಿ ಜ್ಞಾನವೆಂಬ ಪ್ರಭೆಯನ್ನು ಬೆಳಗಲು ಹಾಗೂ ಎಲ್ಲೆಡೆ ಪಸರಿಸುವಂತೆ ಹಾಗೂ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ವ್ಯಕ್ತಿತ್ವ ವಿಕಸನಗೊಳ್ಳುವಲ್ಲಿ ಭದ್ರ ಅಡಿಪಾಯ ಹಾಕುವವರೇ ಶಿಕ್ಷಕರು. ಅವರು ತಮ್ಮ ನಿಸ್ವಾರ್ಥ ಸೇವೆಯ ಮೂಲಕವೇ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ-ಸಂಸ್ಕಾರ, ನಡೆ-ನುಡಿ, ಆಚಾರ-ವಿಚಾರ, ಪ್ರಾಮಾಣಿಕತೆ, ಕಾರ್ಯದಲ್ಲಿ ಶ್ರದ್ಧೆ, ಮಾನವೀಯ ಸಂಬಂಧಗಳು, ಜೀವನ ಮೌಲ್ಯಗಳು, ಆದರ್ಶ ಮತ್ತು ತತ್ವ-ಸಿದ್ಧಾಂತಗಳAತಹ ಮೌಲ್ಯಗಳ ಧಾರಣೆ ಮಾಡಿ ಬದುಕು ಬಂಗಾರಮಯವನ್ನಾಗಿಸಲು ಕಾರ್ಯನಿರ್ವಹಿಸಬೇಕಾಗಿದೆ.
ಕೊನೆಯ ನುಡಿ
ಅಲ್ಲಮ ಪ್ರಭು ಅವರ ವಚನದಲ್ಲಿ “ಗುರುವಿಡಿದ ಅರಿವು ಅರಿವಲ್ಲ, ಲಿಂಗವಿಡಿದ ಅರಿವು ಅರಿವಲ್ಲ, ಇಲ್ಲದ ಗುರು ಇಲ್ಲದ ಲಿಂಗ, ಕಲ್ಪಿತಕ್ಕೆ ಅರಿವಹುದೆ? ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ… ಎಂಬ ವಚನದಂತೆ, ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ. ಜ್ಞಾನದಿಂದ ನಮ್ಮ ಹಾದಿಯನ್ನು ಬೆಳಗಿಸುವ ಶಕ್ತಿಯ ಚಿಲುಮೆಯೇ ಗುರು. ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ. ಅದಕ್ಕಾಗಿ ಜೀವನದಲ್ಲಿ ಸಾರ್ಥಕ್ಯ ಪಡೆಯಲು ಗುರು ಅವಶ್ಯ ಮತ್ತು ತನ್ನ ಅರಿವೇ ಗುರುವಾಗಬೇಕು ಎಂದು ಉಲ್ಲೇಖಿಗೊಂಡಿದೆ. ನಮ್ಮ ಜೀವನದ ಗುರಿ ನಿರ್ಧರಿಸಲು ನೆರವಾಗಿ ಸಾಧನೆಗೆ ಗೌರವದ ಗರಿಯಾದ ಎಲ್ಲ ಗುರುವರ್ಯರಿಗೆ ಹೃದಯಪೂರ್ವಕ ಮತ್ತು ಭಕ್ತಿ-ಭಾವದಿಂದ ಸಲ್ಲಿಸುವ ಕೃತಜ್ಞತೆಯಾಗಿದೆ. ಗುರುಗಳನ್ನು ಪೂಜಿಸುವ, ಗೌರವಿಸುವ ಕಾರ್ಯವು ದೈನಂದಿನವಾಗಿ ನಡೆಯಬೇಕು. ನಮ್ಮ ಬದುಕು-ಭವಿಷ್ಯ ರೂಪಿಸಿ ನಮ್ಮನ್ನು ಸನ್ಮಾರ್ಗದತ್ತ ಮುನ್ನಡೆಸುವ ಮತ್ತು ದಾರಿ ತೋರುವ ಗುರುವಿನ ಸ್ಮರಣೆ ಸದಾಕಾಲ ಮಾಡುವಂತಾಗಲಿ. ಗುರು ಪೂರ್ಣಿಮೆ ದಿನದಂದು ಮಾತ್ರ ಗುರುವಿಗೆ ಕೃತಜ್ಞತೆ ಸಲ್ಲಿಸುವಂತಾಗಬಾರದು. ನಮ್ಮ ಬದುಕಿಗೆ ದಾರಿ ತೋರಿದ ಗುರುಗಳಿಗೆ ಪ್ರತಿನಿತ್ಯ ಗೌರವಿಸುವಂತಾಗಬೇಕು.

ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಗುರು ಪೂರ್ಣಿಮೆಯ ವಿಶೇಷತೆ:
ವಿಶೇಷವಾಗಿ ನಮ್ಮ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಗುರು ಪೂರ್ಣಿಮೆಯನ್ನು ಜುಲೈ ೨೯ ರಂದು ಬಹಳ ಸಂಭ್ರಮ ಮತ್ತು ಭಕ್ತಿಯ ಪರಾಕಾಷ್ಠೆಯೊಂದಿಗೆ ಆಚರಿಸಲಾಗುತ್ತದೆ.
ಈ ಗುರು ಪೂರ್ಣಿಮೆಯ ದಿನದಂದು ನಡೆದಾಡುವ ದೇವರು, ನಾಡು ಕಂಡ ಶ್ರೇಷ್ಠ ಸಂತ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಬುದ್ಧೀಜಿ ಹಾಗೂ ಅವರ ಅಧ್ಯಾತ್ಮಿಕ ಗುರುಗಳಾಗಿದ್ದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಲಾಗುತ್ತದೆ.
ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು ಸೇರಿದಂತೆ ಲಕ್ಷಾಂತರ ಭಕ್ತರು ಭಕ್ತಿ-ಭಾವದಿಂದ ಭಾವ ಪರವಶರಾಗಿ ತಮ್ಮ ಗುರುವರ್ಯರಿಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತಾರೆ.
ಸರಳತೆಯ ಪ್ರತೀಕ, ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷ ಜ್ಞಾನ ಯೋಗಿ, ಜೇಬಿಲ್ಲದ ಅಂಗಿ ತೊಟ್ಟ ಸಂತ, ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿದ್ದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಬುದ್ಧೀಜಿಯವರು ತಮ್ಮ ಪ್ರವಚನಗಳ ಮೂಲಕವೇ ಜನರಿಗೆ ಅಧ್ಯಾತ್ಮಿಕ ಮತ್ತು ಜೀವನ ಸಂದೇಶಗಳ ಬೋಧಿಸುತ್ತಿದ್ದವರು. ಸಮಾಜವನ್ನು ತಿದ್ದುವ ಸ್ವಾಮೀಜಿಗಳು ಹೇಗಿರಬೇಕು ಎನ್ನುವುದಕ್ಕೆ ನಿದರ್ಶನವಾಗಿದ್ದರು. ಸದಾ ಪರಿಸರ, ಪ್ರಕೃತಿ, ಪ್ರಾಣಿ-ಪಕ್ಷಿ, ಗಿಡ-ಮರ ಮತ್ತು ನಿಸರ್ಗದ ಕೊಡುಗೆಗಳನ್ನು ಉದಾಹರಿಸುವದರ ಮೂಲಕವೇ ಅದೇಷ್ಟೋ ಜನರಿಗೆ ದಾರಿ ದೀಪವಾಗಿ ಜೀವನಕ್ಕೆ ಸ್ಪೂರ್ತಿಯಾಗಿದ್ದವರು. ಜ್ಞಾನ ದಾಸೋಹ ಮತ್ತು ಅನ್ನ ದಾಸೋಹದ ಮೂಲಕವೇ ಹೆಸರುವಾಸಿಯಾದ ಈ ಜ್ಞಾನ ಯೋಗಾಶ್ರಮದಲ್ಲಿ ನಿರಂತರವಾಗಿ ಅಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮ ಮತ್ತು ಚಿಂತನಾಗೋಷ್ಠಿಗಳು ಜರುಗುತ್ತವೆ. ಮಹಾ ಪ್ರಸಾದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸ್ವಯಂ ಸ್ಪೂರ್ತಿಯಿಂದ ಭಕ್ತಿಯ ಸೇವೆಯನ್ನು ಸಲ್ಲಿಸುತ್ತಾರೆ.
ಗುರು ಪೂರ್ಣಿಮೆಯ ದಿನದಂದು ಜೀವನದಲ್ಲಿ ಮಾತೃ ಹೃದಯದ ಪ್ರೀತಿ, ಕರುಣೆ, ತ್ಯಾಗ ಮತ್ತು ಜ್ಞಾನ, ಅನುಭವಗಳಿಂದ ಜೀವನದ ಸಾರ್ಥಕತೆಯ ಬಗ್ಗೆ ಬೋಧಿಸಿದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಜಿಲ್ಲೆಯ ಹಲವಾರು ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಮಹಿಳೆಯರು ಗೌರವ ಪೂರ್ವಕವಾದ ನಮನಗಳನ್ನು ಸಲ್ಲಿಸುತ್ತಾರೆ.
ಲಕ್ಷೋಪಲಕ್ಷ ಭಕ್ತರು ಗುರು ಪೂರ್ಣಿಮೆಯ ದಿನದಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇಡೀ ಜಗತ್ತಿಗೆ ಅಧ್ಯಾತ್ಮ ಜ್ಞಾನಧಾರೆಯ ಮೂಲಕ ಬೆಳಕು ಚೆಲ್ಲಿದ ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಅವರ ಗುರುಗಳಾಗಿದ್ದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆಗೆ ಭಕ್ತಿ-ಭಾವದೊಂದಿಗೆ ನಮನಗಳನ್ನು ಸಲ್ಲಿಸುತ್ತಿರುವ ಒಂದು ವಿಶೇಷತೆಯಾಗಿದೆ.


