೨೧ ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನ್ನಡ ನಾಡಿನ ಪ್ರತಿ ವ್ಯಕ್ತಿಗೂ ಕನ್ನಡ ನಾಡು-ನುಡಿ, ನೆಲ-ಜಲದ ಅಭಿಮಾನ ಇರಬೇಕು. ಅಂದಾಗ ಮಾತ್ರ ಕನ್ನಡ ನಾಡಿನ ಹಿರಿಮೆ-ಗರಿಮೆಯನ್ನು ದೇಶಾದ್ಯಂತ ಪಸರಿಸಲು ಸಾಧ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ೨೧ನೆಯ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಿರಿಯರು ಹಾಗೂ ಮಕ್ಕಳ ಸಾಹಿತಿಗಳು ಸಾಹಿತ್ಯ ಚಟುವಟಿಕೆಗಳಲ್ಲಿ ಸಾಕಷ್ಟು ಕೃಷಿ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ರಾಜ್ಯೋತ್ಸವ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಹ.ಮ ಪೂಜಾರ ಗುರುಗಳನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಿಂದಗಿ ಜನತೆ ಹಾಗೂ ಸಾಹಿತ್ಯಾಸಕ್ತರಿಗೆ ಅತ್ಯಂತ ಹರುಷ ತಂದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನ ಆಗಮಿಸುವ ಕಾರಣ ಊಟೋಪಹಾರ, ಆಸನಗಳ ವ್ಯವಸ್ಥೆ ಹಾಗೂ ಅತಿಥಿಸತ್ಕಾರಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು. ಅಲ್ಲದೇ ೧೪ವರ್ಷಗಳ ನಂತರ ಸಿಂದಗಿ ನಗರಕ್ಕೆ ಸಾಹಿತ್ಯ ಸಮ್ಮೇಳನ ನಡೆಸುವ ಸುಯೋಗ ಕೂಡಿ ಬಂದಿದ್ದು ಸಂತಸ. ಸಿಂದಗಿಯ ಎಲ್ಲ ಕನ್ನಡ ಅಭಿಮಾನಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಮ್ಮೇಳನವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಬೇಕು.
ಈ ಕಾರ್ಯಕ್ರಮವು ಹಲವಾರು ವೈಶಿಷ್ಟತೆಗಳಿಂದ ಕೂಡಿದ್ದು ವಿವಿಧ ಕಲಾತಂಡಗಳು, ಜಾನಪದ ಕಲಾವಿದರು, ಸೇರಿದಂತೆ ಹಲವಾರು ಕಲಾತಂಡಗಳು ಕಲಾಭಿಮಾನಿಗಳನ್ನು ರಂಜಿಸಲಿವೆ. ತಾಲೂಕಿನ ಎಲ್ಲಾ ಅಧಿಕಾರಿ ವರ್ಗದ ಸಾಕಾರದ ಜೊತೆಗೆ ಶಾಸಕರಾಗಿ ತಾವು ಕೂಡ ಸಮ್ಮೇಳನಕ್ಕೆ ಬೇಕಾದ ಸರ್ವ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಈಗಾಗಲೇ ಸಮ್ಮೇಳನ ತಯಾರಿಯನ್ನು ಅದ್ದೂರಿಯಾಗಿ ನಡೆಸಲಾಗುತ್ತಿದ್ದು, ಕನ್ನಡ ಅಭಿಮಾನಿಗಳಿಂದ ಅತ್ಯಂತ ಸಕಾರಾತ್ಮಕ ಬೆಂಬಲ ವ್ಯಕ್ತವಾಗುತ್ತಿದೆ. ಸಮ್ಮೇಳನದ ಮುಖ್ಯ ವೇದಿಕೆಗೆ ಸಿಂದಗಿಯ ನೀರಾವರಿ ಹರಿಕಾರ ಮಾಜಿ ಸಚಿವ ದಿ. ಎಂ.ಸಿ.ಮನಗೂಳಿಯವರ ಹೆಸರಿಡಲಾಗಿದ್ದು, ನಗರದ ಮುಖ್ಯ ದ್ವಾರಗಳಿಗೆ ಮಹಾಪುರುಷರ ಹೆಸರುಗಳನ್ನು ಇಟ್ಟು ಗೌರವ ಸೂಚಿಸುವ ಕೆಲಸ ಮಾಡಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಜಾತಿ, ಮತ, ಪಂಥ, ಪಕ್ಷ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಪ್ರಯತ್ನ ಮಾಡಲಾಗಿದೆ. ಅದಾಗ್ಯೂ ಹಲವರ ಹೆಸರುಗಳು ಉಳಿದುಕೊಂಡಿದ್ದರೆ ಅಥವಾ ಮೇಲೆ ಕೆಳಗೆಯಾಗಿದ್ದರೆ ಮನ್ನಿಸಬೇಕು. ಮುಂದಿನ ದಿನಗಳಲ್ಲಿ ಅಂತಹ ತಪ್ಪುಗಳು ಸಂಭವಿಸಿದಂತೆ ನೋಡಿಕೊಳ್ಳಲಾಗುತ್ತದೆ ಎಂದ ಅವರು ಸಮ್ಮೇಳನದ ಯಶಸ್ಸಿಗೆ ಸಹಕರಿಸಲು ವಿನಂತಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ವೈ.ಸಿ.ಮಯೂರ, ಕಸಾಪ ಗೌ.ಕಾರ್ಯದರ್ಶಿ ಆನಂದ ಶಾಬಾದಿ ಮಾತನಾಡಿ, ಪತ್ರಿಕಾ ಬಳಗದ ಎಲ್ಲ ಮಿತ್ರರು ತಮ್ಮ ಪತ್ರಿಕೆಗಳಲ್ಲಿ ಸುದ್ದಿಗಳನ್ನು ಪ್ರಕಟಿಸಿ ಪ್ರಚಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಭಾಜನರಾಗಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಗೌರವ ಸಲಹೆಗಾರ ಅಶೋಕ ಗಾಯಕವಾಡ, ಅಶೋಕ ಅಲ್ಲಾಪುರ, ಮಲ್ಲಣ್ಣ ಸಾಲಿ, ಶಾಂತು ರಾಣಾಗೋಳ, ಸಂದೀಪ ಚೌರ, ನೂರುಅಹ್ಮದ್ ಅತ್ತಾರ, ಸುನಂದಾ ಯಂಪೂರೆ, ಸೈನಾಬಿ ಮಸಳಿ, ಜಯಶ್ರೀ ಕುಲಕರ್ಣಿ, ಪುರುಷೋತ್ತಮ ಕುಲಕರ್ಣಿ ಸೇರಿದಂತೆ ಸಾಹಿತ್ಯಾಭಿಮಾನಿಗಳು ಹಾಗೂ ಪದಾಧಿಕಾರಿಗಳು ಇದ್ದರು.

